ಬೆಂಗಳೂರು: ‘ನಮ್ಮ ಎದೆಗೂಡಿನಲ್ಲಿ ಕನ್ನಡವನ್ನು ತುಂಬಿಕೊಂಡು, ಪ್ರತಿ ಕನ್ನಡಿಗರ ಹೃದಯದಲ್ಲಿ ಕನ್ನಡದ ದೀಪವನ್ನು ಬೆಳಗಿಸಬೇಕಾದ ಅಗತ್ಯವಿದೆ’ ಎಂದು ಸಾಹಿತಿ ಪ್ರೊ.ಅ.ರಾ.ಮಿತ್ರ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದ ಸರ್ಕಾರಿ ರಾಮ್ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಪ್ರಾಚೀನ ಕಾವ್ಯ ರಸಗ್ರಹಣ ಶಿಬಿರ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹೊರಗಿನವರಿಗೆ, ಹೊರದೇಶದವರಿಗೆ ನಮ್ಮ ಭಾಷೆಯ ಬಗೆಗೆ ಪ್ರೀತಿಯಿದೆ. ಆದರೆ, ನಮ್ಮವರಿಗೆ ನಮ್ಮ ಭಾಷೆ ಬಗ್ಗೆ ಅಭಿಮಾನವಿಲ್ಲ’ ಎಂದು ವಿಷಾದಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಒಂದು ಭಾಷೆ ಬದುಕಿನೊಂದಿಗೆ ಹೆಣೆದುಕೊಂಡಿರುತ್ತದೆ. ಒಂದು ಭಾಷೆ ನಾಶವಾದರೆ, ಅಲ್ಲಿನ ಸಂಸ್ಕೃತಿ, ಜನಜೀವನವೂ ನಾಶವಾಗುತ್ತದೆ’ ಎಂದರು.
‘ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಭಾಷೆಯ ಅನುಷ್ಠಾನದಲ್ಲಿ ಸೋತಿದ್ದೇವೆ. ಇಂದು ಶಾಲೆಗಳಲ್ಲಿ, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಬಳಸಲು ಯಾರೂ ಇಷ್ಟಪಡುವುದಿಲ್ಲ. ಆದರೆ, ಭಾರತ ರತ್ನ ಪಡೆದ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರು ಕನ್ನಡ ಮಾಧ್ಯಮದಲ್ಲಿಯೇ ಓದಿ ಇಂತಹ ಸಾಧನೆಯನ್ನು ಮಾಡಿದ್ದಾರೆ. ಅಂತಹವರು ಎಲ್ಲರಿಗೂ ಸ್ಫೂರ್ತಿ’ ಎಂದು ಹೇಳಿದರು.
‘ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸತ್ವಯುತ ಕನ್ನಡ ಭಾಷೆಯು ಉಳಿದುಕೊಂಡಿದೆ. ಅಲ್ಲಿನ ನುಡಿಗಟ್ಟು, ಗಾದೆಗಳು ಇಂದಿಗೂ ಅರ್ಥಪೂರ್ಣವಾಗಿವೆ’ ಎಂದರು.