<p><strong>ಬೆಂಗಳೂರು: </strong>‘ಬರೆದದ್ದೆಲ್ಲ ಓದುಗರಿಗೆ ಅರ್ಥಮಾಡಿಸಬೇಕು ಎಂಬ ಕವಿಯ ಅನಿಷ್ಟ ಬಯಕೆಯಿಂದ ಪದ್ಯ ಜಾಳು ಜಾಳಾಗಿ ಹೋಗುತ್ತದೆ. ಹೀಗಾಗಿ, ಹೇಳುವುದನ್ನು ಏನಾದರೂ ಮಾಡಿ ಓದುಗರಿಗೆ ಅರ್ಥ ಮಾಡಿಸಬೇಕು ಎಂಬ ಹಠ ಕವಿಗಳಿಗೆ ಬೇಡ’ ಎಂದು ಡಾ.ನರಹಳ್ಳಿ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.<br /> <br /> ಕನ್ನಡ ಜನಶಕ್ತಿ ಕೇಂದ್ರದ ಸಹಯೋಗದಲ್ಲಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ‘ನರಹಳ್ಳಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಕವಿಯಾದವರು ಮೊದಲು ನಾನು ಯಾರಿಗೂ ಅರ್ಥವಾಗಬೇಕಿಲ್ಲ ಎನ್ನುವ ಸಂಕಲ್ಪ ಮಾಡಬೇಕು. ಅದರಿಂದ ಅನುಭವ, ಅಂತರಂಗದ ಎಲ್ಲ ಮಿಡಿತಗಳನ್ನು ಕೂಡ ಭಾಷೆಯ ಮೂಲಕ ಹೊಮ್ಮಿಸಲು ಸಾಧ್ಯವಿದೆ. ಆದರೆ, ಆ ಸಂಕಲ್ಪ ಮಾಡಲು ಅನೇಕರಿಗೆ ಧೈರ್ಯವಿಲ್ಲ’ ಎಂದು ಹೇಳಿದರು.<br /> <br /> ‘ಇವತ್ತಿನ ಸಮಾಜ ಯಾರೂ ಸೂಕ್ಷ್ಮವಾಗಿರಬಾರದು ಎಂದು ಅಪೇಕ್ಷೆ ಪಡುತ್ತದೆ. ಆದರೆ ಚಂದ್ರಿಕಾ ಎಷ್ಟೇ ಗದ್ದಲ, ಆರ್ಭಟವಾದರೂ ಸದ್ದಿಲ್ಲದೆ ಉರಿಯುವ ದೀಪದ ಹಾಗೆ ಕವಿತೆ ಬರೆಯುತ್ತೇನೆ ಎನ್ನುವ ಸಂಕಲ್ಪ ತೊಟ್ಟ ಹಾಗೆ ಬರೆಯುತ್ತಿದ್ದಾರೆ’ ಎಂದು ಶ್ಲಾಘಿಸಿದರು.<br /> <br /> ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್ ಮಾತನಾಡಿ, ‘ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮಗೆ ಬಂದ ನಗದು ಪುರಸ್ಕಾರಗಳನ್ನು ಕ್ರೋಡೀಕರಿಸಿ ಪ್ರತಿಷ್ಠಾನ ಹುಟ್ಟುಹಾಕಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ. ನಾವೆಲ್ಲರೂ ಇಂತಹ ಕೆಲಸಗಳನ್ನು ಮಾಡಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.<br /> <br /> ‘ಕವಿಯ ಮನಸ್ಸು ನೇರ, ನಿಷ್ಠುರಕ್ಕಿಂತ ಭಾವಾವೇಶದಿಂದ ತೆರೆದುಕೊಳ್ಳುವುದು ಹೆಚ್ಚು. ಪ್ರತಿಯೊಬ್ಬ ಕವಿಗೂ ತನ್ನದೇ ಆದ ಶೈಲಿ, ಅದಕ್ಕೊಂದು ಬರಹದ ಗತ್ತು ಇರುತ್ತದೆ. ಅಂತೆಯೇ, ಓದಲು ಹಿತವಾದ ಕಾವ್ಯ ಬರೆಯುವ ಶಕ್ತಿ ಚಂದ್ರಿಕಾ ಅವರಲ್ಲಿದೆ’ ಎಂದರು.<br /> <br /> ಪ್ರಶಸ್ತಿ ಸ್ವೀಕರಿಸಿದ ಕವಯತ್ರಿ ಪಿ.ಚಂದ್ರಿಕಾ ಮಾತನಾಡಿ, ‘ಕವಿತೆ ಎನ್ನುವುದು ಹೊರಗಿನ ಸಂಭ್ರಮಕ್ಕಿಂತ ಒಳಗಿನ ಅವಸ್ಥೆ ಎಂಬುದನ್ನು ನಾನು ಯಾವತ್ತಿಗೂ ನಂಬುತ್ತೇನೆ. ಹೇಳದೆ ಮುಚ್ಚಿಟ್ಟುಕೊಳ್ಳುವ ಎಷ್ಟೊಂದು ಸಂಗತಿಗಳನ್ನು ಹೊರಹಾಕಲು ಕವಿತೆಯೇ ನನಗೆ ಮಾಧ್ಯಮವಾಗಿದೆ’ ಎಂದು ಹೇಳಿದರು.<br /> <br /> ‘ಕವಿತೆ ನನ್ನೊಳಗೆ ಪ್ರಜ್ಞೆಯಾಗಿ ಮೂಡುತ್ತಿರಬೇಕಾದರೆ ನಾನು ಹೊರಗಿನ ಎಲ್ಲವನ್ನೂ ಮರೆಯುತ್ತಾ, ಅದರೊಳಗೆ ಲೀನವಾಗಿ ಹೋಗುತ್ತೇನೆ. ಆಗ, ಏನೂ ಗೊತ್ತಾಗುವುದಿಲ್ಲ. ಈ ಅವಸ್ಥೆಯನ್ನು 35 ವರ್ಷಗಳಿಂದ ಅನುಭವಿಸಿಕೊಂಡು ಬಂದಿದ್ದೇನೆ’ ಎಂದು ತಿಳಿಸಿದರು. ಲೇಖಕ ಬಿ.ಮಹೇಶ್ ಹರವೆ ಮಾತನಾಡಿ, ‘ಇಂದಿಗೂ ತನ್ನಲ್ಲಿ ಮಗುವಿನ ಮನಸ್ಸನ್ನು ಕಾಪಿಟ್ಟುಕೊಂಡುಬಂದಿರುವ ಚಂದ್ರಿಕಾ ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತಾರೆ. ಅದೇ ಅವರ ಕಾವ್ಯದ ಅಂತಃಸತ್ವ’ ವಿಶ್ಲೇಷಿಸಿದರು.<br /> <br /> <strong>ನಗದು ಪುರಸ್ಕಾರ ದೇಣಿಗೆ</strong><br /> ‘ಪ್ರಶಸ್ತಿಯೊಂದಿಗೆ ಬಂದ ₹ 10 ಸಾವಿರ ನಗದು ಪುರಸ್ಕಾರವನ್ನು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯದಲ್ಲಿರುವ ನೀಲಲೋಚನ ಮಹಾಸ್ವಾಮಿಗಳ ಗ್ರಾಮಾಂತರ ಪ್ರೌಢಶಾಲೆ ಗ್ರಂಥಾಲಯಕ್ಕೆ ಪುಸ್ತಕ ರೂಪದಲ್ಲಿ ದೇಣಿಗೆ ನೀಡುತ್ತೇನೆ’ ಎಂದು ಚಂದ್ರಿಕಾ ಹೇಳಿದರು.<br /> <br /> <em>ಯುವ ಪ್ರತಿಭಾವಂತರ ಬಗ್ಗೆ ನಮ್ಮಲ್ಲಿ ಈವರೆಗೆ ಗಹನವಾದ ಚರ್ಚೆಗಳು ನಡೆದಿಲ್ಲ. ಕೇವಲ ಆಪ್ತ ವಲಯದಲ್ಲಿ ಮಾತ್ರವೇ ಅವರ ಕಾವ್ಯದ ಪಯಣ ನಡೆಯುತ್ತಿರುವುದು ದುರಂತದ ಸಂಗತಿ</em><br /> <strong>– ಎಚ್.ಎಸ್.ವೆಂಕಟೇಶಮೂರ್ತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಬರೆದದ್ದೆಲ್ಲ ಓದುಗರಿಗೆ ಅರ್ಥಮಾಡಿಸಬೇಕು ಎಂಬ ಕವಿಯ ಅನಿಷ್ಟ ಬಯಕೆಯಿಂದ ಪದ್ಯ ಜಾಳು ಜಾಳಾಗಿ ಹೋಗುತ್ತದೆ. ಹೀಗಾಗಿ, ಹೇಳುವುದನ್ನು ಏನಾದರೂ ಮಾಡಿ ಓದುಗರಿಗೆ ಅರ್ಥ ಮಾಡಿಸಬೇಕು ಎಂಬ ಹಠ ಕವಿಗಳಿಗೆ ಬೇಡ’ ಎಂದು ಡಾ.ನರಹಳ್ಳಿ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.<br /> <br /> ಕನ್ನಡ ಜನಶಕ್ತಿ ಕೇಂದ್ರದ ಸಹಯೋಗದಲ್ಲಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ‘ನರಹಳ್ಳಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಕವಿಯಾದವರು ಮೊದಲು ನಾನು ಯಾರಿಗೂ ಅರ್ಥವಾಗಬೇಕಿಲ್ಲ ಎನ್ನುವ ಸಂಕಲ್ಪ ಮಾಡಬೇಕು. ಅದರಿಂದ ಅನುಭವ, ಅಂತರಂಗದ ಎಲ್ಲ ಮಿಡಿತಗಳನ್ನು ಕೂಡ ಭಾಷೆಯ ಮೂಲಕ ಹೊಮ್ಮಿಸಲು ಸಾಧ್ಯವಿದೆ. ಆದರೆ, ಆ ಸಂಕಲ್ಪ ಮಾಡಲು ಅನೇಕರಿಗೆ ಧೈರ್ಯವಿಲ್ಲ’ ಎಂದು ಹೇಳಿದರು.<br /> <br /> ‘ಇವತ್ತಿನ ಸಮಾಜ ಯಾರೂ ಸೂಕ್ಷ್ಮವಾಗಿರಬಾರದು ಎಂದು ಅಪೇಕ್ಷೆ ಪಡುತ್ತದೆ. ಆದರೆ ಚಂದ್ರಿಕಾ ಎಷ್ಟೇ ಗದ್ದಲ, ಆರ್ಭಟವಾದರೂ ಸದ್ದಿಲ್ಲದೆ ಉರಿಯುವ ದೀಪದ ಹಾಗೆ ಕವಿತೆ ಬರೆಯುತ್ತೇನೆ ಎನ್ನುವ ಸಂಕಲ್ಪ ತೊಟ್ಟ ಹಾಗೆ ಬರೆಯುತ್ತಿದ್ದಾರೆ’ ಎಂದು ಶ್ಲಾಘಿಸಿದರು.<br /> <br /> ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್ ಮಾತನಾಡಿ, ‘ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮಗೆ ಬಂದ ನಗದು ಪುರಸ್ಕಾರಗಳನ್ನು ಕ್ರೋಡೀಕರಿಸಿ ಪ್ರತಿಷ್ಠಾನ ಹುಟ್ಟುಹಾಕಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ. ನಾವೆಲ್ಲರೂ ಇಂತಹ ಕೆಲಸಗಳನ್ನು ಮಾಡಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.<br /> <br /> ‘ಕವಿಯ ಮನಸ್ಸು ನೇರ, ನಿಷ್ಠುರಕ್ಕಿಂತ ಭಾವಾವೇಶದಿಂದ ತೆರೆದುಕೊಳ್ಳುವುದು ಹೆಚ್ಚು. ಪ್ರತಿಯೊಬ್ಬ ಕವಿಗೂ ತನ್ನದೇ ಆದ ಶೈಲಿ, ಅದಕ್ಕೊಂದು ಬರಹದ ಗತ್ತು ಇರುತ್ತದೆ. ಅಂತೆಯೇ, ಓದಲು ಹಿತವಾದ ಕಾವ್ಯ ಬರೆಯುವ ಶಕ್ತಿ ಚಂದ್ರಿಕಾ ಅವರಲ್ಲಿದೆ’ ಎಂದರು.<br /> <br /> ಪ್ರಶಸ್ತಿ ಸ್ವೀಕರಿಸಿದ ಕವಯತ್ರಿ ಪಿ.ಚಂದ್ರಿಕಾ ಮಾತನಾಡಿ, ‘ಕವಿತೆ ಎನ್ನುವುದು ಹೊರಗಿನ ಸಂಭ್ರಮಕ್ಕಿಂತ ಒಳಗಿನ ಅವಸ್ಥೆ ಎಂಬುದನ್ನು ನಾನು ಯಾವತ್ತಿಗೂ ನಂಬುತ್ತೇನೆ. ಹೇಳದೆ ಮುಚ್ಚಿಟ್ಟುಕೊಳ್ಳುವ ಎಷ್ಟೊಂದು ಸಂಗತಿಗಳನ್ನು ಹೊರಹಾಕಲು ಕವಿತೆಯೇ ನನಗೆ ಮಾಧ್ಯಮವಾಗಿದೆ’ ಎಂದು ಹೇಳಿದರು.<br /> <br /> ‘ಕವಿತೆ ನನ್ನೊಳಗೆ ಪ್ರಜ್ಞೆಯಾಗಿ ಮೂಡುತ್ತಿರಬೇಕಾದರೆ ನಾನು ಹೊರಗಿನ ಎಲ್ಲವನ್ನೂ ಮರೆಯುತ್ತಾ, ಅದರೊಳಗೆ ಲೀನವಾಗಿ ಹೋಗುತ್ತೇನೆ. ಆಗ, ಏನೂ ಗೊತ್ತಾಗುವುದಿಲ್ಲ. ಈ ಅವಸ್ಥೆಯನ್ನು 35 ವರ್ಷಗಳಿಂದ ಅನುಭವಿಸಿಕೊಂಡು ಬಂದಿದ್ದೇನೆ’ ಎಂದು ತಿಳಿಸಿದರು. ಲೇಖಕ ಬಿ.ಮಹೇಶ್ ಹರವೆ ಮಾತನಾಡಿ, ‘ಇಂದಿಗೂ ತನ್ನಲ್ಲಿ ಮಗುವಿನ ಮನಸ್ಸನ್ನು ಕಾಪಿಟ್ಟುಕೊಂಡುಬಂದಿರುವ ಚಂದ್ರಿಕಾ ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತಾರೆ. ಅದೇ ಅವರ ಕಾವ್ಯದ ಅಂತಃಸತ್ವ’ ವಿಶ್ಲೇಷಿಸಿದರು.<br /> <br /> <strong>ನಗದು ಪುರಸ್ಕಾರ ದೇಣಿಗೆ</strong><br /> ‘ಪ್ರಶಸ್ತಿಯೊಂದಿಗೆ ಬಂದ ₹ 10 ಸಾವಿರ ನಗದು ಪುರಸ್ಕಾರವನ್ನು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯದಲ್ಲಿರುವ ನೀಲಲೋಚನ ಮಹಾಸ್ವಾಮಿಗಳ ಗ್ರಾಮಾಂತರ ಪ್ರೌಢಶಾಲೆ ಗ್ರಂಥಾಲಯಕ್ಕೆ ಪುಸ್ತಕ ರೂಪದಲ್ಲಿ ದೇಣಿಗೆ ನೀಡುತ್ತೇನೆ’ ಎಂದು ಚಂದ್ರಿಕಾ ಹೇಳಿದರು.<br /> <br /> <em>ಯುವ ಪ್ರತಿಭಾವಂತರ ಬಗ್ಗೆ ನಮ್ಮಲ್ಲಿ ಈವರೆಗೆ ಗಹನವಾದ ಚರ್ಚೆಗಳು ನಡೆದಿಲ್ಲ. ಕೇವಲ ಆಪ್ತ ವಲಯದಲ್ಲಿ ಮಾತ್ರವೇ ಅವರ ಕಾವ್ಯದ ಪಯಣ ನಡೆಯುತ್ತಿರುವುದು ದುರಂತದ ಸಂಗತಿ</em><br /> <strong>– ಎಚ್.ಎಸ್.ವೆಂಕಟೇಶಮೂರ್ತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>