ಶಿವಮೊಗ್ಗ: ಕೈಮಗ್ಗ ನೇಕಾರಿಕೆ ಉಳಿಸಲು ಸರ್ವೋದಯ ದಿನದಂದು ಹೆಗ್ಗೋಡು ಸಮೀಪದ ಹೊನ್ನೆಸರದ ಚರಕದ ಶ್ರಮಜೀವಿ ಆಶ್ರಮದಲ್ಲಿ ರಂಗಕರ್ಮಿ ಹಾಗೂ ಚರಕ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಪ್ರಸನ್ನ ಜತೆ ಚರಕ ಸಂಸ್ಥೆಯ ಕಾರ್ಮಿಕರು ಹಾಗೂ ನೇಕಾರರ ಪರ ಕೆಲಸ ಮಾಡುತ್ತಿರುವ ದೊಡ್ಡಬಳ್ಳಾಪುರದ ನರಸಿಂಹಮೂರ್ತಿ, ಬೆಂಗಳೂರಿನ ಸುನೀತಾ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.
ಪ್ರಸನ್ನ ಮಾತನಾಡಿ, ‘ಉಪವಾಸ ಕೈ ಬಿಡಿ ಎಂದು ಸರ್ಕಾರದ ಹಲವು ಅಧಿಕಾರಿಗಳು, ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು ತಮ್ಮ ಜತೆ ಮಾತನಾಡುತ್ತಿದ್ದಾರೆ. ಎಲ್ಲರಿಗೂ ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಾಮಾಣಿಕವಾದ ಆಸಕ್ತಿ ಇದೆ. ಆದರೆ, ಯಾರಿಗೂ ಕೈಮಗ್ಗ ನೇಕಾರರ ಸಮಸ್ಯೆ ಅರ್ಥವಾಗುತ್ತಿಲ್ಲ’ ಎಂದು ಆಕ್ಷೇಪಿಸಿದರು.
ಕೈಮಗ್ಗ ಕ್ಷೇತ್ರಕ್ಕೆ ಕಾನೂನಿನ ಬೆಂಬಲ ಇದೆ ಎಂಬುದೇ ಇವರಿಗೆ ತಿಳಿದಿಲ್ಲ. ‘ಕೈಮಗ್ಗ ಮೀಸಲಾತಿ ಅಧಿನಿಯಮ–1985’ ಪ್ರಕಾರ ವಿದ್ಯುತ್ ಮಗ್ಗ ಬಳಕೆ ಮಾಡುವುದು ಕಾನೂನುಬಾಹಿರ. ಆದರೆ, ಸರ್ಕಾರವೇ ಈ ಕಾನೂನನ್ನು ಮುರಿದಿದೆ’ ಎಂದು ದೂರಿದರು.
ಸತ್ಯಾಗ್ರಹಕ್ಕೆ ಸಾಹಿತಿ ನಾ.ಡಿಸೋಜ ಗುರುವಾರ ಬೆಳಿಗ್ಗೆ ಚಾಲನೆ ನೀಡಿದರು. ವಿಮರ್ಶಕ ಡಿ.ಎಸ್.ನಾಗಭೂಷಣ್, ಚರಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಗೌರಮ್ಮ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.
ಮೈಸೂರು ವರದಿ: ನೇಕಾರರ ಹೋರಾಟವನ್ನು ಬೆಂಬಲಿಸಿ ಮೈಸೂರಿನಲ್ಲಿ ದೇಸಿ ಬಳಗ ಮೈಸೂರು ಸಂಘಟನೆಯ ಕಾರ್ಯಕರ್ತರು ಮಾನಸಗಂಗೋತ್ರಿಯ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಗುರುವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.