ಮೊದಲ ಸಿನಿಮಾದ ಮೊದಲ ಟ್ರೇಲರ್ ಬಿಡುಗಡೆ, ಜತೆಗೆ ಜನ್ಮದಿನದ ಸಂಭ್ರಮ. ಅದಕ್ಕೆ ಪೂರಕವಾಗಿ ಮುಖ್ಯ ಅತಿಥಿಯಾಗಿ ಬಂದಿದ್ದ ನಿರ್ದೇಶಕ ಆನಂದ ಪಿ. ರಾಜು ಅವರು ಆರ್ಯವರ್ಧನ್ ಅಭಿನಯವನ್ನು ಸಿಕ್ಕಾಪಟ್ಟೆ ಹೊಗಳಿದರು. ‘ಖನನ’ದ ನಾಯಕ ನಟ ಆರ್ಯವರ್ಧನ್ ಖುಷಿಗೆ ಕಾರಣಗಳು ಸಾಕಷ್ಟಿದ್ದವು.
ಚಿತ್ರೀಕರಣ ಹಾಗೂ ತಾಂತ್ರಿಕ ಕೆಲಸಗಳನ್ನೆಲ್ಲ ಮುಗಿಸಿ ಟ್ರೇಲರ್ ಬಿಡುಗಡೆ ಮಾಡಲು ಮುಂದಾದ ಚಿತ್ರದ ನಿರ್ದೇಶಕ ರಾಧ, ಅದಕ್ಕಾಗಿ ಆರ್ಯವರ್ಧನ್ ಜನ್ಮದಿನವನ್ನು ಆಯ್ದುಕೊಂಡಿದ್ದರು. ಬರ್ತ್ಡೇ ಬಾಯ್ ಕೇಕ್ ಕತ್ತರಿಸುತ್ತಿದ್ದಂತೆ ತೆರೆ ಮೇಲೆ ಟ್ರೇಲರ್ ಪ್ರದರ್ಶನವಾಯಿತು.
‘ಅಗೆಯುವುದಕ್ಕೆ ಖನನ ಅನ್ನುತ್ತಾರೆ. ಈ ಚಿತ್ರದಲ್ಲಿ ಅಗೆಯುವಿಕೆ ಒಂದರ್ಥದಲ್ಲಿ ಟರ್ನಿಂಗ್ ಪಾಯಿಂಟ್’ ಎಂದ ರಾಧ, ಚಿತ್ರಕಥೆಯ ಸುಳಿವನ್ನು ಬಿಟ್ಟುಕೊಡಲು ಬಯಸಲಿಲ್ಲ. ಅದರ ಬದಲಾಗಿ ಚಿತ್ರೀಕರಣಕ್ಕೆ ಮುನ್ನ ನಡೆಸಲಾದ ಕಾರ್ಯಾಗಾರ, ತರಬೇತಿಯ ವಿವರಗಳನ್ನು ಸುದೀರ್ಘವಾಗಿ ತೆರೆದಿಟ್ಟರು.
ಕೇರಳ, ಬೆಂಗಳೂರು, ಮೈಸೂರು ಹಾಗೂ ಕೋಲಾರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇಪ್ಪತ್ತು ನಿಮಿಷಗಳ ಕ್ಲೈಮ್ಯಾಕ್ಸ್ ನೋಡಿದರೆ ಕನ್ನಡ ಚಿತ್ರಗಳಲ್ಲಿ ಈ ರೀತಿಯ ಪ್ರಯತ್ನಗಳೇ ನಡೆದಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು ರಾಧ.
‘ಎಸ್. ನಲಿಗೆ ಪ್ರೊಡಕ್ಷನ್’ ಅಡಿಯಲ್ಲಿ ನಿರ್ಮಾಪಕ ಶ್ರೀನಿವಾಸ್ ಅವರು ತಮ್ಮ ಪುತ್ರನನ್ನು ನಾಯಕನನ್ನಾಗಿ ಮಾಡಲು ‘ಖನನ’ಕ್ಕೆ ಬಂಡವಾಳ ಹಾಕಿದ್ದಾರೆ. ಅವರು ನಂಬಿರುವುದು ನಿರ್ದೇಶಕ ರಾಧ ಅವರನ್ನು.
‘ಚಿತ್ರವನ್ನು ನೋಡಿದ್ದೇನೆ. ಒಂದೊಂದು ದೃಶ್ಯವನ್ನೂ ರಾಧ ಚೆನ್ನಾಗಿ ಸಂಯೋಜಿಸಿದ್ದಾರೆ. ಮಗನ ಜನ್ಮದಿನದಂದೇ ಟ್ರೇಲರ್ ಬಿಡುಗಡೆಯಾಗುತ್ತಿರುವುದು ಸಂತಸ ನೀಡಿದೆ’ ಎಂದರು.
ಬರ್ತ್ ಡೇ ಬಾಯ್ ಆರ್ಯವರ್ಧನ್ ಮಾತನಾಡಿ, ಅಭಿನಯದೆಡೆಗೆ ತಮಗಿದ್ದ ಆಸಕ್ತಿಯನ್ನು ವಿವರಿಸಿದರು. ಮೂಲತಃ ಒಳಾಂಗಣ ವಿನ್ಯಾಸಕಾರ ವೃತ್ತಿಯಲ್ಲಿರುವ ಅವರಿಗೆ ಸಿನಿಮಾ ಅಂದರೆ ಪ್ರೀತಿಯಂತೆ. ‘ಯುವಕನೊಬ್ಬನ ಬದುಕಿನಲ್ಲಿ ನಡೆಯುವ ಘಟನೆಗಳು ಇದರಲ್ಲಿವೆ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಂಡು ಕಂಗಾಲಾಗಬಾರದು. ಎಲ್ಲರಿಗೂ ಒಂದು ಉತ್ತಮ ಭವಿಷ್ಯ ಇದ್ದೇ ಇರುತ್ತದೆ ಎಂಬ ಸಂದೇಶ ಖನನದಲ್ಲಿದೆ’ ಎಂದರು.
ಖಳನಾಗಿ ಕಾಣಿಸಿಕೊಂಡಿರುವ ಯುವ ಕಿಶೋರ್, ತಮ್ಮದು ನಯವಂಚಕ ಹುಡುಗನ ಪಾತ್ರ ಎಂದು ಬಣ್ಣಿಸಿದರು. ಕಥೆ ಬರೆದ ರವಿಕಾಂತ, ಸಂಗೀತ ಸಂಯೋಜಿ ಸಿರುವ ಕನ್ನಿ ಜಿ., ಛಾಯಾಗ್ರಾಹಕ ರಮೇಶ ತಿರುಪತಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ಶೈಲೇಂದ್ರ ಬಾಬು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.