ಹುಬ್ಬಳ್ಳಿ: ವೃತ್ತಿಪರ ಆಯ್ಕೆ ಕುರಿತು ಚಿಂತನೆಯಲ್ಲಿರುವ ವಿದ್ಯಾರ್ಥಿಗಳು, ಪೋಷಕರಿಗೆ ನೆರವಾಗುವ ಸಲುವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದ ಆಶ್ರಯದಲ್ಲಿ ‘ಜ್ಞಾನ ದೇಗುಲ–2015’ ಶೈಕ್ಷಣಿಕ ಮೇಳವು ಇದೇ 30 ಹಾಗೂ 31ರಂದು ಇಲ್ಲಿನ ಗೋಕುಲ ಗಾರ್ಡನ್ನಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳಿಗಾಗಿ ಪತ್ರಿಕೆಯು ಕಳೆದ 6 ವರ್ಷಗಳಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಇಂತಹದ್ದೊಂದು ಬೃಹತ್ ಶೈಕ್ಷಣಿಕ ಮೇಳ ಆಯೋಜಿಸಲಾಗಿದೆ. ಎರಡೂ ದಿನ ಬೆಳಿಗ್ಗೆ 10ರಿಂದ ರಾತ್ರಿ 8ರ ತನಕ ಮೇಳ ನಡೆಯಲಿದೆ. ಸಿಇಟಿ/ ಕಾಮೆಡ್–ಕೆ ಪರೀಕ್ಷೆ ಬರೆದು ಕೌನ್ಸೆಲಿಂಗ್ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
ರಾಜ್ಯದ ವಿಶ್ವವಿದ್ಯಾಲಯಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ಬ್ಯಾಂಕಿಂಗ್, ಬಿಸಿನೆಸ್ ಮ್ಯಾನೇಜ್ಮೆಂಟ್, ಏರೋನಾಟಿಕ್ಸ್, ಅನಿಮೇಶನ್, ವ್ಯವಹಾರ ನಿರ್ವಹಣೆ ಮೊದಲಾದ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲಿವೆ. ಉಚಿತ ಪ್ರವೇಶವಿದೆ. www.jnanadegula.in ವೆಬ್ಸೈಟ್ನಲ್ಲಿ ಆಸಕ್ತರು ಹೆಸರು ನೋಂದಾಯಿಸಬಹುದು.