ನ್ಯೂಯಾರ್ಕ್ (ಪಿಟಿಐ): ಭಾರತವನ್ನು ಪ್ರಮುಖ ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ವಾಣಿಜ್ಯ ವಹಿವಾಟಿಗೆ ಪೂರಕವಾದ ಮುಕ್ತ ಹಾಗೂ ಉದ್ಯಮಸ್ನೇಹಿ ನೀತಿ ಅಳವಡಿಸಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
’ಎಲ್ಲ ಹೂಡಿಕೆದಾರರು, ಉದ್ಯಮಿಗಳನ್ನು ಭಾರತಕ್ಕೆ ಆಹ್ವಾನಿಸುತ್ತೇವೆ. ‘ಭಾರತದಲ್ಲಿ ತಯಾರಿಸಿ’ ಎಂಬ ಧ್ಯೇಯಕ್ಕೆ ನಾವು ಬದ್ಧ. ಇದಕ್ಕಾಗಿ ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸುತ್ತೇವೆ. ಗ್ರಾಮಗಳನ್ನು ಆರ್ಥಿಕ ಬದಲಾವಣೆಯ ವೇದಿಕೆಗಳನ್ನಾಗಿ ಪರಿವರ್ತಿಸುತ್ತೇವೆ’ ಎಂದು ಮೋದಿ ಭರವಸೆ ನೀಡಿದ್ದಾರೆ.
ವಾಲ್ ಸ್ಟ್ರೀಟ್ ಪತ್ರಿಕೆಯ ಸಂಪಾದಕೀಯ ಪುಟಕ್ಕೆ ಬರೆದ ಅಗ್ರ ಲೇಖನದಲ್ಲಿ ತಮ್ಮ ಕನಸ್ಸು ಬಿಚ್ಚಿಟ್ಟಿರುವ ಮೋದಿ, ಭಾರತದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
‘ಅಂತರರಾಷ್ಟ್ರೀಯ ಸಹಭಾಗಿತ್ವದಲ್ಲಿ ನಮ್ಮ ಕನಸನ್ನು ನನಸಾಗಿಸುತ್ತೇವೆ. ಮುಂದಿನ ಬಾರಿ ಭಾರತಕ್ಕೆ ಬರುವ ಮುಂಚೆಯೇ ಈ ಬದಲಾವಣೆಯನ್ನು ಖಂಡಿತ ನೀವು ಗಮನಿಸುತ್ತೀರಿ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.