ಉಡುಪಿ: ‘ತುಳು ಭಾಷೆಯಲ್ಲಿ ಸಾಮರಸ್ಯ ಹಾಗೂ ಜನರನ್ನು ಒಗ್ಗೂಡಿಸುವ ಶಕ್ತಿ ಇದೆ. ಮುಂದಿನ ಜನಾಂಗಗಕ್ಕೆ ಬಾಷೆಯ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಪ್ರತಿ ಮನೆಯಲ್ಲಿ ನಡೆಯಬೇಕು’ ಎಂದು ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಹೇಳಿದರು.
ತುಳುಕೂಟ ಉಡುಪಿ, ಶ್ರೀ ಗಣೇಶೋತ್ಸವ ಸಮಿತಿ ದೆಂದೂರು ಕಲ್ಮಂಜೆ, ಯುವಬಾಂಧವೆರ್ ದೆಂದೂರು, ಸಮುದಾಯ ಅಲೆವೂರು ಮತ್ತು ಡಿ.ಎಕ್ಸ್.ಎನ್. ಅಸೋಸಿಯೇಟ್ಸ್ ಸಂಯುಕ್ತವಾಗಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೆಂದೂರು ದಯಾನಂದ ಕೆ ಶೆಟ್ಟಿ ಅವರ ‘ತೆಂಬದಬಾಕ್ಯಾರ್’ ತುಳು ಸುಗಮ ಸಂಗೀತ ಸಿ.ಡಿ. ಬಿಡುಗಡೆ ಮಾಡಿ ಅವರು ಮಾತನಾಡಿದರು.
ತುಳು ಸಾಹಿತ್ಯ ಪುಷ್ಪವಿದ್ದಂತೆ, ಜಾನಪದ ಸಂಸ್ಕೃತಿ ಬೇರಿದ್ದಂತೆ. ತುಳು ಭಾಷೆ ಬೆಳೆದರೆ ಜಾನಪದ ಸಂಸ್ಕೃತಿಯೂ ಬೆಳೆಯುತ್ತದೆ. ತುಳುವಿನ ಒಂದು ಶಬ್ದದಿಂದ 25 ವಿಷಯಗಳನ್ನು ಗ್ರಹಿಸಬಹುದು. ತುಳು ಹೃದಯಕ್ಕೆ ಹತ್ತಿರವಾದ ಭಾಷೆಯಾಗಿದೆ ಎಂದು ಅವರು ಹೇಳಿದರು.
ಉಡುಪಿ ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ತುಳು ಸಿರಿ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಡಾ.ವೈ.ಎನ್.ಶೆಟ್ಟಿ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್, ರಂಗಕರ್ಮಿ ಲೀಲಾಧರ ಶೆಟ್ಟಿ ಕಾಪು, ಕಲ್ಮಂಜೆ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಕರಾಮ ಶೆಟ್ಟಿ, ಸಂಗೀತ ನಿರ್ದೇಶಕ ವಿಜಯ ಕೋಕಿಲ, ಡಿಎಕ್ಸ್ಎನ್ನ ವಿತರಕ ಎಸ್.ಎನ್. ಶೆಟ್ಟಿ ಉಪಸ್ಥಿತರಿದ್ದರು.
ದೆಂದೂರು ದಯಾನಂದ ಕೆ ಶೆಟ್ಟಿ ಸ್ವಾಗತಿಸಿದರು. ಚಂದ್ರಶೇಖರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.