ಮೈಸೂರು: ಮಹಾತ್ಮ ಗಾಂಧೀಜಿ ಅವರ ಅನುಯಾಯಿಯಾದ ಸಾಹಿತಿ ದೇವನೂರ ಮಹಾದೇವ ಅವರು ಕಠೋರತೆ ಬಿಟ್ಟು, ಒಡೆದು ಹೋಗಿರುವ ದಲಿತ ಸಂಘರ್ಷ ಸಮಿತಿಗಳನ್ನು (ಡಿಎಸ್ಎಸ್) ಒಂದುಗೂಡಿಸಲಿ ಎಂದು ಡಿಎಸ್ಎಸ್ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಒತ್ತಾಯಿಸಿದರು.
ದಲಿತ ಸಾಹಿತ್ಯ ಪರಿಷತ್ತು ನಗರದಲ್ಲಿ ಆಯೋಜಿಸಿರುವ 5ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಸೋಮವಾರ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ದಲಿತ ಚೇತನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಡಿಎಸ್ಎಸ್ ಹುಟ್ಟುವ ಮೊದಲು ನವೋದಯ ಹಾಗೂ ನವ್ಯ ಸಾಹಿತಿಗಳ ಜತೆ ಗುರುತಿಸಿಕೊಂಡಿದ್ದ ದೇವನೂರ ಅವರು, ಈಗಲೂ ನವೋದಯ, ನವ್ಯದ ಸೆಳೆತದಲ್ಲಿಯೇ ಇದ್ದಾರೆ. ಹೀಗಾಗಿ, ದಲಿತ ಸಾಹಿತಿಯಾಗಿ ಗುರುತಿಸಿಕೊಳ್ಳಲು ಸಂಕೋಚಪಡುತ್ತಾರೆ. ಅಲ್ಲದೆ, ಮೇಲ್ಜಾತಿಯವರನ್ನು ತೃಪ್ತಿಪಡಿಸಲು ಹೆಚ್ಚು ಹಂಬಲಿಸುತ್ತಾರೆ. ಮೇಲ್ಜಾತಿಗಳ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುವ ಅವರು, ಮುಂದಿನ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ, ಮಾರ್ಗದರ್ಶನ ಮಾಡಲಿ’ ಎಂದು ಅವರು ಕೋರಿದರು.
ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಯಲ್ಲಿದ್ದ ಸಾಹಿತಿಗಳು ಈಗ ಹಿರಿಯರಾಗಿದ್ದಾರೆ. ತಮ್ಮ ಹತಾಶೆಗಳನ್ನು ಸಮಾಜದ ಹತಾಶೆಗಳೆಂದು ಬಿಂಬಿಸುತ್ತಿದ್ದಾರೆ. ದಲಿತ ಚಳವಳಿಯನ್ನು ವಿಘಟಿಸುವ ಹುನ್ನಾರ ನಡೆ ಸುತ್ತಿದ್ದಾರೆ. ದೇವನೂರ ಅವರ ಒಡನಾಡಿಗಳಾದ ಕೆ.ಬಿ. ಸಿದ್ದಯ್ಯ, ಎಚ್. ಗೋವಿಂದಯ್ಯ, ಕೋಟಿಗಾನಹಳ್ಳಿ ರಾಮಯ್ಯ ಅವರು ಕುಬ್ಜ ಮನಸ್ಸಿನವರು. ಇವರೆಲ್ಲ ಡಿಎಸ್ಎಸ್ ಒಂದಾಗುವುದನ್ನು ಇಷ್ಟಪಡುವುದಿಲ್ಲ. ಆದರೆ, ಇವರ ಮಾತುಗಳನ್ನು ದೇವನೂರ ಅವರು ಕೇಳದಿರಲಿ ಎಂದು ನಾಗವಾರ ಮನವಿ ಮಾಡಿದರು.
ಮಲಿನಗೊಂಡ ಮನಸ್ಸುಗಳು ಹಿರಿಯ ದಲಿತ ಸಾಹಿತಿಗಳ ಕೃತಿಗಳನ್ನು ಟೀಕಿಸುತ್ತಿವೆ. ಇದರಿಂದ ಹೊಸ ಪೀಳಿಗೆಯ ಲೇಖಕರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದೂ ಅವರು ವಿಷಾದ ವ್ಯಕ್ತಪಡಿಸಿದರು.