ಬೆಂಗಳೂರು: ‘ಯುವಕರನ್ನು ಪುಸ್ತಕದ ಓದಿನತ್ತ ಸೆಳೆಯಲು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ‘ನನ್ನ ಮೆಚ್ಚಿನ ಕೃತಿ’ ವಿಷಯದ ಬಗ್ಗೆ ಸ್ಪರ್ಧೆ ಏರ್ಪಡಿಸಲಾಗುವುದು ಮತ್ತು ಪ್ರತಿ ಜಿಲ್ಲೆಗಳಲ್ಲಿ ‘ಪುಸ್ತಕ ಪ್ರೇಮಿಗಳ ಬಳಗ’ ಸ್ಥಾಪಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ‘ಹ್ಯಾಪಿ ಕ್ಲಬ್ ಇವೆಂಟ್ಸ್’ ವತಿಯಿಂದ ಕರ್ನಾಟಕ ಪುಸ್ತಕೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಯುವಜನತೆ ಮತ್ತು ವಾಚನಾಭಿರುಚಿ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ‘ಸಂಸ್ಕೃತಿ, ಸಾಹಿತ್ಯ, ಸಮಾಜದ ಕುರಿತ ಯುವಕರ ಓದು ಕಡಿಮೆಯಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಯುವಕರು ಹೆಚ್ಚು ಓದುತ್ತಿದ್ದಾರೆ. ಯುವಕರನ್ನು ಮರಳಿ ಓದಿನತ್ತ ಆಕರ್ಷಿಸಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘80ರ ದಶಕದಲ್ಲಿ ಯಂಡಮೂರಿ ವಿರೇಂದ್ರನಾಥ್ ಹಣ ಗಳಿಸುವುದು ಹೇಗೆ, ಯಶಸ್ಸು ಸಾಧಿಸುವುದು ಹೇಗೆ ಎಂಬ ಅಸಂಬದ್ಧ ಕೃತಿಗಳ ರಚನೆಗೆ ನಾಂದಿ ಹಾಡಿದರು. ಆ ಪರಂಪರೆ ಇಂದಿಗೂ ಮುಂದುವರೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯ ಬಿಟ್ಟರೆ ಬೇರೆ ಸಾಹಿತ್ಯ ಗೊತ್ತಿಲ್ಲ. ಅವರು ಸಂವೇದನಾಶೀಲ ಸಾಹಿತ್ಯವನ್ನು ಓದುವ ವಾತಾವರಣ ನಿರ್ಮಾಣ ಮಾಡಬೇಕು’ ಎಂದರು.
ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಮಾತನಾಡಿ, ‘ಇದು ಎಲೆಕ್ಟ್ರಾನಿಕ್ ಮಾಧ್ಯಮಗಳ ಯುಗ. ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಬೇರೆ ಬೇರೆ ಆಕರ್ಷಣೆಗಳ ನಡುವೆ ಅವರನ್ನು ಪುಸ್ತಕಗಳ ಓದಿನತ್ತ ಆಕರ್ಷಿಸುವ ಸವಾಲಿದೆ’ ಎಂದರು.
ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ‘ಬೇರೆ ಬೇರೆ ಸಂವೇದನಾ ನೆಲೆಗಳಿಂದ ಬಂದ ಹಲವು ಯುವ ಕವಿಗಳು ನಮ್ಮಲ್ಲಿದ್ದಾರೆ. ವಿಪರ್ಯಾಸವೆಂದರೆ ಅವರ ಕವಿತೆಗಳನ್ನು ಓದದೆ ಟೀಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ವಿಮರ್ಶಕರು ಸಹ ಅವರನ್ನು ಕಡೆಗಣಿಸುತ್ತಿದ್ದಾರೆ’ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.