ಬೆಂಗಳೂರು: ಕೆಂಗೇರಿ ಕೆರೆಯ ಪುನಶ್ಚೇತನ ಮತ್ತು ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ‘ಬೆಂಗಳೂರು ಮೆಟ್ರೊ ರೈಲು ನಿಗಮ’ವು ಮುಂದಾಗಿದೆ. ಈ ಸಂಬಂಧ ನಿಗಮವು ಬುಧವಾರ (ನ. 25) ಟೆಂಡರ್ ಅಧಿಸೂಚನೆಯನ್ನು ಹೊರಡಿಸಿದೆ.
ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ (ಡಿಪಿಆರ್) ಮತ್ತು ಪರಿಕಲ್ಪನಾತ್ಮಕ ಯೋಜನೆಯ ತಯಾರಿ, ಸ್ಥಳ ಪರಿಶೋಧನೆ, ತಾಂತ್ರಿಕ ವಿನ್ಯಾಸ ಮತ್ತು ಇತರ ಕಾರ್ಯಗಳನ್ನು ಕೈಗೊಳ್ಳಲು ಇಚ್ಛಿಸುವ ಅರ್ಹ ವ್ಯಕ್ತಿ ಮತ್ತು ಸಂಸ್ಥೆಗಳು ಡಿ. 21ರೊಳಗೆ ಭರ್ತಿ ಮಾಡಿದ ಟೆಂಡರ್ ಅರ್ಜಿಗಳನ್ನು ನಿಗಮಕ್ಕೆ ಸಲ್ಲಿಸಬೇಕು.
ಕೆರೆಗೆ ಕೊಳಕು ನೀರಿನ ಹರಿವನ್ನು ನಿಲ್ಲಿಸುವ ಮತ್ತು ಮಳೆ ನೀರು ಮಾತ್ರ ಹರಿದು ಬರುವಂತೆ ವ್ಯವಸ್ಥೆ ಮಾಡುವ ಮೂಲಕ ಕೆರೆಯನ್ನು ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ. ಎರಡನೇ ಹಂತದಲ್ಲಿ ನಾಯಂಡಹಳ್ಳಿ– ಕೆಂಗೇರಿ ನಡುವೆ ನಿರ್ಮಾಣವಾಗುವ ಎತ್ತರಿಸಿದ ಮಾರ್ಗದ ಮೇಲೆ ಬೀಳುವ ಮಳೆ ನೀರನ್ನು ಈ ಕೆರೆಗೆ ತುಂಬಿಸಲಾಗುವುದು ಎಂದು ನಿಗಮದ ಮೂಲಗಳು ತಿಳಿಸಿವೆ.
ಕೆರೆ ಶುದ್ಧೀಕರಣದ ನಂತರ ಅಭಿವೃದ್ಧಿ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆ ಪಡೆದ ಸಂಸ್ಥೆಯೇ ನಿರ್ವಹಿಸಬೇಕಾಗುತ್ತದೆ.
ನಾಯಂಡಹಳ್ಳಿ– ಕೆಂಗೇರಿ ಮಾರ್ಗದಲ್ಲಿ ಬರುವ ಮೈಲಸಂದ್ರ ನಿಲ್ದಾಣವು ಈ ಕೆರೆಯ ಮುಂಭಾಗದಲ್ಲೇ ನಿರ್ಮಾಣಗೊಳ್ಳಲಿದೆ.