ಚಿಕ್ಕಮಗಳೂರು: ಕೇಂದ್ರ ಸರ್ಕಾರ ನಡೆಸುವ ಎಲ್ಲ ಪರೀಕ್ಷೆಗಳನ್ನು ಕಡ್ಡಾಯವಾಗಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ನಡೆಸಬೇಕು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕುರಿತ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯನ್ನು ಪ್ರಾದೇ ಶಿಕ ಭಾಷೆಯಲ್ಲಿ ನಡೆಸಲಿದೆ.
ಆದರೆ, ಸಾವಿರಾರು ವರ್ಷಗಳ ಇತಿಹಾಸವಿರುವ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆಯನ್ನು ಪ್ರಾದೇಶಿಕ ಭಾಷಾ ಪಟ್ಟಿಯಲ್ಲಿ ಸೇರಿಸದೆ ಇರುವುದು ದುರದೃಷ್ಟಕರ ಎಂದು ಸಿರಿಗನ್ನಡ ವೇದಿಕೆ ಜಿಲ್ಲಾ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಕನ್ನಡ ಭಾಷೆ ನಿರ್ಲಕ್ಷಿಸಲಾಗಿದೆ. ಸ್ಥಳೀಯ ಅರ್ಹರಿಗೆ ಅನ್ಯಾಯವಾಗಲಿದೆ. ಇದನ್ನು ಸರಿದೂಗಿಸದೆ ಇದ್ದಲ್ಲಿ ಕನ್ನಡಿಗರಿಗೆ ಶಾಶ್ವತವಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಪರಿಕ್ಷೆಗಳಿಂದ ವಂಚಿತರಾಗುತ್ತಾರೆ. ಪ್ರಾದೇಶಿಕ ಭಾಷೆಗಳಾದ ತೆಲುಗು, ತಮಿಳು, ಮರಾಠಿ, ಬಂಗಾಳಿ, ಅಸ್ಸಾಮಿ ಮತ್ತು ಗುಜರಾತಿ ಭಾಷೆಗಳೊಂದಿಗೆ ಕನ್ನಡ ಸೇರಿಸಿಕೊಳ್ಳಬೇಕು. ಯುಪಿಎಸ್ಪಿ ನಡೆಸುವ ಎಲ್ಲ ಪರೀಕ್ಷೆಗಳಲ್ಲೂ ಸಹ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡ ಭಾಷೆ ಸೇರಿಸಿಕೊಂಡು ಕನ್ನಡಿಗರಿಗೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.