ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಉದ್ಯಮಿ ಕುಮಾರ ಮಂಗಲಂ ಬಿರ್ಲಾ ವಿರುದ್ಧದ ಪ್ರಕರಣ ಕೈಬಿಡಲು ಮುಂದಾಗಿರುವ ಸಿಬಿಐ ಅನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡ ವಿಶೇಷ ನ್ಯಾಯಾಲಯ, ತರಾತುರಿಯಲ್ಲಿ ಪರಿಸಮಾಪ್ತಿ ವರದಿ ಸಲ್ಲಿಸಿರುವುದೇಕೆ ಎಂದು ಪ್ರಶ್ನಿಸಿದೆ.
‘ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಅವಸರಿಸುತ್ತಿರುವುದೇಕೆ? ಪ್ರಕರಣದ ವಿವರಗಳನ್ನು ಒಳಗೊಂಡ ಡೈರಿಯನ್ನು ಏಕೆ ಹಾಜರು ಮಾಡಿಲ್ಲ’ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು ಈ ಪ್ರಕರಣದ ತನಿಖಾಧಿಕಾರಿಯನ್ನು ಖಾರವಾಗಿ ಪ್ರಶ್ನಿಸಿದರು.
ಮತ್ತೆ ವಿಚಾರಣೆ: ‘ಸುಪ್ರೀಂ’ ನಕಾರ |
---|
ಕಾನೂನುಬಾಹಿರವಾಗಿ ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿ ಪಡೆದ ಕಂಪೆನಿಗಳು ಸಲ್ಲಿಸಿರುವ ಮರುಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ಈಗಾಗಲೇ 218 ಕಲ್ಲಿದ್ದಲು ನಿಕ್ಷೇಪ ಮಂಜೂರಾತಿಗಳನ್ನು ಅಕ್ರಮ ಎಂದಿದ್ದು, ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ. ಈ ಮಧ್ಯೆ, ಇಂತಹ ಪರವಾನಗಿಗಳನ್ನು ರದ್ದು ಮಾಡುವುದಾಗಿ ಸರ್ಕಾರ ಕೂಡ ಹೇಳಿದೆ. ಆದರೆ, ಈ ಅಕ್ರಮಕ್ಕೆ ಸರ್ಕಾರ ಕಾರಣ ಎಂದಿರುವ ಕಂಪೆನಿಗಳು, ಕಾನೂನುಬಾಹಿರವಾಗಿ ನಡೆದಿರುವ ಪ್ರತಿಯೊಂದು ಮಂಜೂರಾತಿಯನ್ನು ಪರಿಶೀಲಿಸಲು ಸಮಿತಿ ರಚಿಸುವಂತೆ ಒತ್ತಾಯಿಸಿವೆ. |
‘ಬಿರ್ಲಾ ಅವರ ಒಡೆತನದ ಹಿಂಡಾಲ್ಕೊ ಕಂಪೆನಿ ಕಲ್ಲಿದಲು ನಿಕ್ಷೇಪದ ಮಂಜೂರಾತಿಗೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತ ಪರಿಶೀಲನಾ ಸಮಿತಿಯ ಮೂಲ ಟಿಪ್ಪಣಿ ನಾಪತ್ತೆಯಾಗಿದೆ’ ಎಂದು ತನಿಖಾಧಿಕಾರಿ ವಿಚಾರಣೆ ವೇಳೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಹಾಗಿದ್ದರೆ ಮೂಲ ಟಿಪ್ಪಣಿ ನಾಪತ್ತೆಯಾಗಿರುವುದಕ್ಕೆ ಯಾವುದಾದರು ಹೇಳಿಕೆಗಳು ಇವೆಯೇ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ತತ್ತರಿಸಿದ ತನಿಖಾಧಿಕಾರಿಗೆ ‘ನಿಮ್ಮ ಮೇಲಾಧಿಕಾರಿಗಳನ್ನು ಇಲ್ಲಿಗೆ ಬರಲು ಹೇಳಿ’ ಎಂದು ನ್ಯಾಯಾಧೀಶರು ಸೂಚಿಸಿದರು.
‘ನೀವು ಯಾವ ಆಧಾರದ ಮೇಲೆ ಈ ಪ್ರಕರಣವನ್ನು ಮುಕ್ತಾಯಗೊಳಿಸುವ ನಿರ್ಧಾರ ಕೈಗೊಂಡಿರಿ? ಇದೆಂತಹ ತನಿಖೆ... ನಿಮ್ಮ ಮೇಲಾಧಿಕಾರಿಗಳು ಇದನ್ನು ಗಮನಿಸಲಿಲ್ಲವೆ? ಈ ಪ್ರಕರಣದ ವಿವರವಿರುವ ಪೊಲೀಸರ ಕಡತ ತೆಗೆದುಕೊಂಡು ಬನ್ನಿ ಮತ್ತು ನಿಮ್ಮ ಮೇಲಾಧಿಕಾರಿಯನ್ನು ಈಗಲೇ ಇಲ್ಲಿಗೆ ಬರಲು ಹೇಳಿ’ ಎಂದು ನ್ಯಾಯಾಧೀಶರು ಆದೇಶಿಸಿದರು.
ಪರಿಸಮಾಪ್ತಿ ವರದಿ ಜೊತೆಗೆ ಸಲ್ಲಿಸಿರುವ ಕೆಲವು ಕಾಗದಪತ್ರಗಳು ಖಾಲಿ ಇದ್ದ ಕಾರಣ ಮತ್ತಷ್ಟು ಕೆಂಡಾಮಂಡಲರಾದ ನ್ಯಾಯಾಧೀಶ ಭರತ್ ಪರಾಶರ್, ‘ಕೋರ್ಟ್ಗೆ ಏನನ್ನಾದರೂ ಸಲ್ಲಿಸಬಹುದೆಂದು ಸಿಬಿಐ ಅಂದುಕೊಂಡಿದೆಯೋ ಹೇಗೆ? ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.