ನವದೆಹಲಿ(ಪಿಟಿಐ): ಬಂಡಾಯದ ಧ್ವನಿಗಳನ್ನು ಅಡಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿ ಅವರಿಗೆ ಕಿರುಕುಳ ನೀಡುವ ಮೂಲಕ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನ ಗುಲಾಂ ನಬಿ ಅಜಾದ್, ಜೆಡಿಯುನ ಶರದ್ ಯಾದವ್ ಸೇರಿದಂತೆ ವಿರೋಧ ಪಕ್ಷದ ಸಂಸದರು ಗುರುವಾರ ರಾಜ್ಯಸಭೆಯಲ್ಲಿ ಒಕ್ಕೊರಲ ಧ್ವನಿ ಎತ್ತಿದ್ದಾರೆ.
ಜಂಟಿ ಹೇಳಿಕೆ ನೀಡಿರುವ ವಿರೋಧ ಪಕ್ಷಗಳು, ತೀಸ್ತಾ ಅವರ ಮನೆ ಮತ್ತು ಕಚೇರಿ ಮೇಲಿನ ದಾಳಿಯನ್ನು ಸೇಡಿನ ಕಾರಣಕ್ಕಾಗಿ ಮಾಡಲಾಗಿದೆ. ಈ ಮೂಲಕ ಸರ್ಕಾರ ಪ್ರಕರಣದ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿವೆ.
ನರೇಂದ್ರ ಮೋದಿ ಅವರ ಸರ್ಕಾರ ತೀಸ್ತಾ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾ ಕಿರುಕುಳ ನೀಡುತ್ತಿದೆ. ಇದರಿಂದ ಬಂಡಾಯದ ಧ್ವನಿಗಳನ್ನು ಅಡಗಿಸಲು ನಿರ್ಧರಿಸಿದೆ ಎಂಬುದು ಮನವರಿಕೆಯಾಗುತ್ತದೆ ಎಂದು ಅವರು ಆರೋಪಸಿದ್ದಾರೆ.