ಕೈತಾಲ್, ಹರಿಯಾಣ (ಪಿಟಿಐ): ‘ಕ್ಯಾನ್ಸರ್ಗಿಂತಲೂ ಅಪಾಯಕಾರಿಯಾದ ಭ್ರಷ್ಟಾಚಾರ ‘ವ್ಯಾಧಿ’ಯನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.
ಹರಿಯಾಣದಲ್ಲಿ ಹೆದ್ದಾರಿ ನಿರ್ಮಾಣ ಯೋಜನೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭ್ರಷ್ಟಾಚಾರವು ಅಪಾಯಕಾರಿಯಾಗಿದ್ದು, ಕ್ಯಾನ್ಸರ್ಗಿಂತಲೂ ಅಪಾಯಕಾರಿಯಾಗಿ ಹರಡುತ್ತಿದೆ. ಅದು ದೇಶವನ್ನು ನಾಶಪಡಿಸುತ್ತಿದೆ. ಅದನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮಗಳ ಅಗತ್ಯವಿದೆ’ ಎಂದು ಹೇಳಿದರು.
‘ಇದರ (ಭ್ರಷ್ಟಾಚಾರ) ವಿರುದ್ಧ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೇ? ನೀವೇ ಹೇಳಿ. ನಿಮ್ಮ ಆಶೀರ್ವಾದದೊಂದಿಗೆ ನಾನು ಈ ವ್ಯಾಧಿಯಿಂದ ದೇಶವನ್ನು ಮುಕ್ತಗೊಳಿಸುತ್ತೇನೆ’ ಎಂದು ಹೇಳಿದರು.
‘ಭ್ರಷ್ಟತೆ ದೇಶವನ್ನು ಹಾಳುಗೆಡವಿದೆ. ಅದರ ವಿರುದ್ಧ ನಾವು ರಾಷ್ಟ್ರೀಯ ಜಾಗೃತಿ ಮೂಡಿಸಬೇಕಿದೆ. ಜನರು ಅದರ ಒಟ್ಟಿಗೆ ಹೆಚ್ಚು ಕಾಲ ಜೀವಿಸಲು ಬಯಸುವುದಿಲ್ಲ ಎಂದು ತಿಳಿದಿದೆ’ ಎಂದು ಅವರು ಹೇಳಿದರು.
‘ದೂರಾಲೋಚನೆ ಅಗತ್ಯ’: ಅಭಿವೃದ್ಧಿಯ ಕುರಿತು ಪ್ರಸ್ತಾಪಿಸಿದ ಮೋದಿ ಅವರು, ‘ಸಮಯ ಬದಲಾಗುತ್ತಿರುವುದರಿಂದ 20ನೇ ಶತಮಾನದ ಮೂಲಸೌಕರ್ಯಗಳು 21ನೇ ಶತಮಾನದಲ್ಲಿ ಪ್ರಯೋಜನಾಕಾರಿಯಾಗಲಾರವು. ನಾವು ಇನ್ನೂ ಮುಂದಕ್ಕೆ ಯೋಚಿಸಬೇಕಿದೆ’ ಎಂದರು.
‘ನಿದ್ದೆ ಮಾಡಲು ಮೋದಿ ಬಿಡರು’
ಲಖನೌ: ‘ಪ್ರಧಾನಿ ನರೇಂದ್ರ ಮೋದಿ ಅವರು ತಾವೂ ನಿದ್ದೆ ಮಾಡುವುದಿಲ್ಲ. ಬೇರೆಯವರಿಗೂ ನಿದ್ದೆ ಮಾಡಲು ಬಿಡುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಾರ್ಯಕರ್ತರಿಗೆ ಸ್ನೇಹದ ಮಾತುಗಳಲ್ಲೇ ಎಚ್ಚರಿಕೆ ನೀಡಿದರು.