ಬಿಡುಗಡೆಯ ಖುಷಿ ಹಂಚಿಕೊಳ್ಳಬೇಕಿದ್ದುದು ‘ಮುದ್ದು ಮನಸೇ’ ಚಿತ್ರತಂಡ. ಆದರೆ ಪರೋಕ್ಷವಾಗಿ ಆಗಿದ್ದು ‘ಮಳೆ’ ಬಿಡುಗಡೆಯ ಪತ್ರಿಕಾಗೋಷ್ಠಿ!
ಒಬ್ಬರೇ ವಿತರಕರಾಗಿದ್ದರೆ ಉದ್ಭವಿಸುವ ಗೊಂದಲಕ್ಕೆ ‘ಮುದ್ದು ಮನಸೇ’ ಚಿತ್ರತಂಡ ಏರ್ಪಡಿಸಿದ್ದ ಸುದ್ದಿಗೋಷ್ಠಿ ತಾಜಾ ನಿದರ್ಶನ. ಆಗಸ್ಟ್ 7ರಂದು ತೆರೆ ಮೇಲೆ ಬರಲಿದ್ದೇವೆ ಎಂದು ಆ ತಂಡದ ಸದಸ್ಯರು ಖುಷಿಯಿಂದ ಹೇಳಿಕೊಳ್ಳಲು ಬಂದಿದ್ದರು. ಆದರೆ ಅಂತಿಮವಾಗಿ ಪ್ರಕಟಿಸಿದ್ದು– ‘ಅವತ್ತು ಮಳೆ ಬಿಡುಗಡೆಯಾಗಲಿದೆ. ನಾವು ಅತಿ ಶೀಘ್ರದಲ್ಲಿ ಬರಲಿದ್ದೇವೆ’.
ಮೊದಲ ಬಾರಿಗೆ ನಿರ್ದೇಶನ ಮಾಡಿರುವ ತಮ್ಮ ‘ಮುದ್ದು ಮನಸೇ’ ಸಿನಿಮಾದ ಬಗ್ಗೆ ಅನಂತ ಶೈನ್ ಅವರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಒಬ್ಬ ನಾಯಕ – ಇಬ್ಬರು ನಾಯಕಿಯರು ಇರುವ ಈ ಸಿನಿಮಾ ಮೇಲ್ನೋಟಕ್ಕೆ ತ್ರಿಕೋನ ಪ್ರೇಮಕಥೆಯಂತೆ ಕಂಡರೂ ‘ಅದು ಖಂಡಿತವಾಗಿಯೂ ಅದಲ್ಲ’ ಎನ್ನುತ್ತಾರೆ ಅವರು. ಸಿನಿಮಾ ನೋಡಿದ ವಿತರಕ ಶ್ರೀನಿವಾಸ್, ತಾವೇ ಅದನ್ನು ಹಂಚಿಕೆ ಮಾಡುವುದಾಗಿ ಹೇಳಿರುವುದು ಅನಂತ ಅವರನ್ನು ಇನ್ನಷ್ಟು ಸಂತಸ ಮೂಡಿಸಿದೆ.
ಚಿತ್ರದ ಹಾಡು ಹಾಗೂ ಟ್ರೇಲರ್ಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಿರುವ ಪ್ರತಿಕ್ರಿಯೆ ಕಂಡು ನಾಯಕ ಅರು ಪುಳಕಗೊಂಡಿದ್ದಾರೆ. ಹಳ್ಳಿ ಹಾಗೂ ಪಟ್ಟಣದ ಹುಡುಗ ಎಂಬ ಎರಡು ಶೇಡ್ಗಳ ಪಾತ್ರ ಅವರದು. ‘ಎರಡೂ ಪಾತ್ರಗಳನ್ನು ಹೋಲಿಕೆ ಮಾಡಿದಾಗ ಒಂದು ಪಾತ್ರಕ್ಕಿಂತ ಇನ್ನೊಂದರಲ್ಲಿ 15 ಕಿಲೋ ತೂಕ ಕಡಿಮೆ ಆಗಿರುವುದನ್ನು ನೀವು ನೋಡಬಹುದು’ ಎಂಬ ಮಾಹಿತಿ ಕೊಟ್ಟರು. ಹಾಡು, ಸಾಹಸದ ದೃಶ್ಯಗಳು ಕಣ್ಣಿಗೆ ಹಬ್ಬದಂತಿವೆ ಎಂಬ ಬಣ್ಣನೆಯೂ ಅರು ಅವರದು.
ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ವಿತರಕ ಶ್ರೀನಿವಾಸ್ ಎರಡೂ ತಂಡಗಳ ಜತೆ ಬೇರೆಲ್ಲೋ ಸಮಾಲೋಚನೆ ನಡೆಸಿದರು. ತಮ್ಮ ಸಂಸ್ಥೆಯಿಂದ ಒಂದೇ ದಿನ ಎರಡು ಸಿನಿಮಾ ಬಿಡುಗಡೆ ಮಾಡುವುದು ಸರಿಯಲ್ಲ ಎಂಬ ನಿರ್ಧಾರ ತಳೆದ ಶ್ರೀನಿವಾಸ್, ಮೊದಲು ‘ಮಳೆ’ ಬಿಡುಗಡೆಗೆ ನಿರ್ಧರಿಸಿದರು. ಹೀಗಾಗಿ ಆ ಚಿತ್ರದ ನಿರ್ಮಾಪಕ ಆರ್. ಚಂದ್ರು ಅವರೊಂದಿಗೆ ‘ಮುದ್ದು ಮನಸೇ’ ಪತ್ರಿಕಾಗೋಷ್ಠಿಗೆ ಹಾಜರಾದರು. ಶ್ರೀನಿವಾಸ್ ಹಾಗೂ ಚಂದ್ರು ಮಾತನಾಡಿ, ಅನಂತ್ ಹಾಗೂ ತಂಡಕ್ಕೆ ಶುಭ ಕೋರಿದರು. ಚಿತ್ರ ಬಿಡುಗಡೆ ಉತ್ಸಾಹದಲ್ಲಿದ್ದ ನಿರ್ಮಾಪಕ ಜೀವನ್ ಶೆಟ್ಟಿ, ವಿತರಕರ ನಿರ್ಧಾರಕ್ಕೆ ಸಮ್ಮತಿ ನೀಡಿ ‘ಮಳೆಗೆ ಶುಭವಾಗಲಿ’ ಎಂದಷ್ಟೇ ಹಾರೈಸಿದರು.
‘ಮುದ್ದು ಮನಸೇ’ ಬಿಡುಗಡೆ ಮುಂದೆ ಹೋಗಿರುವುದನ್ನು ನಾಲ್ಕಾರು ಜನರು ವೇದಿಕೆಯಲ್ಲಿ ಪ್ರಕಟಿಸಿದರೂ, ಅದನ್ನು ಗಮನಿಸದ ನಾಯಕಿ ಐಶ್ವರ್ಯಾ ನಾಗ್ ‘ನಮ್ಮ ಸಿನಿಮಾ 7ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ಬೆಂಬಲ ನೀಡಿ’ ಎಂದು ಕೋರಿದರು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.