ಧಾರವಾಡ: ‘ಎಲೆ ನರಾಧಮ, ನಿಮ್ಮ ಭಾರತ ವರ್ಷಭೂಮಿಯೊಳೊಂದು
ವರ್ಷಾಂತರ ನಪುಂಸಕನಾಗಿ ಚಲಿಸು ನಿರಂತರ,
ಹರಿಯ ಮೊರೆ ಹೋಗು ಹರನ ನೀನನುಸರಿಸು...’
–‘ಕುಮಾರವ್ಯಾಸ ಭಾರತ’ದ ‘ಅರಣ್ಯ ಪರ್ವ’ದಲ್ಲಿ ಇಂದ್ರಲೋಕದ ಅಪ್ಸರೆ ಊರ್ವಶಿಯು ಅರ್ಜುನನಿಗೆ ಶಾಪ ನೀಡುವ ಪ್ರಸಂಗವು ಶನಿವಾರ ಕಣ್ಮುಂದೆ ಬಂದು ನಿಂತಂತಾಗಿತ್ತು.
ಲೇಖಕಿ ತಮಿಳ್ ಸೆಲ್ವಿ ಅವರ ವಿಶೇಷ ಭಾವ, ಭಾಷಾಭಿನಯದ ಸಾಮರ್ಥ್ಯದಿಂದ ಹಳಗನ್ನಡದ ಈ ಪ್ರಸಂಗವು ಎಲ್ಲರ ಮನಕ್ಕೂ ಮುಟ್ಟಿತು. ‘ಊರ್ವಶಿ–ಅರ್ಜುನ’ನ ಸಂಭಾಷಣೆಯನ್ನು ವಿಶಿಷ್ಟ ಶೈಲಿಯಲ್ಲಿ ಪಸ್ತುತಪಡಿಸಿದ ಸೆಲ್ವಿಯವರಿಗೆ ಚಪ್ಪಾಳೆ, ಹರ್ಷೋದ್ಘಾರ, ಮೆಚ್ಚುಗೆಯ ಪ್ರವಾಹವೇ ಹರಿದುಬಂತು.
‘ಸಾಹಿತ್ಯ ಸಂಭ್ರಮ’ದಲ್ಲಿ ಶನಿವಾರ ಸಂಜೆ ಮಹಾಭಾರತ ಪರಂಪರೆ ಓದು ಗೋಷ್ಠಿಯಲ್ಲಿ ಅವರ ನಿರೂಪಣಾ ಶೈಲಿಗೆ ಸೇರಿದ್ದವರೆಲ್ಲ ತಲೆದೂಗಿದರು. ಸಮಯ ಮೀರಿದರೂ ಓದಿ, ಇನ್ನಷ್ಟು ಹೇಳಿ ಎಂಬ ಪ್ರೋತ್ಸಾಹದ ನುಡಿಗಳು ಕೇಳಿಬಂದವು.
ಅರ್ಜುನನು ಪಾಶುಪತಾಸ್ತ್ರ ಗಳಿಸಲು ಶಿವನೊಂದಿಗೆ ಯುದ್ಧ ಮಾಡುತ್ತಾನೆ. ದೇವಾನುದೇವತೆಗಳು ಆ ಯುದ್ಧವನ್ನು ನೋಡುತ್ತಾರೆ. ಪಾಶುಪತಾಸ್ತ್ರ ಗಳಿಸಿದ ನಂತರ ದಣಿದ ಅರ್ಜುನನ್ನು ಆಯಾಸ ಪರಿಹಾರಕ್ಕಾಗಿ ಇಂದ್ರನು ದೇವಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅಪ್ಸರೆಯರ ನೃತ್ಯವನ್ನು ಏರ್ಪಡಿಸು ತ್ತಾನೆ. ಅದರಲ್ಲಿ ಊರ್ವಶಿಯನ್ನು ಅರ್ಜುನನು ಎವೆಯಿಕ್ಕದೇ ನೋಡುತ್ತಿರುತ್ತಾನೆ. ಪಾಂಡವರ ಪೂರ್ವಜ ಪುರು ಮತ್ತು ಊವರ್ಶಿಯ ಸಮ್ಮಿಲನದಿಂದ ತನ್ನ ವಂಶವೃದ್ಧಿಯಾಗಿದ್ದನ್ನು ನೆನಪಿಸಿ ಕೊಂಡಿರುತ್ತಾನೆ. ಊರ್ವಶಿಯನ್ನು ಜನನಿಯ ಗೌರವ ಭಾವನೆಯಿಂದ ಆತ ನೋಡುತ್ತಿರುತ್ತಾನೆ. ಆದರೆ ಇಂದ್ರ ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಆಕೆಯನ್ನು ಅರ್ಜುನನ ಬಳಿಗೆ ಹೋಗು ವಂತೆ ಆದೇಶಿಸುತ್ತಾನೆ. ಆಕೆ ಸಂಪೂರ್ಣ ಸಿಂಗಾರಗೊಂಡು ಅರ್ಜುನನ ಬಳಿಗೆ ಹೋಗುತ್ತಾಳೆ. ಆ ಸಂದ ರ್ಭದಲ್ಲಿ ನಡೆದ ಸಂಭಾಷಣೆ ಮತ್ತು ಊರ್ವಶಿ ನೀಡುವ ಶಾಪವನ್ನು ಕವ ನದ ರೂಪದಲ್ಲಿ ಸೆಲ್ವಿ ಪ್ರಸ್ತುಪಡಿಸಿದರು.
ನಡು ನಡುವೆ ಅಗತ್ಯವಿದ್ದಾಗ ಹೊಸಗನ್ನಡ ದಲ್ಲಿ ಅರ್ಥವನ್ನು ಹೇಳಿದರು.