ಉಡುಪಿ: ಕಾಂಗ್ರೆಸ್ ಹಾಗೂ ಬಿಜೆಪಿ ಬೇಜವಾಬ್ದಾರಿಯ ಪರಿಣಾಮ ಮಹಾ ದಾಯಿ ನದಿಯ ಏಳು ಟಿಎಂಸಿ ನೀರು ಬಳಕೆ ಮಾಡಲು ಅನುಮತಿ ಕೋರಿ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾಗೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ರಾಮದಾಸ್ ಆಚಾರ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸರಿಯಾಗಿ ವಾದ ಮಂಡಿಸಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಅಲ್ಲದೆ ಕಾಂಗ್ರೆಸ್ ಹಾಗೂ ಬಿಜೆಪಿಯ ಶಾಸಕರು ಹಾಗೂ ಸಂಸದರು ಸರಿಯಾಗಿ ಕೆಲಸ ಮಾಡದ ಕಾರಣ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರು ವುದು ಸ್ಪಷ್ಟ. 2015ರಲ್ಲಿಯೇ ಆಮ್ ಆದ್ಮಿ ಪಕ್ಷದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹದಾಯಿ ವಿಷಯವನ್ನು ಗಂಭೀರ ವಾಗಿ ಪರಿಗಣಿಸುವಂತೆ ಮನವಿ ಸಲ್ಲಿ ಸಿತ್ತು. ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದರು.
ಒಬ್ಬ ಡಿವೈಎಸ್ಪಿ ಆತ್ಮಹತ್ಯೆ ಮಾಡಿ ಕೊಂಡರೆ ಅದನ್ನೇ ದೊಡ್ಡ ವಿಷಯ ಮಾಡಿ ನಾಲ್ಕೈದು ದಿನ ಸದನ ನಡೆಯಲು ಬಿಜೆಪಿ ಬಿಡುವುದಿಲ್ಲ. ಆದರೆ ರಾಜ್ಯದ ಸಾಮಾನ್ಯ ಜನ ಹಾಗೂ ರೈತರ ವಿಷಯ ಬಂದಾಗ ಅವರು ಅಂತಹ ಹೋರಾಟ ಮಾಡದೆ ನಿಷ್ಕ್ರಿಯರಾ ಗುತ್ತಾರೆ. ಒಟ್ಟಾರೆ ಆಡಳಿತ ಮತ್ತು ವಿಪಕ್ಷಗಳು ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು.
ಈಗಲಾದರೂ ಅವರು ಎಚ್ಚೆತ್ತು ಕೊಂಡು ರಾಜ್ಯದ ಜನರ ಹಿತ ಕಾಪಾಡ ಬೇಕು ಎಂದು ಅವರು ಆಗ್ರಹಿಸಿದರು.
ಪಕ್ಷದ ಮತ್ತೊಬ್ಬ ಮುಖಂಡ ರಿಚರ್ಡ್ ಫರ್ನಾಂಡಿಸ್ ಮಾತನಾಡಿ, ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಪ್ರತಿ ತಿಂಗಳು 400 ಲೀಟರ್ ನೀರನ್ನು ಉಚಿತವಾಗಿ ನೀಡಲಾಗುತ್ತಿದೆ.
ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಜನ ಸಾಮಾನ್ಯರಿಗೆ ಉಚಿತ ಆರೋಗ್ಯ ಸೇವೆ ನೀಡಲು ಮೊಹಲ್ಲಾ ಕ್ಲಿನಿಕ್ಗಳನ್ನು ಆರಂಭಿಸಲಾಗಿದೆ. ಎಂಆರ್ಐ ಹಾಗೂ ಸಿಟಿ ಸ್ಕ್ಯಾನ್ ಸೆಂಟರ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಸಹ ಈ ಬಗ್ಗೆ ವರದಿ ಮಾಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅರುಣ್ ಮಥಾಯಸ್, ಸುಕುಮಾರ್ ಬಂಗೇರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.