ಬೆಂಗಳೂರು: ಲೇಖಕ ಡಾ.ಕೆ.ಎಸ್.ನಾರಾಯಣಾಚಾರ್ಯ ಅವರು ರಚಿಸಿರುವ ‘ವಾಲ್ಮೀಕಿ ಯಾರು?’ ಕೃತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿದ್ದರೂ ಮಾರಾಟ ಮಾಡುತ್ತಿದ್ದ ಗಾಂಧಿನಗರದ ಸಪ್ನ ಬುಕ್ ಹೌಸ್ ಮಳಿಗೆ ಮೇಲೆ ಉಪ್ಪಾರಪೇಟೆ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿ 45 ಪುಸ್ತಕಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ತುಮಕೂರಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಸುರೇಶ್ ಎಂಬುವರು ಸಂಜೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಉಪ್ಪಾರಪೇಟೆ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಸಂಜೆ 6.40ರ ಸುಮಾರಿಗೆ ದಾಳಿ ನಡೆಸಿತು.
ವಾಲ್ಮೀಕಿ ಬೇಡ ಅಲ್ಲ ಬ್ರಾಹ್ಮಣ. ಆದರೆ, ಬೇಡರ ಜಾತಿಯಲ್ಲಿ ಬೆಳೆದಿದ್ದ. ಅವನು ಬ್ರಾಹ್ಮಣ ಜಾತಿಯವನಾಗಿದ್ದುದರಿಂದ ರಾಮಾಯಣದಂತಹ ಕೃತಿ ರಚಿಸಲು ಸಾಧ್ಯವಾಗಿತ್ತು ಎಂದು ಲೇಖಕರು ಆ ಕೃತಿಯಲ್ಲಿ ಬರೆದಿದ್ದಾರೆ.
ಕೃತಿಯಿಂದ ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ದೂರಿ ಎಂದು ವಾಲ್ಮೀಕಿ ಸಮುದಾಯದವರು ಪ್ರತಿಭಟನೆ ನಡೆಸಿದ್ದರಿಂದ ಸರ್ಕಾರ ಆ ಕೃತಿಯನ್ನು ಮುಟ್ಟುಗೋಲು ಹಾಕಿತ್ತು.
‘ಆ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿರುವ ಬಗ್ಗೆ ಮಾಹಿತಿ ಇರಲಿಲ್ಲ’ ಎಂದು ಮಳಿಗೆಯ ಮಾಲೀಕರು ಹೇಳಿದ್ದಾರೆ. ಕೃತಿಯ ಲೇಖಕರನ್ನು ಸಂಪರ್ಕಿಸಿ ಅವರನ್ನೂ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.