ಬೆಂಗಳೂರು: ‘ಸಮಾನತೆ ಮನೋಭಾವನೆಯನ್ನು ಬಿತ್ತಬೇಕಾದ ವಿಶ್ವವಿದ್ಯಾಲಯಗಳು ಇಂದು ಒಂದು ಕೋಮಿನ ಕೇಂದ್ರಗಳಂತೆ, ದೇವರ ಆಲಯಗಳಂತೆ ಕೆಲಸ ಮಾಡುತ್ತಿವೆ’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.
ದಲಿತ ವಿದ್ಯಾರ್ಥಿ ಒಕ್ಕೂಟವು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯ–ಸಮಾನ ಶಾಲಾ ಶಿಕ್ಷಣ ನೀತಿ’ ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕೇವಲ ಒಬ್ಬ ಕುಲಪತಿ ಕಾರಣದಿಂದ, ನಾಲ್ಕು ಸಾವಿರ ವಿದ್ಯಾರ್ಥಿಗಳಿದ್ದ ತುಮಕೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಕೇವಲ 650 ವಿದ್ಯಾರ್ಥಿಗಳು ಮಾತ್ರ ಇರುವಂತಾಯಿತು. ಇಲ್ಲಿಂದ ಆಚೆ ಬಂದವರು ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು’ ಎಂದರು.
‘ಇಂತಹ ದ್ರೋಹ ಶಿಕ್ಷಣ ಕ್ಷೇತ್ರದಲ್ಲಿ ಜಾತಿವಾದಿ ಮನಸ್ಸುಗಳಿಂದ ನಡೆಯುತ್ತಿದ್ದು, ಈಗ ಜಾಗತೀಕರ
ಣವೂ ಸೇರಿಕೊಂಡಿದೆ. ಇದರಿಂದ, ವಿದ್ಯಾರ್ಥಿ ಸಮುದಾಯ ಸಂಘಟಿತವಾಗಿ ಖಾಸಗಿ ವಲಯದಲ್ಲಿಯೂ ಮೀಸಲಾತಿ ತರಲು ಹೋರಾಟ ಮಾಡದ ಹೊರತು ತಮ್ಮ ಪಾಲಿನ ಅವಕಾಶವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಪ್ರೌಢಶಾಲಾ ಮಕ್ಕಳ ಗ್ರಂಥಾಲಯಗಳಿಗೆ ಮನುವಿನ ವಿಚಾರಧಾರೆಯುಳ್ಳ ಪುಸ್ತಕವನ್ನು ಸರ್ಕಾರ ಬಿಡುಗಡೆ ಮಾಡಿದೆ. ಗ್ರಂಥಾಲಯಗಳು ಮಕ್ಕಳ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಇಂದಿನ ಮಕ್ಕಳು ಮನುವಿನ ವಿಚಾರಧಾರೆಯ ಗ್ರಂಥಗಳನ್ನು ಓದಿದರೆ, ಅವರ ಮನಸ್ಸಿನಲ್ಲಿ ಏನು ಪರಿಣಾಮವಾಗುತ್ತದೆ ಎಂದು ಸರ್ಕಾರ ಯೋಚನೆ ಮಾಡಬೇಕಾಗಿದೆ. ಗ್ರಂಥಾಲಯಗಳನ್ನು ಕಸದ ಬುಟ್ಟಿಗಳನ್ನಾಗಿ ಪರಿವರ್ತಿಸಲಾಗುತ್ತಿದೆ’ ಎಂದರು.
‘ಹಿಂದಿನ ಸರ್ಕಾರ ನೇಮಿಸಿದ್ದ ಆಯ್ಕೆ ಸಮಿತಿಯನ್ನು ಕೂಡಲೇ ರದ್ದು ಮಾಡಬೇಕಿತ್ತು. ಈಗಲಾದರೂ ಸರ್ಕಾರ ಬೋಗಸ್ ಪ್ರಕಾಶನ ಸಂಸ್ಥೆಗಳು ಮತ್ತು ಅವುಗಳ ಅನೇಕ ಟಿಸಿಲೊಡೆದ ಪ್ರಕಾಶನ ಸಂಸ್ಥೆಗಳನ್ನು ಶೋಧಿಸುವುದಕ್ಕೆ ಸರಿಯಾದ ಆಯ್ಕೆ ಸಮಿತಿ ರಚನೆ ಮಾಡಬೇಕು ಅಥವಾ ಪುಸ್ತಕಗಳನ್ನು ಖರೀದಿಸುವ ಕ್ರಮವನ್ನಾದರೂ ಬದಲಿಸಬೇಕು’ ಎಂದು ಹೇಳಿದರು.
ಶಿಕ್ಷಣ ತಜ್ಞ ಪಿ.ವಿ.ನಿರಂಜನಾರಾಧ್ಯ ಮಾತನಾಡಿ, ‘ರಾಜ್ಯದಲ್ಲಿ ಸಮಾನ ಶಿಕ್ಷಣವನ್ನು ಜಾರಿಗೆ ತರಲು ಸರ್ಕಾರ ಸಂಕಲ್ಪ ಮಾಡಬೇಕು. ಸಮಾನ ಶಿಕ್ಷಣ ನೀತಿ ಜಾರಿಗೆ ಬಾರದೆ, ಸಮಾನತೆ ಸಾಧ್ಯವಿಲ್ಲ. ಜ್ಯೋತಿ ಬಾ ಫುಲೆ ಅವರ ಜನ್ಮದಿನಾಚರಣೆಯನ್ನು ‘ಸಮಾನ ಶಾಲಾ ಶಿಕ್ಷಣ ದಿನ’ವನ್ನಾಗಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.
‘ನೇಮಕ ತಡೆಗೆ ಹುನ್ನಾರ’
‘ಕೆಪಿಎಸ್ಸಿ ನೇಮಕಾತಿಯಲ್ಲಿ ಮೊದಲ ಬಾರಿಗೆ ಸೋಲಿಗರ ಹೆಣ್ಣು ಮಗಳು, ಅಕ್ಷರ ವಂಚಿತ ಸಮುದಾಯಗಳ ಅನೇಕ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದವರು ಸೇರಿದ್ದಾರೆ. ಹೋರಾಟದ ಹೆಸರಿನಲ್ಲಿ ಇವರ ನೇಮಕವಾಗದಂತೆ ತಡೆಯುವ ಹುನ್ನಾರ ನಡೆಯುತ್ತಿದೆ’ ಎಂದು ಕಾರ್ಯಕ್ರಮದಲ್ಲಿ ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.