ಬೆಂಗಳೂರು: ‘ದೇಶದಲ್ಲಿ 150ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿವೆ. ಆದರೆ, ಅವು ಈವರೆಗೆ ಒಬ್ಬ ಕಲಾವಿದನನ್ನು ಕೂಡ ಸೃಷ್ಟಿಸಿಲ್ಲ. ಗುರುಕುಲ ಮಾದರಿಯ ಸಂಗೀತ ಶಾಲೆ ನಡೆಸುವ ಸಂಗೀತಗಾರರು ಉತ್ತಮ, ಸೃಜನಶೀಲ ಕಲಾವಿದರನ್ನು ರೂಪಿಸುವುದರೊಂದಿಗೆ ಸಂಗೀತ ಪರಂಪರೆಯನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.|
ಸರಸ್ವತಿ ಸಂಗೀತ ವಿದ್ಯಾಲಯ ಮತ್ತು ಇಸ್ಕಾನ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸಂಗೀತ ವಿದುಷಿ ಲಕ್ಷ್ಮೀ ಗೋವಿಂದ ಭಾವೆ ಜನ್ಮ ಶತಮಾನೋತ್ಸವ ಮತ್ತು ನಾದ ಸೌರಭ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.
‘ಬ್ರಿಟಿಷರ ಶಿಕ್ಷಣ ಪದ್ಧತಿ ನಮ್ಮ ದೇಶದಲ್ಲಿ ಆರಂಭಗೊಂಡಾಗ ನಾವು ನಮ್ಮ ಪಾರಂಪರಿಕ ಶಿಕ್ಷಣ ಪದ್ಧತಿಯನ್ನೇ ಹೀಯಾಳಿಸಲು ಪ್ರಾರಂಭಿಸಿದೆವು. ಬ್ರಿಟಿಷರದೆಲ್ಲ ಶ್ರೇಷ್ಠ ಎನ್ನುವ ಭಾವನೆ ನಮ್ಮಲ್ಲಿ ಮೊಳೆಯಿತು. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬ್ರಿಟಿಷರ ವಿಧಾನವನ್ನೇ ಅಳವಡಿಸಿಕೊಂಡು ತರಗತಿ ಆಧಾರಿತ ಕಲಿಕೆ ಆರಂಭಿಸಿದೆವು. ಇದರಿಂದಾಗಿ ನಮ್ಮ ವಿಶ್ವವಿದ್ಯಾಲಯಗಳ ಸಂಗೀತ ವಿಭಾಗಗಳಿಗೆ ಕಲಾವಿದರನ್ನು ಸೃಷ್ಟಿಸಲು ಆಗಲಿಲ್ಲ’ ಎಂದರು.
ಆಕಾಶವಾಣಿ ನಿವೃತ್ತ ನಿರ್ದೇಶಕ ಎನ್.ಎಸ್.ಕೃಷ್ಣಮೂರ್ತಿ ಮಾತನಾಡಿ, ‘ಮೈಸೂರು ಅರಸರು ಹಿಂದೂಸ್ತಾನಿ ಸಂಗೀತ ಕಲಾವಿದರನ್ನು ಸಂಸ್ಥಾನಕ್ಕೆ ಆಹ್ವಾನಿಸಿ ಕರ್ನಾಟಕ ಸಂಗೀತ ಕಲಾವಿದರಿಗೆ ಹಿಂದೂಸ್ತಾನಿ ಸಂಗೀತ ಪರಿಚಯಿಸುವ ಕೆಲಸ ಮಾಡಿದರು. ಆದ್ದರಿಂದ, ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಪರಂಪರೆಗಳು ರಾಜ್ಯದಲ್ಲಿ ಸಹಿಷ್ಣುತೆಯಿಂದ ಬೆಳೆದವು. ಈ ವೈಶಿಷ್ಟ್ಯವನ್ನು ಹೊಂದಿದ ಏಕೈಕ ರಾಜ್ಯ ನಮ್ಮದು’ ಎಂದು ಹೇಳಿದರು.
‘ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಅವರ ಗ್ವಾಲಿಯರ್ ಘರಾಣೆಯ ಗರಡಿಯಲ್ಲಿ ಪಳಗಿದ ಗೋವಿಂದ ವಿಠಲ ಭಾವೆಯವರು ಸರಸ್ವತಿ ಸಂಗೀತ ವಿದ್ಯಾಲಯವನ್ನು 1930ರಲ್ಲಿ ತೆರೆಯುವ ಮೂಲಕ ಸಂಗೀತ ಪರಂಪರೆಯನ್ನು ಬೆಳೆಸುತ್ತ ಬಂದರು. ಅವರ ತರುವಾಯ ಅವರ ಪತ್ನಿ ಲಕ್ಷ್ಮೀ, ಇದೀಗ ಅವರ ಮಗಳು ಶ್ಯಾಮಲಾ ಅವರು ವಿದ್ಯಾಲಯವನ್ನು ಒಂದು ತಪಸ್ಸಿನಂತೆ ಮುಂದುವರಿಸಿಕೊಂಡು ಬರುತ್ತಿದ್ದಾರೆ’ ಎಂದು ತಿಳಿಸಿದರು.
ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ‘ಸಂಗೀತ ಶಾಲೆಯೊಂದನ್ನು 85 ವರ್ಷಗಳ ಕಾಲ ನಿರಂತರವಾಗಿ ನಡೆಸಿಕೊಂಡು ಬರುವುದು ಸಾಮಾನ್ಯ ಕೆಲಸವಲ್ಲ. ರಾಜ್ಯದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಪರಂಪರೆಗಳನ್ನು ಒಟ್ಟಾಗಿ ಬೆಳೆಸುತ್ತ ಬಂದ ಭಾವೆ ಕುಟುಂಬದವರ ಸಂಗೀತ ಕೈಂಕರ್ಯ ಶ್ಲಾಘನೀಯವಾದದ್ದು’ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ, ಸಿ.ಎಂ.ಆರ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ಟೊಯೊಟೊ ಕಿರ್ಲೋಸ್ಕರ್ ಮೋಟಾರ್ಸ್ನ ಗೀತಾಂಜಲಿ, ವಿದ್ಯಾಲಯದ ಕಾರ್ಯಕಾರಿ ನಿರ್ದೇಶಕಿ ವಿದುಷಿ ಶ್ಯಾಮಲಾ ಜಿ.ಭಾವೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಬಿ.ಬಸವರಾಜು, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರವೀಂದ್ರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.