ಮಂಗಳೂರು: ‘ಸಮಾಜದ ವಿವಿಧ ಸಂಘಟನೆಗಳು ನಿರ್ದಿಷ್ಟ ಧ್ಯೇಯಗಳನ್ನಿರಿಸಿ ಕೆಲಸ ಮಾಡಬೇಕು. ನಿಸ್ವಾರ್ಥ ದುಡಿಮೆಯೊಂದಿಗೆ ನಮ್ಮವರ ಸಂಕಟಗಳಿಗೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ’ ಎಂದು ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಡಾ. ವಿಶ್ವಸಂತೋಷ ಭಾರತೀ ಸ್ವಾಮೀಜಿ ಹೇಳಿದರು.
ಕೊಟ್ಟಾರ–ಕೋಡಿಕಲ್ ಬಂಟರ ಸಂಘದ ವತಿಯಿಂದ ಶ್ರೀಕೃಷ್ಣ ಜ್ಞಾನೋದಯ ಭಜನಾ ಮಂದಿರದಲ್ಲಿ ಜರುಗಿದ ಮಹಾಸಭೆಯ ಅಂಗವಾಗಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೈಸರ್ಗಿಕವಾಗಿ ಮಳೆ ನೀರನ್ನು ಇಂಗುಗುಂಡಿಗಳಲ್ಲಿ ಶೇಖರಿಸಿ ಸದುಪಯೋಗ ಮಾಡುವಂತೆ, ಶ್ರೀಮಂತರ ಸಂಪತ್ತಿನ ಒಂದು ಭಾಗವನ್ನು ತಳಮಟ್ಟದವರ ಅಭಿವೃದ್ಧಿಗೆ ಬಳಸಿಕೊಳ್ಳುವ ಸಲುವಾಗಿ ಕಾದಿರಿಸಬೇಕಾಗಿದೆ ಎಂದು ಅವರು ಹೇಳಿದರು.
ಕೊಟ್ಟಾರ– ಕೋಡಿಕಲ್ ಬಂಟರ ಸಂಘದ ಅಧ್ಯಕ್ಷ ಬಿ. ಕಮಲಾಕ್ಷ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ಇದೇ ಸಂದರ್ಭದಲ್ಲಿ ಬಿ. ಕಮಲಾಕ್ಷ ಶೆಟ್ಟಿ ಸಿರಿಮನೆ ಅವರು ಸಂಗ್ರಹಿಸಿದ ಹಳೆಯ ನಾಣ್ಯ ಹಾಗೂ ನೋಟುಗಳ ಸಂಗ್ರಹವನ್ನು ಬಾರಕೂರು ಮಹಾಸಂಸ್ಥಾನದ ವಸ್ತುಸಂಗ್ರಹಾಲಕ್ಕೆ ಹಸ್ತಾಂತರಿಸಲಾಯಿತು.
ಬಾರಕೂರು ಮಹಾಸಂಸ್ಥಾನದ ಮಂಗಳೂರು ಘಟಕದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಹೊಟೇಲ್ ಸುರಭಿ ಮಾಲಕ ಎ. ಸುಧೀರ್ ಪ್ರಸಾದ್ ಶೆಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ರೀಡಾ ಭಾರತಿ ಅಧ್ಯಕ್ಷ ಕೆ. ಚಂದ್ರಶೇಖರ ರೈ, ಸಂಘದ ಉಪಾಧ್ಯಕ್ಷರಾದ ಪುಷ್ಪರಾಜ ಶೆಟ್ಟಿ, ತಂರ್ಜೀಗುತ್ತು ರೋಹಿತ್ ಶೆಟ್ಟಿ, ಸಂಘದ ಮಾಜಿ ಕಾರ್ಯದರ್ಶಿ ಸುನೀಲ್ ಕುಮಾರ್ ಶೆಟ್ಟಿ, ಪದಾಧಿಕಾರಿಗಳಾದ ಶಿವಪ್ರಸಾದ್ ಶೆಟ್ಟಿ, ರೇಖಾ ಕೆ. ಶೆಟ್ಟಿ ಉಪಸ್ಥಿತರಿದ್ದರು.
ಬಂಟರ ಸಂಘದ ಉಪಾಧ್ಯಕ್ಷ ಮಧುಕರ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಅಶೋಕ ರೈ ಪ್ರಸ್ತಾವನೆಗೈದರು. ಮಾಜಿ ಅಧ್ಯಕ್ಷ ಮಹಾಬಲ ಚೌಟ ವಂದಿಸಿದರು.