ಉಡುಪಿ: ಶಿವಸೇನೆಯ ಸಂಸದರೊಬ್ಬರು ಉಪವಾಸ ನಿರತ ಸಿಬ್ಬಂದಿಯ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಪ್ರಕರಣ ಮತ್ತು ಪ್ಯಾಲೆಸ್ಟೀನ್ ಮೇಲೆ ಇಸ್ರೆಲ್ ನಡೆಸುತ್ತಿರುವ ಆಕ್ರಮಣವನ್ನು ಖಂಡಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಸದಸ್ಯರು ನಗರದ ಸರ್ವಿಸ್ ಬಸ್ ನಿಲ್ದಾಣದ ಸಮೀಪದ ಗಾಂಧಿ ಪ್ರತಿಮೆ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.
ದೆಹಲಿಯ ಮಹಾರಾಷ್ಟ್ರ ಸದನದಲ್ಲಿ ಗಲಭೆ ನಡೆಸಿ, ಉಪವಾಸ ಇದೆ ಎಂದು ಹೇಳಿದರೂ ರೈಲ್ವೆ ಆಹಾರ ಸರಬರಾಜು ಸಂಸ್ಥೆಯ ಸಿಬ್ಬಂದಿಗೆ ಬಲವಂತವಾಗಿ ಚಪಾತಿ ತಿನ್ನಿಸಿ ಅವರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ್ದಾರೆ. ಈ ಕೃತ್ಯವನ್ನು ಮಾಡುವ ಮೂಲಕ ಸಂವಿಧಾನ ರಕ್ಷಿಸುವ ಜನಪ್ರತಿನಿಧಿಗಳಾಗಿ ಕಾರ್ಯಾಚರಿಸುತ್ತೇವೆ ಎಂಬ ಪ್ರಮಾಣವಚನವನ್ನು ಮುರಿದು ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ. ಲೋಕಸಭಾಧ್ಯಕ್ಷರು ಕೂಡಲೆ ಈ ಸಂಸದರ ಕೃತ್ಯವನ್ನು ಗಮನಕ್ಕೆ ತೆಗೆದುಕೊಂಡು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಂತರರಾಷ್ಟ್ರೀಯ ನ್ಯಾಯ ನಿರ್ಣಯಕ್ಕೆ ಅಪಮಾನ ಉಂಟು ಮಾಡುವ, ಭಾರತವನ್ನು ಅಪರಾಧಿ ಪ್ರಭುತ್ವಕ್ಕೆ ತಳ್ಳುವ ನಿಲುವು ಇದಾಗಿದೆ. ಇದನ್ನು ಖಂಡಿಸಿದ ಪ್ರತಿಭಟನಾಕಾರರು, ಇಸ್ರೆಲ್ ಆಕ್ರಮಣವನ್ನು ನಿಲ್ಲಿಸುವಂತಹ ರಾಜತಾಂತ್ರಿಕ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೋಮುಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್, ಕೆ.ಫಣಿರಾಜ್, ಜಯನ್ ಮಲ್ಪೆ, ಡಿ.ಎಸ್.ಬೆಂಗ್ರೆ ಮಹಮ್ಮದ್ ಮರಕಡ, ಹುಸೇನ್ ಕೋಡಿಬೆಂಗ್ರೆ ಇದ್ದರು.