ಮೈಸೂರು: ‘ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರ ಚಿಂತನೆಗಳು ಕನ್ನಡ ಸಾಹಿತ್ಯವನ್ನು ಪರಿಭಾವಿಸುವ ಕ್ರಮಗಳನ್ನು ಪುನರ್ ಅವಲೋಕನ ಮಾಡುವಂತೆ ಮಾಡಿವೆ’ ಎಂದು ಕುವೆಂಪು ವಿಶ್ವಿವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.
5ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ‘ಸಮ್ಮೇಳನ ಅಧ್ಯಕ್ಷಅವರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಂತ್ರ, ಕಾಳಾಮುಖ, ಪಾಶುಪತ ಮೊದಲಾದ ಶೈವ ಪಂಥೀಯ ವಿಚಾರಧಾರೆಗಳನ್ನು ಅಭ್ಯಾಸ ಮಾಡಿ ಅದರಲ್ಲಿ ತಳ ಸಮುದಾಯವನ್ನು ಅವರು ಹುಡುಕಿದರು. ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿ ಕನ್ನಡಕ್ಕೆ ಅದನ್ನು ಕಸಿ ಮಾಡಿದರು’ ಎಂದು ಅವರ ಸಾಹಿತ್ಯಕ ಚಿಂತನೆಗಳನ್ನು ಕುರಿತು ಅವರು ಮಾತನಾಡಿದರು.
‘ತಳ ಸಮುದಾಯಗಳ ಜ್ಞಾನ ಶಿಸ್ತುಗಳನ್ನು ಪುನರ್ ಪರಿಶೀಲಿಸುವಂತೆ ಮಾಡುವಲ್ಲಿ ಅವರು ಸಫಲರಾದರು. ತಳ ಸಂಸ್ಕೃತಿಯಿಂದ ಪ್ರಧಾನ ಸಂಸ್ಕೃತಿಯ ಗೋಡೆಗಳನ್ನು ಮೀರಿದರು’ ಎಂದು ವಿವರಿಸಿದರು.
‘ಶೋಷಣೆ ಮಾಡುವ ಪುರೋಹಿತಶಾಹಿ ವರ್ಗದವರ ವಿರುದ್ಧ ಅಬ್ಬರಿಸಿದವರಲ್ಲ. ಆದರೆ, ಮೆಲ್ಲಗೆ ಚುರುಕನ್ನು ಮುಟ್ಟಿಸಿದವರು. ಬಾಲ್ಯದಲ್ಲಿ ಕಡು ಬಡತನ, ನೋವು, ಅಪಮಾನ, ಹಸಿವುಗಳ ಮಧ್ಯೆಯೇ ಬೆಳೆದು ಶ್ರೇಷ್ಠ ಚಿಂತಕರಾದರು’ ಎಂದು ಅವರು ಮಲ್ಲೇಪುರಂ ಅವರ ಬದುಕನ್ನು ಕುರಿತು ವಿವರಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ, ಡಾ.ಸಿ.ಪಿ. ಸಿದ್ಧಾಶ್ರಮ, ಸತ್ಯಮಂಗಲ ಮಹಾದೇವ,
ಡಾ.ಬಿ.ಎಂ. ಕಟ್ಟಿ, ಡಾ.ಕುಶಾಲ ಬರಗೂರ ಸೇರಿದಂತೆ ಹಲವರು ಹಾಜರಿದ್ದರು.