ಬೆಂಗಳೂರು: ‘ಕನ್ನಡ ಮತ್ತು ಇಲಾಖೆಯಲ್ಲಿ ಶೀಘ್ರದಲ್ಲಿಯೇ ಇ – ಆಡಳಿತ ಜಾರಿಗೆ ತರಲಾಗುವುದು’ ಎಂದು ಸಚಿವೆ ಉಮಾಶ್ರೀ ಹೇಳಿದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ 2013–14, 2014 –15ನೇ ಸಾಲುಗಳ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಲಾಖೆಯನ್ನು ಬಲಪಡಿಸುವುದರೊಂದಿಗೆ ಉತ್ತಮ ಸ್ವರೂಪ ನೀಡಲು ನಿರ್ಧರಿಸಲಾಗಿದೆ. ಜತೆಗೆ, ಇಲಾಖೆಯ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಶಕ್ತಿಗಳನ್ನು ದೂರವಿಟ್ಟು, ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ಕೆಲವೇ ದಿನಗಳಲ್ಲಿ ಇ – ಆಡಳಿತ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದು ಹೇಳಿದರು.
‘ರಾಜ್ಯದಲ್ಲಿರುವ ಸಂಘ ಸಂಸ್ಥೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಲ್ಲ ಜಿಲ್ಲೆಗಳ ಸಾಂಸ್ಕೃತಿಕ ಸಂಘಗಳಿಂದ ಅನುದಾನಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಈ ವರ್ಷ ಶೇ 30ರಷ್ಟು ಜಾಸ್ತಿ ಅರ್ಜಿಗಳು ಬಂದಿವೆ.ಅವುಗಳ ಪರಿಶೀಲನೆಗಾಗಿ ಸಮಿತಿಯೊಂದನ್ನು ನೇಮಕ ಮಾಡಿ, ಆಯ್ಕೆಯಾದ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ ಆರ್ಟಿಜಿಎಸ್ (ಬ್ಯಾಂಕ್ ಶಾಖೆಗೆ ತಕ್ಷಣವೇ ಹಣ ವರ್ಗಾವಣೆ ಮಾಡುವಂತಹ ವ್ಯವಸ್ಥೆ) ಮೂಲಕ ನೇರ ಧನ ಸಹಾಯ ಸಂದಾಯ ಮಾಡಲಾಗುವುದು’ ಎಂದರು.
ತಬಲಾ ವಾದಕ ಪಂಡಿತ್ ರಘುನಾಥ್ ನಾಕೋಡ್, ಗಮಕಿ ಸಿ.ವಿ. ಶ್ರೀಮತಿ ಸೇರಿದಂತೆ 19 ಕಲಾವಿದರಿಗೆ 2013 – 14ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ವೀಣಾ ವಾದಕ ಡಿ.ಬಾಲಕೃಷ್ಣ, ನೃತ್ಯ ನಿರ್ದೇಶಕಿ ಪ್ರೊ.ವಿಜಯಾ ಮಾರ್ತಾಂಡ, ಗಾಯಕಿ ಮಂಜುಳಾ ಗುರುರಾಜ್ ಸೇರಿದಂತೆ 18 ಕಲಾವಿದರಿಗೆ 2014 – 15ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗಾಯಕಿ ಇಂದೂ ವಿಶ್ವನಾಥ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.