ವಿಜಾಪುರ: -ಸಾಹಿತ್ಯ ಸಹೃದಯನ ಮನಮುಟ್ಟಿ ಗೆಲ್ಲಬೇಕು. ಸಮಕಾಲೀನ ಸಮಾಜದ ಚಿಂತನೆ ಸಾಹಿತ್ಯದಲ್ಲಿದ್ದಾಗ ಅದು ಜನಸ್ಪಂದನೆಗೆ ಪಾತ್ರವಾಗುತ್ತದೆ ಎಂದು ಕವಯತ್ರಿ ಡಾ.ಸರಸ್ವತಿ ಚಿಮ್ಮಲಗಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಕಸಾಪ ಭವನದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಸಂಭ್ರಮ ಜಿಲ್ಲಾ ಕವಿಗೋಷ್ಠಿಯಲ್ಲಿ ಮಾತನಾಡಿ ಸಾಹಿತಿ ಸತತ ಅಭ್ಯಾಸ ಮಾಡಬೇಕು. ಸಮಾಜವನ್ನು ಅಂತರಂಗದ ಕಣ್ಣುಗಳಿಂದ ನೋಡಬೇಕು. ಈ ಪ್ರಕ್ರಿಯೆಯಿಂದ ಮೂಡಿಬಂದ ಕಾವ್ಯ ಸಾಹಿತ್ಯ ಶ್ರೇಷ್ಠತೆ ಪಡೆಯುತ್ತದೆ ಎಂದು ಹೇಳಿದರು.
ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಮಾತನಾಡಿ ಕವಿ ಸಹಜ ಸ್ವಾಭಾವಿಕವಾಗಿ ಕವಿತೆ ಬರೆಯಬೆಕು. ನಮ್ಮ ದೇಶಿ ನೆಲೆಯ ಆಲೋಚನೆಗಳನ್ನು ಹೀರಿಕೊಂಡು ಸೃಜನಶೀಲತೆಯಲ್ಲಿ ತೊಡಗಿದಾಗ ಒಳ್ಳೆಯ ಸಾಹಿತ್ಯ ರಚನೆಗೊಳ್ಳುತ್ತದೆ. ಸಾಹಿತ್ಯ ನಮ್ಮ ಮನಸ್ಸು ಅರಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಎಸ್.ಕೆ.ಕೊಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ರಂಗನಾಥ ಅಕ್ಕಲಕೋಟ, ವಿದ್ಯಾವತಿ ಅಂಕಲಗಿ, ಡಿ.ಎಸ್.ಚಳಗೇರಿ, ಶ್ರೀದೇವಿ ಉತ್ಲಾಸರ, ಡಾ.ಅಮೀರುದ್ದಿನ್ ಖಾಜಿ, ಡಾ.ರೇಖಾ ಪಾಟೀಲ, ಬಾಬುರಾವ ಕುಲಕರ್ಣಿ, ಶೇಷರಾವ ಮಾನೆ, ಹೇಮಲತಾ ವಸ್ತ್ರದ, ಕೆ.ಸುನಂದಾ, ಆರ್.ಕೆ.ಬಡಿಗೇರ, ಶಿವಾನಂದ ಹಿರೇಮಠ, ಶೈಲಶ್ರೀ ಪಟ್ಟಣಶೆಟ್ಟಿ, ಸಂಗಮೇಶ ಬದಾಮಿ, ಡಾ.ಸುಜಾತಾ ಚಲವಾದಿ, ರಾಜೇಂದ್ರ ಬಿರಾದಾರ, ರಮೇಶ ಬಸರಗಿ ಕವಿತೆ ವಾಚಿಸಿದರು. ಡಾ.ಕಾಂತು ಇಂಡಿ, ಡಾ.ಎಂ.ಎಸ್.ಮದಭಾವಿ, ಕೆ.ಎಫ್.ಅಂಕಲಗಿ, ಸಿ.ಎಂ.ದೇವರಡ್ಡಿ, ಎಸ್.ಎಸ್.ಖಾದ್ರಿ ಇನಾಮದಾರ, ಅತೀಕ ತಾಜಿಮ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಮೇತ್ರಿ ನಿರೂಪಿಸಿದರು. ಡಾ.ವಿ.ಎಂ. ಬಾಗಯತ್ ವಂದಿಸಿದರು.