ಶಿರಸಿ: ನವ್ಯ, ನವೋದಯ, ಬಂಡಾಯ ಸಾಹಿತ್ಯ ಪ್ರಕಾರಗಳು ಸ್ಪಷ್ಟ ಸ್ವರೂಪ ಹೊಂದಿವೆ. ಆದರೆ ಆಧುನಿಕೋತ್ತರ ಬರವಣಿಗೆ ವಿಕೇಂದ್ರೀಕರಣಗೊಂಡು ಭಿನ್ನತೆಯೆಡೆಗೆ ಸಾಗಿದೆ. ಇದನ್ನು ನಿವಾರಿಸಲು ಬರಹಗಾರ ಬರವಣಿಗೆಯ ಪ್ರತಿ ಹಂತದಲ್ಲಿ ಅಂತಃಚರ್ಚೆಗೆ ಒಳಗಾಗಬೇಕು ಎಂದು ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ ಹೇಳಿದರು.
ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಕೆ.ಸತ್ಯನಾರಾಯಣ ಅವರಿಗೆ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಆಧುನಿಕೋತ್ತರ ಸಾಹಿತ್ಯ ಬರವಣಿಗೆಗೆ ಸ್ಪಷ್ಟ ರೂಪ ಇಲ್ಲದೇ ಮಿಶ್ರ ಸಾಹಿತ್ಯ ಪ್ರಕಾರ ಸೃಷ್ಟಿಯಾಗುತ್ತಿದೆ. ಪ್ರತಿ ಸಾಹಿತ್ಯ ಪ್ರಕಾರಕ್ಕೆ ಒಂದು ಸ್ಪಷ್ಟ ಕೇಂದ್ರ ಇರಬೇಕು. ಅದರೊಳಗಿನ ಎಲ್ಲ ಪ್ರಕಾರಗಳು ಕೇಂದ್ರಕ್ಕೆ ಬಂದು ಸೇರಬೇಕು. ಆಗ ಹುಟ್ಟುವ ಸಾಹಿತ್ಯ ನಿರ್ದಿಷ್ಟ ಸ್ವರೂಪ ಪಡೆದು ಓದುಗನಿಗೆ ನೈಜ ಸತ್ವವನ್ನು ಒದಗಿಸುತ್ತದೆ ಎಂದರು.
ಸತ್ಯದ ಸ್ವರೂಪ ಬರಹಗಾರ ಬಳಸುವ ಭಾಷೆಯಿಂದ ವ್ಯತ್ಯಾಸವಾಗುತ್ತದೆ. ಸತ್ಯವನ್ನು ಭಾಷಾಂತರಿಸಿದಾಗ ಮೂಲಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಬರಹಗಾರ ಬರವಣಿಗೆಯ ಪ್ರತಿ ಹೆಜ್ಜೆಗೆ ತನ್ನೊಳಗೆ ತಾನು ಚರ್ಚಿಸುವ ಹಾಗೂ ಸತ್ಯ ಶೋಧನೆ ಮಾಡುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಕೆ. ಸತ್ಯನಾರಾಯಣ ಮಾತನಾಡಿ ‘ಕತೆಗಳಲ್ಲಿ ಕಲ್ಪನಾನುಭವಕ್ಕೆ ಆದ್ಯತೆ ನೀಡಬೇಕು. ಹಾಗೆ ಸಾಗಿದಾಗ ಕತೆಯ ಜೀವಾಳವನ್ನು ಓದುಗರಿಗೆ ತಲುಪಿಸುವ ಜೊತೆಗೆ ಬರಹಗಾರನ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು. ಎಂದು ಹೇಳಿದರು.
ಪ್ರಶಸ್ತಿಗಳಲ್ಲಿ ಎರಡು ವಿಧಗಳಿವೆ. ಕೆಲವು ಸಾಹಿತ್ಯ ಮತ್ತು ಸಂಸ್ಕೃತಿಗೆ ಮೀಸಲಾಗಿರುವ ಪ್ರಶಸ್ತಿಗಳಾದರೆ, ಇನ್ನು ಕೆಲವು ಪ್ರಶಸ್ತಿಗಳು ಲೇಖಕನಿಗೆ ಹೊಸ ಸಂಬಂಧ ಸ್ಥಾಪಿಸುವ, ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡುತ್ತವೆ. ಕೆಲವು ಪ್ರಶಸ್ತಿಗಳನ್ನು ಮೊತ್ತದ ಮೌಲಿಕತೆಯಿಂದ ಅಳೆಯುವಂತಿಲ್ಲ. ಅವುಗಳಲ್ಲಿ ಬಿಎಚ್ಶ್ರೀ ಪ್ರಶಸ್ತಿ ಸಹ ಒಂದಾಗಿದೆ ಎಂದರು. ವಿಷ್ಣು ಹೆಗಡೆ ಸ್ವಾಗತಿಸಿದರು. ಕಿರಣ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಜಿ.ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಿ.ಎನ್.ಹೆಗಡೆ ನಿರೂಪಿಸಿದರು.