ಬೆಂಗಳೂರು: ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ದೂರು ದಾಖಲಿಸಿಕೊಳ್ಳದ ಯಲಹಂಕ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ‘ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸದೇ ಹೋದರೆ 48 ಗಂಟೆಯೊಳಗೆ ಬೆಂಗಳೂರು ಪೊಲೀಸ್ ಕಮಿಷನರ್ ರಾಜೀನಾಮೆ ನೀಡುವುದನ್ನು ನೋಡುವ ಸಮಯ ಬರಲಿದೆ’ ಎಂದು ಖಡಕ್ ಎಚ್ಚರಿಕೆ ನೀಡಿತು. ಶಶಿಧರ್ ಎಂಬವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಪೀಠವು ಬುಧವಾರ ವಿಚಾರಣೆ ನಡೆಸಿತು.
ಪ್ರಕರಣದ ವಿವರ: 2000–2005ರಲ್ಲಿ ಎಸ್.ಆರ್.ವಿಶ್ವನಾಥ್ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಹೆಸರಘಟ್ಟ ಕ್ಷೇತ್ರದಿಂದ ಆರಿಸಿ ಬಂದಿದ್ದರು. ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ ಅವರು ಎಚ್ಎಎಲ್ನಲ್ಲಿ ಉದ್ಯೋಗಿಯಾಗಿದ್ದರು. ಚುನಾವಣೆಯಲ್ಲಿ ಗೆದ್ದ ಬಳಿಕ ಅವರು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿಯೇ ಮುಂದುವರಿದು ಮಾಸಿಕ ವೇತನ ಪಡೆದಿದ್ದರು. ಅಂತೆಯೇ ಜಿಲ್ಲಾ ಪಂಚಾಯ್ತಿ ಪ್ರತಿನಿಧಿಯಾಗಿ ಸರ್ಕಾರದ ಗೌರವಧನವನ್ನೂ ಪಡೆದಿದ್ದರು.
ಶಶಿಧರ್ ಅವರು ವಿಶ್ವನಾಥ್ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋಗಿದ್ದರು. ಆದರೆ ಪ್ರಕರಣ ದಾಖಲಿಸುವಲ್ಲಿ ಇನ್ಸ್ಪೆಕ್ಟರ್ ‘ಇದು ನನ್ನ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲ’ ಎಂಬ ಉತ್ತರ ನೀಡಿ ನುಣುಚಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಶಶಿಧರ್ ಅವರು ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಶಶಿಧರ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ಪರಿಹಾರ ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ಪೀಠವು ಸೂಕ್ತ ವಿವರಣೆ ನೀಡಲು ಅಂದು ದೂರು ದಾಖಲಿಸಿಕೊಳ್ಳುವಲ್ಲಿ ನುಣುಚಿಕೊಂಡ ಇನ್ಸ್ಪೆಕ್ಟರ್ ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಇನ್ಸ್ಪೆಕ್ಟರ್ ಗೈರು ಹಾಜರಾಗಿದ್ದರು. ಹೀಗಾಗಿ ಪೀಠವು ಪೊಲೀಸ್ ಕಮಿಷನರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ನಿತ್ಯಾನಂದ ಸ್ವಾಮಿ ಅರ್ಜಿ ವಜಾ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯ ಪುರುಷತ್ವ ಪರೀಕ್ಷೆಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಹೈಕೋರ್ಟ್ ಬುಧವಾರ ಕಾಯಂಗೊಳಿಸಿದೆ. ‘ಆದೇಶ ನೀಡಿದ ದಿನದಂದು ನನ್ನ ಪರ ವಕಾಲತ್ತು ವಹಿಸಿದ್ದ ವಕೀಲರು ಹಾಜರಿರಲಿಲ್ಲ. ಆದ್ದರಿಂದ ಪುನರ್ ವಿಚಾರಣೆಗೆ ಅವಕಾಶ ನೀಡಬೇಕೆಂದು’ ಕೋರಿ ನಿತ್ಯಾನಂದ ಮಧ್ಯಾಂತರ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅರ್ಜಿ ವಜಾ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.