ನವದೆಹಲಿ: ‘ಒಂದೇ ಶ್ರೇಣಿ ಒಂದೇ ಪಿಂಚಣಿ’ (ಒಆರ್ಒಎಸ್) ಯೋಜನೆಯನ್ನು ಕೇಂದ್ರ ಸರ್ಕಾರ 2–3 ದಿನಗಳಲ್ಲಿ ಜಾರಿಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ಪ್ರತಿ ವರ್ಷವೂ ಪಿಂಚಣಿ ಪರಿಷ್ಕರಣೆ ಸೇರಿದಂತೆ ಯೋಧರು ಮುಂದಿಟ್ಟಿರುವ ಕೆಲವು ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ. 2013 ಅನ್ನು ಲೆಕ್ಕಾಚಾರಕ್ಕೆ ಮೂಲ ವರ್ಷವಾಗಿ ಇಟ್ಟುಕೊಂಡು ಯೋಜನೆ ಜಾರಿಗೊಳಿಸುವ ಕುರಿತು ಕೇಂದ್ರ ಚಿಂತಿಸುತ್ತಿದೆ. ಯೋಧರ ಸೇವಾ ಅವಧಿಯನ್ನು ಪರಿಗಣಿಸಿ, ಸರಾಸರಿ, ಕನಿಷ್ಠ ಮತ್ತು ಗರಿಷ್ಠ ಎಂದು ಮೂರು ರೀತಿಯಲ್ಲಿ ಪಿಂಚಣಿ ವರ್ಗೀಕರಿಸಿ ನಿಗದಿಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.
ಈಗಾಗಲೇ ಸರಾಸರಿ ಮಟ್ಟಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವವರಿಗೆ ‘ಒಆರ್ಒಪಿ’ಯಿಂದ ಹೆಚ್ಚಿನ ಲಾಭವಿಲ್ಲ. ಮೃತ ಯೋಧರ ಪತ್ನಿಯರಿಗೆ ಪಿಂಚಣಿ ಲಭಿಸಲಿದೆ ಆದರೆ, ಸ್ವಯಂ ನಿವೃತ್ತಿ ಪಡೆದುಕೊಂಡ ಸೈನಿಕರಿಗೆ ಈ ಸೌಲಭ್ಯ ಲಭಿಸುವುದಿಲ್ಲ. ನಾಲ್ಕು ಸಮಾನ ಕಂತುಗಳಲ್ಲಿ ಪಿಂಚಣಿ ಬಾಕಿ ಪಾವತಿಸಲು ಸರ್ಕಾರ ನಿರ್ಧರಿಸಿದೆ ಎಂದೂ ಮೂಲಗಳು ತಿಳಿಸಿವೆ.