ಕೋಲಾರ: ಬೆಂಗಳೂರು –ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸದೆಯೇ ವಾಹನ ಸವಾರರಿಂದ ಸುಂಕ ವಸೂಲು ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ನಗರದಿಂದ ಮುಳಬಾಗಲು ತಾಲ್ಲೂಕಿನ ಹನುಮನಹಳ್ಳಿ ಸುಂಕ ವಸೂಲು ಕೇಂದ್ರದವರೆಗೆ ಪ್ರತಿಭಟನಾ ಬೈಕ್ ರ್್ಯಾಲಿ ನಡೆಸಲು ಮುಖಂಡರ ಸಭೆಯಲ್ಲಿ ಸೋಮವಾರ ನಿರ್ಧರಿಸಲಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ–ಸಂಸ್ಥೆಗಳ ಮುಖಂಡರು. ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಗಳ ಪರಿಣಾಮವಾಗಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ನೂರಾರು ಮಂದಿ ಸಾವಿಗೀಡಾಗುತ್ತಿದ್ದಾರೆ. ಹಲವು ವರ್ಷಗಳಾದರೂ ಕಾಮಗಾರಿ ಪೂರ್ಣಗೊಳಿಸದೇ ಪ್ರಾಧಿಕಾರ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಧಿಕಾರದ ವಿರುದ್ಧ ಇದುವರೆಗೂ ಸೌಮ್ಯಧೋರಣೆಯ ಪ್ರತಿಭಟನೆಯನ್ನೇ ನಡೆಸುತ್ತಿರುವುದರಿಂದ ಯಾವ ಪ್ರಯೋಜನವೂ ಆಗಿಲ್ಲ. ಹೀಗಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುವುದು ಲೇಸು ಎಂದು ಮುಖಂಡರು ಸಲಹೆ ನೀಡಿದರು. ಬೆಂಗಳೂರಿನಿಂದ ಮುಳಬಾಲು ತಾಲ್ಲೂಕಿನ ನಂಗಲಿಯವರಗೆ ಹಲವು ಕಡೆ ಸಾರ್ವಜನಿಕರಿಗೆ ಮತ್ತು ರೈತರಿಗೆ ಅನುಕೂಲವಾಗು ರೀತಿಯಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆಗಳನ್ನು ನಿರ್ಮಾಣ ಮಾಡಬೇಕಾಗಿತ್ತು,
ಹೆದ್ದಾರಿ 4ರ ರಸ್ತೆಗೆ ಅನುಮೋದನೆ ದೊರೆತಿದ್ದು ಅದರ ಅಡಿಯಲ್ಲಿ ಅನುದಾನ ಬಿಡುಗಡೆಯಾಗುವುದಿಲ್ಲ ಎಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಅದನ್ನು ವಿಸ್ತರಿಸಿ ಕಳಪೆ ಕಾಮಗಾರಿ ನಡೆಸಿ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಚಾಲಕರಿಗಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿಲ್ಲ. ಕುಡಿಯುವ ನೀರಿನ ಸೌಲಭ್ಯ ನೀಡಿಲ್ಲ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ರಸ್ತೆ ನಿರ್ಮಾಣಕ್ಕೆಂದು ಕಡಿದ ಮರಗಳ ಬದಲಿಗೆ ನೆಟ್ಟಿರುವ ಗಿಡಗಳಿಗೆ ನೀರು ಹಾಕಿಲ್ಲ. ರಸ್ತೆಯ ಅಕ್ಕಪಕ್ಕ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿಲ್ಲ. ಇವೆಲ್ಲವನ್ನೂ ಮಾಡದೇ ಗುತ್ತಿಗೆದಾರ ಲ್ಯಾಂಕೊ ಕಂಪನಿ ಭ್ರಷ್ಟಚಾರ ನಡೆಸಿದೆ ಎಂದು ಆರೋಪಿಸಿದರು. ಎಪಿಎಂಸಿ ಉಪಾಧ್ಯಕ್ಷ ವಿ. ರಾಮು, ನಿರ್ದೇಶಕರಾದ ಹೊಳಲಿ ಪ್ರಕಾಶ್, ಜನ್ನಘಟ್ಟ ಕೃಷ್ಣಪ್ಪ, ನಗರಸಭೆ ಸದಸ್ಯರಾದ ಎಸ್.ಆರ್. ಮುರಳೀ ಗೌಡ , ಸಿ.ವಿ.ರಾಧಾಕೃಷ್ಣ, ರವೀಂದ್ರ ಮಾತನಾಡಿದರು.
ಎ.ಪಿ.ಎಂ.ಸಿ ಅಧ್ಯಕ್ಷ ಗೋಪಾಲಪ್ಪ, ನಿರ್ದೇಶಕ ಈರಪ್ಪ, ನಾಗರಾಜ್, ಸುಬ್ರಮಣಿ, ರಮೇಶ್, ಸುಗಟೂರು ರವಿ, ವೆಂಕಟೇಶಪ್ಪ, ನಗರಸಭೆ ಸದಸ್ಯರಾದ ಸಿ. ಸೋಮಶೇಖರ್, ಅನ್ವರ್ ಪಾಷ, ಹಾರೋಹಳ್ಳಿ ಸುರೇಶ್, ರಾಧಕೃಷ್ಣ, ವೆಂಕಟೇಶಪತಿ, ಕೆಂಬೋಡಿ ನಾರಾಯಣ ಗೌಡ, ಗಣೇಶ್ ಗೌಡ, ಕೃಷ್ಣಮೂರ್ತಿ, ಜಯಕರ್ನಾಟಕದ ತ್ಯಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಎಲ್.ಇ.ಕೃಷ್ಣೇಗೌಡ, ನಾರಾಯಣಸ್ವಾಮಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.