ನವಹದೆಲಿ (ಪಿಟಿಐ): ಜೂನ್ 18ರೊಳಗೆ ವಸತಿಗೃಹ ಖಾಲಿ ಮಾಡಿ! ಹೀಗೊಂದು ಫರ್ಮಾನು ಹೊರಬಿದ್ದಿದೆ. ಇದು ಬಾಡಿಗೆದಾರರಿಗೆ ಮಾಲೀಕರು ಹೇಳಿದ ಮಾತಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಸಂಸದರಿಗೆ ಲೋಕಸಭಾ ಸಚಿವಾಲಯ ನೋಟಿಸ್ ಜಾರಿ ಮಾಡಿದ್ದು, ಹೊಸ ಸಂಸದರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿರುವ ಲೋಕಸಭಾ ಮಹಾ ಪ್ರಧಾನ ಕಾರ್ಯದರ್ಶಿ ಪಿ. ಶ್ರೀಧರನ್ ಅವರು, ಮಾಜಿ ಸಂಸದರಿಗೆ ಹಾಗೂ ಮಾಜಿ ಸಚಿವರಿಗೆ ಪತ್ರ ಬರೆಯಲಾಗಿದ್ದು, ಸಂಸದರು ಜೂನ್ 18ರೊಳಗೆ ಹಾಗೂ ಸಚಿವರು ಜೂನ್ 26ರರೊಳಗೆ ಬಂಗಲೆ ಖಾಲಿ ಮಾಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ 320 ಹೊಸ ಸಂಸದರು ಆಯ್ಕೆಯಾಗಿದ್ದಾರೆ. ಅವರೆಲ್ಲರಿಗೂ ವಸತಿಗೃಹ ಒದಗಿಸಿಕೊಡಬೇಕು ಹಾಗೂ ನೂತನ ಸಚಿವರಿಗೂ ಬಂಗಲೆ ನೀಡಬೇಕಾಗಿದೆ ಎಂದು ಅವರು ವಿವರಿಸಿದರು.
ಮಾಜಿ ಸಂಸದರು ತಮಗೆ ನೀಡಿದ ವಸತಿಗೃಹ ಖಾಲಿ ಮಾಡಿದ ನಂತರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲಿಸಿ ದುರಸ್ತಿ ಕೆಲಸ ಮಾಡಲಿದೆ. ಆ ನಂತರವಷ್ಟೇ ಹಂಚಿಕೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.