ಬೆಂಗಳೂರು: ವಿಧಾನಸೌಧ, ವಿಕಾಸ ಸೌಧ, ಹೈಕೋರ್ಟ್, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೈಸೂರಿನ ಕೆಆರ್ಎಸ್ ಸೇರಿದಂತೆ ರಾಜ್ಯದ 27 ಸ್ಥಳಗಳಿಗೆ ಉಗ್ರಗಾಮಿ ಸಂಘಟನೆಗಳ ಬೆದರಿಕೆಯಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬಿಜೆಪಿಯ ವಿ.ಸುನಿಲ್ಕುಮಾರ್ ಪ್ರಶ್ನೆಗೆ ಮಂಗಳವಾರ ವಿಧಾನಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಆಂತರಿಕ ಭದ್ರತಾ ವಿಭಾಗ ತೆರೆಯಲಾಗಿದೆ. ‘ಸೆಂಟರ್ ಫಾರ್ ಕೌಂಟರ್ ಟೆರರಿಸಂ’ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೂಕ್ಷ್ಮ ಸ್ಥಾವರಗಳು, ಮುಖ್ಯಸ್ಥಳ ಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಆಂತರಿಕ ಭದ್ರತಾ ವಿಭಾಗದಲ್ಲಿ ರಾಜ್ಯ ಕೈಗಾರಿಕಾ ಪಡೆಯನ್ನು ಸೃಜಿಸಲಾಗಿದ್ದು, ಈ ಪಡೆಯನ್ನು ರಾಜ್ಯದ ಪ್ರಮುಖ ಘಟಕಗಳ ಭದ್ರತೆಗಾಗಿ ನಿಯೋಜಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಎಲ್ಲೆಲ್ಲಿ ಬೆದರಿಕೆ?
ಬೆಂಗಳೂರು: ಇನ್ಫೋಸಿಸ್, ವಿಪ್ರೊ, ಫೋರಂ ಮಾಲ್, ಗರುಡಾ ಮಾಲ್, ಸೆಂಟ್ರಲ್ ಮಾಲ್, ಭಾರತೀಯ ವಿಜ್ಞಾನ ಸಂಸ್ಥೆ, ನಗರ ಮತ್ತು ಯಶವಂತಪುರ ರೈಲು ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ತಾಜ್ ಸಮೂಹದ ಹೋಟೆಲ್ಗಳು, ಕಲಾಸಿಪಾಳ್ಯ ಬಸ್ ನಿಲ್ದಾಣ, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪೆನಿಗಳು.
ಮೈಸೂರು: ಇನ್ಫೋಸಿಸ್, ವಿಪ್ರೊ, ಮೈಸೂರು ಅರಮನೆ.
ಮಂಡ್ಯ: ಕೆಆರ್ಎಸ್, ಶ್ರೀರಂಗಪಟ್ಟಣ (ಟಿಪ್ಪು ಅರಮನೆ).
ಮಂಗಳೂರು: ಇನ್ಫೋಸಿಸ್, ವಿಪ್ರೊ, ಮಂಗಳೂರು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ.
ಉಡುಪಿ: ಶ್ರೀಕೃಷ್ಣದೇವಾಲಯ.
ವಿಜಾಪುರ: ಆಲಮಟ್ಟಿ ಜಲಾಶಯ.
ಕಾರವಾರ: ಕೈಗಾ ಅಣುಸ್ಥಾವರ .
ಬಳ್ಳಾರಿ: ತುಂಗಭದ್ರಾ ವಿದ್ಯುತ್ ಸ್ಥಾವರ.