ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಮೂರ್ತಿ ಚಿಂತಕನಲ್ಲ, ಸೂಕ್ಷ್ಮಜ್ಞ : ಕಾರ್ನಾಡ

‘ಸಂಸ್ಕಾರ’ ಬಳಿಕ ಸೃಷ್ಟಿಯಾಗಿದ್ದು ಎರಡನೇ ದರ್ಜೆ ಸಾಹಿತ್ಯ
Last Updated 26 ಸೆಪ್ಟೆಂಬರ್ 2014, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಯು.ಆರ್‌. ಅನಂತಮೂರ್ತಿ ಅವ­ರೊಬ್ಬ ಬಹುದೊಡ್ಡ ಚಿಂತಕ ಎಂದು ಸೋಗು­ಹಾಕಿ­ಕೊಂಡು ಹೇಳುವುದರಲ್ಲಿ ಅರ್ಥವಿಲ್ಲ. ಆದರೆ, ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವ್ಯಕ್ತಿ. ಎ.ಕೆ. ರಾಮಾನುಜನ್‌ ಸೇರಿದಂತೆ ಹಲವ­ರಿಂದ ಅವರು ಸಾಕಷ್ಟು ಹೊಳಹುಗಳನ್ನು ಪಡೆದು­ಕೊಂಡಿ­ದ್ದಾರೆ’ ಎಂದು ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಅಭಿಪ್ರಾಯ­ಪಟ್ಟರು.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ‘ಬೆಂಗ­ಳೂರು ಸಾಹಿತ್ಯ ಉತ್ಸವ’ದಲ್ಲಿ ‘ಅನಂತ­ಮೂರ್ತಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಅವರು ಮಾತ­ನಾಡಿದರು. ‘ಕೆಲವು ಸಂದರ್ಭಗಳಲ್ಲಿ ಸೃಷ್ಟಿಯಾದ ವಿವಾದ, ಎದುರಾದ ಬೆದರಿಕೆ­ಗಳನ್ನೂ ಅನಂತ­ಮೂರ್ತಿ ಆನಂದದಿಂದ ಸ್ವೀಕರಿಸಿದರು’ ಎಂಬ ಮೆಚ್ಚುಗೆಯ ಮಾತು ಹೇಳಿದರು.

ಸಂಸದನಾಗುವ ಆಸೆಯಿತ್ತು: ‘ಯುಆರ್‌ಎ ಅವರಿಗೆ ಸಂಸತ್‌ ಸದಸ್ಯರಾಗುವ ಆಸೆ ಇತ್ತು. ಆದರೆ, ಅವಕಾಶ ಸಿಗಲಿಲ್ಲ. ಆ ಸ್ಥಾನಕ್ಕಾಗಿ ಹುಚ್ಚನಂತೆ ಹಟಕ್ಕೆ ಬಿದ್ದಿದ್ದರು’ ಎಂದು ವ್ಯಂಗ್ಯವಾಡಿದರು.

ಚಿಂತಕನಲ್ಲ, ಸೂಕ್ಷ್ಮಜ್ಞ:‘ಅನಂತಮೂರ್ತಿ ಬಹು­ದೊಡ್ಡ ಚಿಂತಕ ಎಂದು ಸೋಗುಹಾಕಿಕೊಂಡು ಹೇಳು­ವು­ದರಲ್ಲಿ ಅರ್ಥವಿಲ್ಲ. ಅವರು ಎಲ್ಲವನ್ನೂ ಸೂಕ್ಷ್ಮ­ವಾಗಿ ಗಮನಿಸುತ್ತಿದ್ದ ವ್ಯಕ್ತಿ. ಎ.ಕೆ. ರಾಮಾನುಜನ್‌ ಸೇರಿದಂತೆ ಹಲವರಿಂದ ಸಾಕಷ್ಟು ಹೊಳಹುಗಳನ್ನು ಪಡೆದುಕೊಂಡಿದ್ದರು’ ಎಂದೂ ಅಭಿಪ್ರಾಯ­ಪಟ್ಟರು.

‘ಈ ಮುಖವನ್ನು ನೋಡಿ’: ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಅವರು ಒಂದು ಸಂದರ್ಭ­ದಲ್ಲಿ ‘ಯಾರ್ರೀ ಅನಂತ­ಮೂರ್ತಿ’ ಎಂದು ಬಹಿ­ರಂಗ­ವಾಗಿ ಪ್ರಶ್ನಿಸಿದ್ದರು. ಆದರೆ, ಅದಾದ ಕೆಲವು ವರ್ಷಗಳ ನಂತರ ಅನಂತಮೂರ್ತಿ ಅವರು, ಉಪವಾಸ ಕುಳಿತಿದ್ದ ಕುಮಾರಸ್ವಾಮಿ ಅವ­ರಿಗೆ ಹಣ್ಣಿನ ರಸ ಕುಡಿಸುತ್ತಿರುವ ಚಿತ್ರ ಪತ್ರಿಕೆ­ಗಳಲ್ಲಿ ಪ್ರಕಟವಾಯಿತು. ಅನಂತಮೂರ್ತಿ ಅವರ ಬಗ್ಗೆ ಮಾತನಾಡುವಾಗ ಈ ಮುಖವನ್ನೂ ಹೇಳ­ಬೇಕು ಎಂದು ಕಾರ್ನಾಡ  ಅಭಿಪ್ರಾಯಪಟ್ಟರು.

ಅನಂತಮೂರ್ತಿ ಅವರಲ್ಲಿನ ಸಂಕೀರ್ಣತೆಗಳನ್ನು ಒಪ್ಪಿಕೊಂಡು, ಅವರನ್ನು ಅರ್ಥ­ಮಾಡಿ­­ಕೊಳ್ಳಬೇಕು.  ಅವರ ಒಂದೇ ಮುಖವನ್ನು ತೋರಿಸು­ವುದು ಸರಿಯಲ್ಲ. ಸಾಮಾಜಿಕ, ರಾಜಕೀಯ ವಿಚಾರ­ಗಳ ಕುರಿತು ದಿಟ್ಟ ನಿಲುವು ತಾಳುತ್ತಿದ್ದ ವ್ಯಕ್ತಿ ಅನಂತಮೂರ್ತಿ. ಅಂತಹ ವ್ಯಕ್ತಿಯೊಬ್ಬ ಇಲ್ಲವಾದ ಶೂನ್ಯ­ಭಾವ ಅವರ ನಿಧನದಿಂದ ಸೃಷ್ಟಿಯಾಗಿದೆ. ‘ಸಂಸ್ಕಾರ’ ಕಾದಂಬರಿ ಓದಿದ ನಂತರ ನನ್ನ ಜೀವನ ಮತ್ತು ಗ್ರಹಿಕೆ ಸಂಪೂರ್ಣ­ವಾಗಿ ಬದಲಾಯಿತು ಎಂದು ಮೆಚ್ಚುಗೆ ಸೂಚಿಸಿದರು.

‘ಸಾಲಿಗ್ರಾಮ ಎಸೆದರೂ...’: ‘ನಾನು ಸಾಲಿ­ಗ್ರಾಮ­­ವನ್ನು ಎಸೆದೆ, ಜನಿವಾರ ಕಿತ್ತುಹಾಕಿದೆ, ಕ್ರಿಶ್ಚಿ­ಯನ್‌ ಯುವತಿಯ ಮದುವೆಯಾದೆ ಎಂದು ಅನಂತ­­­ಮೂರ್ತಿ ಹೇಳಿಕೊಂಡರು. ಆದರೆ ನಂತರದ ದಿನ­­­ಗಳಲ್ಲಿ ಗಾಯತ್ರಿ ಮಂತ್ರ ಪಠಣ ಮಾಡುತ್ತಿ­ದ್ದರು. ಅವರ ಬಗ್ಗೆ ನನಗಿರುವ ತಕರಾರು ಇದು’ ಎಂದು ಕಲಾವಿದ ಎಸ್‌.ಜಿ. ವಾಸುದೇವ್‌ ಹೇಳಿದರು.

ಸಂಕೀರ್ಣತೆಯ ಹೇಳುವ ಪುಸ್ತಕ ಎಲ್ಲಿದೆ?
ಬೆಂಗಳೂರು ಇಷ್ಟೊಂದು ಬೆಳೆದಿದೆ. ಆದರೆ ಈ ನಗರದ ಸಂಕೀರ್ಣತೆಗಳನ್ನು ಇಡಿಯಾಗಿ ಕಟ್ಟಿಕೊಡುವ ಒಂದೇ ಒಂದು ಪುಸ್ತಕ ಇದೆಯಾ? ನಾನಂತೂ ಅಂಥದ್ದೊಂದು ಪುಸ್ತಕ­ವನ್ನು ಕಂಡಿಲ್ಲ. ಕೆಲವು ಸಣ್ಣ ಕತೆಗಳು ಬಂದಿರ­ಬಹುದು. ಆದರೆ ಕಾದಂಬರಿ ಇಲ್ಲ.
– ಗಿರೀಶ ಕಾರ್ನಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT