ಗುಜರಾತ್ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಪಾತ್ರವಿತ್ತೆಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಅಹಮದಾಬಾದ್ನ ಮೆಟ್ರೋಪಾಲಿಟನ್ ನ್ಯಾಯಾಲಯ ಹೇಳಿದ್ದರ ಹಿಂದೆಯೇ ಗಲಭೆಯ ದಿನಗಳ ಕುರಿತಂತೆ ಮೋದಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಬ್ಲಾಗ್ನಲ್ಲಿ 2002ರ 'ಬುದ್ಧಿಹೀನ ಹಿಂಸೆ'ಯಿಂದ ತಾನು ಆಘಾತಗೊಂಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಹೇಳಿಕೆಯನ್ನು ತಮ್ಮ ಪರವಾಗಿ ಬಂದ ತೀರ್ಪಿನ ಹಿನ್ನೆಲೆಯಲ್ಲಿ ಅವರು ನೀಡಿದ ಪ್ರತಿಕ್ರಿಯೆ ಎನ್ನಲು ಸಾಧ್ಯವಿಲ್ಲ.
ಈ ಹೇಳಿಕೆಯನ್ನು ಗಲಭೆಯ ನಂತರದ ಹನ್ನೊಂದು ವರ್ಷಗಳಲ್ಲಿ ನಡೆದಿರುವ ಅನೇಕ ಬೆಳವಣಿಗೆಗಳ ಭಾಗವಾಗಿ ಗ್ರಹಿಸುವ ಅಗತ್ಯವಿದೆ. ಬಹುಶಃ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸೆಯ ನಂತರ ಅತ್ಯಂತ ಹೆಚ್ಚು ಸಾರ್ವಜನಿಕ ಚರ್ಚೆಗೆ ಗುರಿಯಾಗಿದ್ದ ಮತ್ತೊಂದು ಹಿಂಸಾಚಾರ ಪ್ರಕರಣವಿದ್ದರೆ ಅದು 2002ರ ಗುಜರಾತ್ ಕೋಮುಗಲಭೆ. ಈ ಗಲಭೆಯ ನಂತರದ ಹತ್ತು ವರ್ಷಗಳಲ್ಲಿ ನಡೆದ ತನಿಖೆಗಳು ಮತ್ತು ಅಧಿಕೃತ ಪ್ರತಿಕ್ರಿಯೆಗಳು ಈ ಹಿಂಸೆಯ ಹಿನ್ನೆಲೆಯನ್ನು ಸಂಕೀರ್ಣಗೊಳಿಸುತ್ತಾ ಹೋಯಿತು. ಇದರ ಜೊತೆಯಲ್ಲೇ ಈ ಕ್ರೂರ ನರಮೇಧವನ್ನೇ ಕೇಂದ್ರವಾಗಿಟ್ಟುಕೊಂಡ ಒಂದು ರಾಜಕಾರಣವೂ ಬೆಳೆಯುತ್ತಾ ಹೋಯಿತು.
ಈ ಪ್ರಕ್ರಿಯೆಯಲ್ಲಿ ನರೇಂದ್ರ ಮೋದಿ ಎಂಬ ವ್ಯಕ್ತಿಯ ಸುತ್ತಾ ನಿಗೂಢತೆಯ ಕೋಟೆಯೊಂದು ನಿರ್ಮಾಣವಾಗುತ್ತಾ ಹೋಗಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೂ ಆಗಿಬಿಟ್ಟರು. ಅಹಮದಾಬಾದ್ ಮೆಟ್ರೊಪಾಲಿಟನ್ ನ್ಯಾಯಾಲಯದ ತೀರ್ಪು ತಮಗೆ ನೀಡುತ್ತಿರುವ ನಿರಾಳತೆಯ ಕುರಿತಂತೇನೋ ಮೋದಿ ಹೇಳಿಕೊಳ್ಳುತ್ತಾರೆ. ಆದರೆ 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ತಮಗೆ ರಾಜಧರ್ಮ ಬೋಧಿಸಿದ್ದೇಕೆ ಎಂಬುದನ್ನು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿಸಿದ್ದಾರೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಗಲಭೆಯ ಕುರಿತಂತೆ ಹನ್ನೊಂದು ವರ್ಷಗಳ ನಂತರ ತನಗೆ ಆಘಾತವಾಗಿತ್ತು ಎಂದು ಹೇಳುತ್ತಿರುವುದರ ಹಿಂದಿನ ಉದ್ದೇಶವನ್ನು ಊಹಿಸುವುದು ಕಷ್ಟವೇನೂ ಅಲ್ಲ. ಕೇವಲ 'ಹಿಂದೂ ಹೃದಯ ಸಾಮ್ರಾಟ'ನಾಗಿದ್ದರಷ್ಟೇ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂಬುದನ್ನು ಮೋದಿ ಅರ್ಥ ಮಾಡಿಕೊಂಡಿದ್ದು ಅವರು 'ವಿಕಾಸ ಪುರುಷ'ನಾಗಿ ಅವತಾರವೆತ್ತಿದಾಗಲೇ ಸ್ಪಷ್ಟವಾಗಿತ್ತು. ಅದರ ಮುಂದುವರಿಕೆಯಾಗಿ ಈ ‘ಆಘಾತ' ಕಾಣಿಸಿಕೊಂಡಿದೆ.
ಈ 'ಆಘಾತ, ಕ್ಲೇಷ, ಏಕಾಂಗಿತನ'ದಂಥ ಸುಂದರ ಪದಪುಂಜಗಳಾಚೆಗೂ ಹಲವು ಪ್ರಶ್ನೆಗಳು ಈಗಲೂ ಉಳಿದುಕೊಂಡಿವೆ. ನರೇಂದ್ರ ಮೋದಿ ಸಂಪುಟ ಸಹೋದ್ಯೋಗಿಯೊಬ್ಬರೇ 2002ರ ಗಲಭೆಯಲ್ಲಿ ಪಾಲ್ಗೊಂಡಿದ್ದರೆಂಬುದು ನ್ಯಾಯಾಲಯದಲ್ಲಿ ಸಾಬೀತಾಗಿ ಈಗ ಶಿಕ್ಷೆಯನ್ನೂ ಅನುಭವಿಸುತ್ತಿದ್ದಾರೆ. ಹೀಗೆ ಸಂಪುಟ ಸಹೋದ್ಯೋಗಿಗಳೇ ಗಲಭೆಗಳಲ್ಲಿ ಪಾಲ್ಗೊಂಡದ್ದರ ನೈತಿಕ ಹೊಣೆಗಾರಿಕೆಯನ್ನು ಮೋದಿ ನಿರಾಕರಿಸುತ್ತಾರೆಯೇ? ಒಂದು ವೇಳೆ ನಿರಾಕರಿಸಿದರೆ ತಮ್ಮಲ್ಲಿದೆ ಎಂದು ಹೇಳಿಕೊಳ್ಳುತ್ತಿರುವ 'ಪ್ರಬಲ ನಾಯಕತ್ವ ಗುಣ'ವನ್ನು ಅವರೇ ನಿರಾಕರಿಸಿದಂತಾಗುತ್ತದೆಯಲ್ಲವೇ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹೊರಟರೆ ಕೊನೆಗೂ ಕಾಣಿಸುವುದು ಮೈತ್ರಿಕೂಟ ರಾಜಕಾರಣಕ್ಕೆ ಅಗತ್ಯವಿರುವ ಪ್ರಧಾನಿ ಅಭ್ಯರ್ಥಿಯಾಗುವ ನರೇಂದ್ರ ಮೋದಿ ತುಡಿತವಷ್ಟೇ ಕಾಣಿಸುತ್ತದೆ. ವಾಜಪೇಯಿ ರಾಜಧರ್ಮ ಬೋಧಿಸಿದಾಗಲೂ ನರೇಂದ್ರ ಮೋದಿ ಗಲಭೆಗಳಿಗಾಗಿ ವಿಷಾದಿಸಿರಲಿಲ್ಲ. ಈಗಲೂ ಅಷ್ಟೇ ಗಲಭೆ ಅವರಲ್ಲಿ ವಿಷಾದವನ್ನುಂಟು ಮಾಡಿಲ್ಲ. ಅದು ಕೇವಲ ಆಘಾತಕ್ಕೆ ಮಾತ್ರ ಕಾರಣವಾಗಿತ್ತು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.