ಕಠ್ಮಂಡು (ಪಿಟಿಐ): ಭೂಕಂಪದಿಂದ ಚೇತರಿಸಿಕೊಳ್ಳುತ್ತಿರುವ ನೇಪಾಳದಲ್ಲಿ ಅಪಾಯದಿಂದ ಪಾರಾದವರ ಕಥೆಗಳು ಕೇಳಿಬರುತ್ತಲೇ ಇವೆ.
ಭೂಕಂಪವಾದ ಆರು ದಿನಗಳ ನಂತರವೂ ಬದುಕಿದ್ದ ಪೆಂಬಾ ಲಾಮಾ ಎಂಬ 15 ವರ್ಷದ ಬಾಲಕನನ್ನು ಗುರುವಾರ ಏಳು ಮಹಡಿ ಕಟ್ಟಡವೊಂದರ ಅವಶೇಷಗಳ ಅಡಿಯಿಂದ ಪರಿಹಾರ ಕಾರ್ಯಕರ್ತರು ರಕ್ಷಿಸಿದ್ದಾರೆ.
ಆತನಿಗೆ ಪೈಪ್ ಮೂಲಕ ಔಷಧ ನೀಡಲಾಗುತ್ತಿದೆ ಎಂದು ಪರಿಹಾರ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡಗಳ ಅವಶೇಷಗಳ ಅಡಿ ಇನ್ನೂ ನೂರಾರು ಜನ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ.
ಎಂಟು ಸಾವಿರ ಟೆಂಟ್ಗಳು- ನವದೆಹಲಿ ವರದಿ: ಧಾರಾಕಾರ ಮಳೆ ಹಾಗೂ ಬಿಸಿಲಿನಿಂದ ತತ್ತರಿಸಿರುವ ಭೂಕಂಪ ಸಂತ್ರಸ್ತರಿಗಾಗಿ ಭಾರತ ನೇಪಾಳಕ್ಕೆ 8,450 ಟೆಂಟ್ಗಳನ್ನು ಕಳುಹಿಸಿದೆ.
750 ಟೆಂಟ್ಗಳನ್ನು ತುರ್ತಾಗಿ ವಿಮಾನದ ಮೂಲಕ ಕಳುಹಿಸಲಾಗಿದೆ. ಇನ್ನುಳಿದವುಗಳನ್ನು ರಸ್ತೆ ಮೂಲಕ ಸಾಗಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.
ಷರೀಫ್ ಕರೆ
ಇತ್ತೀಚಿನ ಭೂಕಂಪದಿಂದ ಭಾರತದಲ್ಲಿ ಆದ ಪ್ರಾಣಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಕರೆ ಮಾಡಿದ್ದರು.
‘ಪ್ರಧಾನಿ ಷರೀಫ್ ಕರೆ ಮಾಡಿದ್ದರು. ಭೂಕಂಪದಿಂದ ಭಾರತದಲ್ಲಿ ಆದ ಹಾನಿಯ ಕುರಿತು ಕಳಕಳಿ ವ್ಯಕ್ತಪಡಿಸಿದರು’ ಎಂದು ಮೋದಿ ಟ್ವಿಟರ್ನಲ್ಲಿ ಬರೆದಿದ್ದಾರೆ.