ಬೆಂಗಳೂರು: ‘ಎಡಿಜಿಪಿ ಡಾ.ಪಿ.ರವೀಂದ್ರನಾಥ್ ಅವರು ಕಾಫಿಶಾಪ್ನಲ್ಲಿ ಯುವತಿಯ ಛಾಯಾಚಿತ್ರ ತೆಗೆದಿರುವುದು ಸತ್ಯ’ ಎಂದು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆಮಂಗಳ ವಾರ ರಾತ್ರಿ ವರದಿ ಸಲ್ಲಿಸಿದ್ದಾರೆ.
‘ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಅವರ ಪಾತ್ರವಿಲ್ಲ. ರವೀಂದ್ರನಾಥ್ ಅವರೇ ಯುವತಿಯ ಛಾಯಾಚಿತ್ರಗಳನ್ನು ತೆಗೆದಿರುವುದು ತನಿಖೆಯಿಂದ ದೃಢಪಟ್ಟಿದೆ’ ಎಂಬ ಅಂಶಗಳು ವರದಿಯಲ್ಲಿವೆ. ‘ಐದು ಪುಟಗಳ ವರದಿಯನ್ನು ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸಲಾಗಿದೆ. ಎಡಿಜಿಪಿ ಅವರು ಯುವತಿ ಛಾಯಾಚಿತ್ರ ತೆಗೆಯುವ ಮೂಲಕ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ.
ಹೀಗಾಗಿ ಭಾರತೀಯ ದಂಡ ಸಂಹಿತೆ 509ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಘಟನಾ ದಿನ ರವೀಂದ್ರನಾಥ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಎಸ್ಐ ರವಿ ಅವರನ್ನು ಅಮಾನತು ಮಾಡುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ’ ಎಂದು ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ತಿಳಿಸಿದ್ದಾರೆ.
‘ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸಿರುವ ವರದಿಯ ಒಂದು ಪ್ರತಿಯನ್ನು ದೋಷಾರೋಪಣಾ ಪಟ್ಟಿಯಾಗಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ಹೇಳಿದ್ದಾರೆ.
‘ದೋಷಾರೋಪಣಾ ಪಟ್ಟಿಯು ಎಡಿಜಿಪಿ ರವೀಂದ್ರನಾಥ್, ದೂರು ನೀಡಿದ ಯುವತಿ, ಕಾಫಿ ಶಾಪ್ನ ಸಿಬ್ಬಂದಿ ಹಾಗೂ ಹೈಗ್ರೌಂಡ್ಸ್ ಪೊಲೀಸರ ಹೇಳಿಕೆಗಳನ್ನು ಒಳಗೊಂಡಿದೆ. ಅಲ್ಲದೆ, ಸ್ವತಃ ರವೀಂದ್ರನಾಥ್ ಅವರೇ ಠಾಣೆಯ ಸೆಲ್ನೊಳಗೆ ಹೋಗಿ, ತಮ್ಮ ಅಂಗಿಯನ್ನು ಹರಿದುಕೊಂಡಿದ್ದಾರೆ ಎಂಬ ಅಂಶವನ್ನೂ ಹೊಂದಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ರವೀಂದ್ರನಾಥ್ ಅವರ ಮೊಬೈಲ್ನಿಂದಲೇ ಯುವತಿಯ ಎರಡು ಛಾಯಾಚಿತ್ರಗಳನ್ನು ತೆಗೆಯಲಾಗಿದೆ. ಬೇರೊಂದು ಮೊಬೈಲ್ನಿಂದ ಆ ಛಾಯಾಚಿತ್ರಗಳನ್ನು ವರ್ಗಾವಣೆ ಮಾಡಿಲ್ಲ ಎಂದು ಗುಜರಾತ್ನ ಗಾಂಧಿನಗರದ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಪಷ್ಟಪಡಿಸಿದ್ದಾರೆ’ ಎಂದು ವರದಿಯಲ್ಲಿದೆ.
ಘಟನೆ ಸಂಬಂಧ ಎಡಿಜಿಪಿ ವಿರುದ್ಧ ಹಲ್ಲೆ ನಡೆಸಿ ಮಹಿಳೆ ಗೌರವಕ್ಕೆ ಧಕ್ಕೆ ಉಂಟು ಮಾಡಿದ ಆರೋಪ (ಐಪಿಸಿ 354), ಅಪರಾಧ ಸಂಚು (ಐಪಿಸಿ 506) ಮತ್ತು ಅಶ್ಲೀಲ ಪದಬಳಕೆ ಅಥವಾ ಸಂಜ್ಞೆ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ (ಐಪಿಸಿ 509) ಮೇಲೆ ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಸಿಐಡಿ ಅಧಿಕಾರಿಗಳು ಐಪಿಸಿ 354 ಮತ್ತು ಐಪಿಸಿ 506ರ ಪ್ರಕರಣಗಳಿಂದ ಎಡಿಜಿಪಿ ಅವರನ್ನು
ಕೈಬಿಟ್ಟಿದ್ದಾರೆ.
ಇದರಿಂದ ಅಸಮಾಧಾನಗೊಂಡಿರುವ ದೂರುದಾರ ಯುವತಿಯ ಪರ ವಕೀಲರು, ಈ ಸಂಬಂಧ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ. ‘ಎರಡು ಪ್ರಕರಣಗಳಲ್ಲಿ ರವೀಂದ್ರನಾಥ್ ಅವರನ್ನು ಕೈಬಿಡುವ ಮೂಲಕ ಅವರನ್ನು ರಕ್ಷಿಸಲಾಗುತ್ತಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ‘ಪ್ರಜಾವಾಣಿ’ ಗೆ ತಿಳಿಸಿದರು.
‘ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ನಾನು ಯುವತಿಯ ಛಾಯಾಚಿತ್ರ ತೆಗೆದಿಲ್ಲ ಎಂದು ಈಗಲೂ ಹೇಳುತ್ತಿದ್ದೇನೆ. ನ್ಯಾಯಕ್ಕಾಗಿ ಕಾನೂನು ಹೋರಾಟ ಮುಂದುವರಿಸುತ್ತೇನೆ’ ಎಂದು ರವೀಂದ್ರನಾಥ್ ತಿಳಿಸಿದರು.
ಕನ್ನಿಂಗ್ಹ್ಯಾಂ ರಸ್ತೆಯಲ್ಲಿರುವ ಒಬೊಪೆ ಕಾಫಿಶಾಪ್ನಲ್ಲಿ ಮೇ 26ರಂದು ಎಡಿಜಿಪಿ ರವೀಂದ್ರನಾಥ್ ಯುವತಿಯ ಛಾಯಾಚಿತ್ರ ತೆಗೆದಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಯುವತಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.