ಧಾರವಾಡ: ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಹಿರಿಯ ಸಂಗೀತಗಾರ ಪಂ.ಎಂ.ವೆಂಕಟೇಶಕುಮಾರ್ ,ಉದ್ಯಮಿ ವಿಜಯ ಸಂಕೇಶ್ವರ, ಗೋವಾದ ಮಾಜಿ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಸೇರಿದಂತೆ ಒಂಬತ್ತು ಗಣ್ಯರನ್ನು ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ಗೆ ಆಯ್ಕೆ ಮಾಡಿದೆ ಎಂದು ವಿ.ವಿ. ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ ಪ್ರಕಟಿಸಿದರು.
‘ಸುಪ್ರೀಂಕೋರ್ಟ್ನ ಹಿರಿಯ ವಕೀಲ ಶರತ್ ಜವಳಿ, ಬೆಂಗಳೂರಿನ ಡಾ.ಮರಿಗೌಡ ನಾಗರಾಜು, ಶಿರಸಿಯ ಡಾ. ವಿ.ಎಸ್.ಸೋಂದೆ ಈ ಪಟ್ಟಿಯಲ್ಲಿದ್ದಾರೆ. ಇದೇ 25ರಂದು ನಡೆಯುವ 64ನೇ ಘಟಿಕೋತ್ಸವದಲ್ಲಿ ವಿ.ವಿ. ಕುಲಾಧಿಪತಿಗಳೂ ಆದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಗೌರವ ಡಾಕ್ಟರೇಟ್ ಪ್ರದಾನ ಮಾಡುವರು.
ಸಂತೃಪ್ತಿ ಇದೆ: ‘ಗೌರವ ಡಾಕ್ಟರೇಟ್ ಪಟ್ಟಿಯ ಬಗ್ಗೆ ನನಗೆ ಸಂತೃಪ್ತಿ ಇದ್ದು, ಶೋಧನಾ ಸಮಿತಿ ಶಿಫಾರಸು ಮಾಡಿದ ಪಟ್ಟಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಪಿ.ಬಲರಾಂ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದು ವಾಲೀಕಾರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ‘ಘಟಿಕೋತ್ಸವದಲ್ಲಿ 168 ಅಭ್ಯರ್ಥಿಗಳಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಿದ್ದು, 11 ಜನರಿಗೆ ಎಂ.ಫಿಲ್, 3,886 ಸ್ನಾತಕೋತ್ತರ ಪದವಿ, 15,790 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ ಒಟ್ಟು 20,358 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ’ ಎಂದು ಹೇಳಿದರು.