ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಶಿಕ್ಷಕಿಯ ಗಾನಮಾರ್ಗ

Last Updated 24 ಆಗಸ್ಟ್ 2015, 19:36 IST
ಅಕ್ಷರ ಗಾತ್ರ

ಭಾಷಾ ವಿಷಯದ ಪಾಠ ಹೇಳುವಾಗ ಸೃಜನಶೀಲ ಮಾರ್ಗಗಳನ್ನು ಕಂಡುಕೊಳ್ಳುವ ಶಿಕ್ಷಕ, ಶಿಕ್ಷಕಿರು ಅಪರೂಪ. ಅಂಥ ಅಪರೂಪದವರ ಸಾಲಿಗೆ ಸೇರಿದ್ದಾರೆ ಎಚ್‌.ಆರ್‌. ಜಯಲಕ್ಷ್ಮಿ ವಿಜಯಕುಮಾರ್‌.

ನೆಲಮಂಗಲ ಬಳಿಯ ಕನಸವಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಜಯಲಕ್ಷ್ಮಿ, ಕನ್ನಡ ಪದ್ಯಗಳನ್ನು ಬೋಧಿಸಲೆಂದು ತಾವೇ ರಾಗಸಂಯೋಜನೆ ಮಾಡಿದ ಸೀಡಿ ಒಂದನ್ನು ರೂಪಿಸಿದ್ದಾರೆ. 8,9 ಮತ್ತು 10ನೇ ತರಗತಿಯ ಕನ್ನಡ ಪದ್ಯ ಭಾಗದಲ್ಲಿನ  ಸುಮಾರು 33 ಪದ್ಯಗಳಿಗೆ ಅವರು ರಾಗ ಸಂಯೋಜನೆ ಮಾಡಿ, ‘ಸಿರಿ ಕನ್ನಡ’ ಎಂಬ ಹೆಸರನಲ್ಲಿ ಸಿಡಿ ಹೊರತಂದಿದ್ದಾರೆ.

ಸಾಹಿತ್ಯದ ವಿವಿಧ ಪ್ರಕಾರಗಳಾದ ವಚನ, ಕವನ, ಭಾವಗೀತೆ ಮತ್ತು ಹಳಗನ್ನಡ ಕಾವ್ಯಭಾಗಗಳ ಸಂಗೀತ ಸಂಯೋಜಿತ ಸೀಡಿ ಇದು. ಮಕ್ಕಳಿಗೆ ಹಾಡುಗಳನ್ನು ಕೇಳಿಸಿ, ಅವಕ್ಕೆ ವ್ಯಾಖ್ಯೆ ನೀಡುವ ಮೂಲಕ ಬೋಧಿಸುವುದು ಜಯಲಕ್ಷ್ಮಿ ಅವರ ಕ್ರಮ.

‘ಪದ್ಯಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಬೋಧಿಸಿದರೆ ಅದು ಮಕ್ಕಳ ಮೇಲೆ ಅಷ್ಟು ಪ್ರಭಾವ ಬೀರಲಾರದು. ಹೊಸ ತಲೆಮಾರಿನ ಮಕ್ಕಳಿಗೆ ಶಿಶುಗೀತೆ (ಇಂಗ್ಲಿಷ್‌ನ ರೈಮ್ಸ್) ಮಾದರಿಯಲ್ಲಿ ಸುಶ್ರಾವ್ಯವಾಗಿ ಭಾವಕ್ಕನುಗುಣವಾಗಿ ಹಾಡಿದರೆ ಅವರು ಲಕ್ಷ್ಯ ಕೊಡುತ್ತಾರೆ.  ಹಳಗನ್ನಡದಂತಹ ಪದ್ಯಗಳನ್ನು ಗಮಕ ಶೈಲಿಯಲ್ಲಿ ಹಾಡುವ ಮೂಲಕ ಬೋಧಿಸಿದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು’ ಎನ್ನುತ್ತಾರೆ ಜಯಲಕ್ಷ್ಮಿ.

ಇಂತಹದೊಂದು ಯೋಚನೆ ಬಂದಿದ್ದಾದರೂ ಹೇಗೆ ಎಂದರೆ ಅವರು ಉತ್ತರಿಸಿವುದು ಹೀಗೆ:  ‘ಸಂಗೀತ ಜ್ಞಾನ ಇದ್ದುದರಿಂದ   ಪದ್ಯಗಳನ್ನು ರಾಗವಾಗಿ ಸುಶ್ರಾವ್ಯವಾಗಿ  ಬೋಧಿಸುತ್ತಿದ್ದೆ. ಹಳಗನ್ನಡದ ಕಂದ, ರಗಳೆಗಳಂತಹ ಪದ್ಯಗಳಿಗೆ ಗಮಕ ಶೈಲಿಯಲ್ಲಿ ಹಾಡುವ ಮೂಲಕ ಕೆಲವನ್ನು ವ್ಯಾಖ್ಯಾನದ ಜೊತೆಗೆ ವಾಚಿಸುವ ಮೂಲಕ ಬೋಧಿಸುತ್ತಿದ್ದೆ, ಅದು ತರಗತಿಯ ವಾತಾವರಣದಲ್ಲೂ  ಪರಿಣಾಮಕಾರಿ ಎನಿಸಿತು.  ಅಲ್ಲದೆ  ಭಾಷಾ ಬೋಧನಾ ತರಬೇತಿ ಶಿಬಿರಗಳಲ್ಲಿ ನನ್ನ ರಾಗ ಸಂಯೋಜನೆಯ ಪದ್ಯಗಳು ಸಂಪನ್ಮೂಲ ವ್ಯಕ್ತಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದ್ದವು. ಪದ್ಯಗಳ ಧ್ವನಿ ಮುದ್ರಿತ ಸೀಡಿ ತಯಾರಿಸುವಂತೆ ಅವರೇ ಪ್ರೋತ್ಸಾಹಿಸಿದ್ದರಿಂದ  ಸಿಡಿ ಹೊರತರಲು ನೆರವಾಯಿತು’.

ಸಂಪನ್ಮೂಲ ವ್ಯಕ್ತಿಗಳ ಮಾತಿನಿಂದ ಪ್ರೇರಣೆಗೊಂಡ ಜಯಲಕ್ಷ್ಮಿ ಸ್ವತಃ ರಾಗಸಂಯೋಜಿಸಿ, ಪತಿ  ವಿಜಯಕುಮಾರ್ ನೆರವಿನೊಂದಿಗೆ ಸಹ ಶಿಕ್ಷಕರಾದ ಮುರುಳೀಧರ್‌, ಹಳೆಯ ವಿದ್ಯಾರ್ಥಿಗಳು ಹಾಗೂ ಕೆಲ ಹೊಸ ಗಾಯಕರುಗಳ ಜೊತೆಗೂಡಿ 8,9 ಹಾಗೂ 10 ನೇ ತರಗತಿಯ ಪ್ರಥಮ ಭಾಷೆ  ಕನ್ನಡ ಪಠ್ಯಕ್ರಮದ ಬೋಧನೆಗೆ ಅನುಕೂಲವಾಗುವಂತ ‘ಸಿರಿ ಕನ್ನಡ’ ಧ್ವನಿ ಮುದ್ರಿಕೆ  ಸಿದ್ಧಪಡಿಸಿದರು. ಹಳಗನ್ನಡ ಕಾವ್ಯಗಳನ್ನು  ತಾವೇ ಗಮಕ ಶೈಲಿಯಲ್ಲಿ   ಅರ್ಥವಾಗುವ ರೀತಿಯಲ್ಲಿ ಮಧುರವಾಗಿ ಹಾಡಿದ್ದಾರೆ. ಹಾಡುಗಳಿಗೆ ವ್ಯಾಖ್ಯಾನ ನೀಡುವುದು  ಶಿಕ್ಷಕರಿಗೂ ಸುಲಭವಾಗಲಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

‘ಸಿರಿಗನ್ನಡ ’ ಧ್ವನಿ ಮುದ್ರಿಕೆಯನ್ನು  ಪ್ರೌಢ ಶಾಲಾ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದ ಶಿಕ್ಷಣ ಆಯುಕ್ತರು  ಹಾಗೂ ಡಿಎಸ್‌ಇಆರ್‌ಟಿ  ನಿರ್ದೇಶಕರೂ ಮೆಚ್ಚಿ ಕನ್ನಡ ಭಾಷಾ ಬೋಧನೆಯಲ್ಲಿ ಬಳಸಲು ಯೋಗ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿರುವುದು ಇದರ ಗುಣಾತ್ಮಕತೆಗೆ ಹಿಡಿದ ಕನ್ನಡಿಯಾಗಿದೆ.

ನಿರ್ದೇಶಕರಿಂದ ಅನುಮತಿ
ಈ ಧ್ವನಿಮುದ್ರಿಕೆಯು ಸುಗಮ ಕಲಿಕೆ ಹಾಗೂ ಕಂಠಪಾಠ ಮಾಡಲು  ಸುಲಭವಾಗುವಂತೆ ರಾಗ ಸಂಯೋಜನೆ ಮಾಡಿದ್ದು, ಇದನ್ನು ಆಸಕ್ತಿಯುಳ್ಳ  ಶಾಲೆಗಳ ಮುಖ್ಯೋಪಾಧ್ಯಾಯರು ಅವಶ್ಯ ಎನಿಸಿದರೆ ಶಾಲಾ ಸಂಚಿತ ನಿಧಿಯಿಂದ ಖರೀದಿಸಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರು ಅನುಮತಿ ನೀಡಿರುವ ಪತ್ರ ಜಯಲಕ್ಷ್ಮಿ ಅವರ ಬಳಿ ಇದೆ. ಶಾಲೆಗಳು, ಆಸಕ್ತ ವಿದ್ಯಾರ್ಥಿಗಳು ₹ 50ರ ದರದಲ್ಲಿ ಇದನ್ನು ಖರೀದಿಸಬಹುದಾಗಿದೆ.

ಸದ್ಯಕ್ಕೆ  ಬೆಂಗಳೂರು ಗ್ರಾಮಾಂತರ, ನಗರ, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ತುಮಕೂರಿನ ಪ್ರೌಢಶಾಲೆಗಳು ಸೀಡಿಗಳನ್ನು ಬಳಸಿದ್ದು, ಶಿಕ್ಷಕರು, ಮಕ್ಕಳು ಮೆಚ್ಚಿಕೊಂಡಿದ್ದಾರೆ. ರಾಜ್ಯದ ಎಲ್ಲಾ ಪ್ರೌಢ ಶಾಲೆಗಳಿಗೆ ಸೀಡಿಗಳನ್ನು  ತಲುಪಿಸುವ ಮಹತ್ವಾಕಾಂಕ್ಷೆ ಇದ್ದರೂ, ಖುದ್ದು ಪಾಠ ಮಾಡುವ ಕೆಲಸದಲ್ಲಿ ಇರುವ ಜಯಲಕ್ಷ್ಮಿ ಅವರಿಗೆ ಎಲ್ಲ ಕಡೆ ಸಂಚರಿಸಲು ಸಾಧ್ಯವಾಗಿಲ್ಲ. ಉತ್ತರ ಕರ್ನಾಟಕ ಅನೇಕ ಪ್ರದೇಶಗಳಿಗೆ ತಲುಪಿಸಲು ಸಾಧ್ಯವಾಗಿಲ್ಲದಿರುವುದಕ್ಕೆ ಅವರಿಗೆ ಬೇಸರವಿದೆ.

ಬಹುಮಾನದ ಮೊಹರು
2000–2001ರಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ  ರಾಷ್ಟ್ರ ಮಟ್ಟದ ನಾಗರಿಕ ಸೇವಾ ವಲಯದ ಸಂಗೀತ ಸ್ಪರ್ಧೆಯಲ್ಲಿ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿನಿಧಿಯಾಗಿ  ಭಾಗವಹಿಸಿ,  ಲಘು ಸಂಗೀತ  ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ ಎಚ್.ಆರ್. ಜಯಲಕ್ಷ್ಮಿ ವಿಜಯ್‌ ಕುಮಾರ್‌ ಅವರದು.

ಬೆಲೆ: ₹ 50. ಸಂಪರ್ಕಕ್ಕೆ: 9449637367
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT