ಧಾರವಾಡ: ‘ನನ್ನ ಅನೇಕ ಪುಸ್ತಕಗಳು ಬಹಳ ಬೇಗ ಖರ್ಚಾಗುತ್ತವೆ. ಇದಕ್ಕೆ ನಾನೊಂದು ತಂತ್ರ ಮಾಡಿದ್ದೇನೆ. ಚಂಪಾ, ಪಟ್ಟಣಶೆಟ್ಟಿ, ಕಣವಿ ಎಲ್ಲಾ ಸಿಕ್ಕಾಗ ಅವರಿಗೆ ನನ್ನ ಪುಸ್ತಕದ ಪ್ರತಿ ಕೊಡುತ್ತೇನೆ. ಹಾಗೇ ಅವರೂ ಬಹಳ ಪ್ರೀತಿಯಿಂದ ‘ಮುಯ್ಯಿಗೆ ಮುಯ್ಯಿ ತೀರಿಸೋ ರಂಗ’ ಅನ್ನೋ ಹಾಗೆ ಅವರ ಪುಸ್ತಕ ಕೊಡುತ್ತಾರೆ. ಇದೊಂದು ಅದ್ಭುತ ಪುಸ್ತಕ ವಿತರಣಾ ವ್ಯವಸ್ಥೆ’ ಎಂದು ಕವಿ ಎಚ್.ಎಸ್ ವೆಂಕಟೇಶಮೂರ್ತಿ ಹೇಳಿದಾಗ ಸಭೆಯಲ್ಲಿ ನಗು ಹೊಮ್ಮಿತು.
ಈ ಪ್ರಸಂಗಕ್ಕೆ ಕಾರಣವಾಗಿದ್ದು, ‘ಸಾಹಿತ್ಯ ಸಂಭ್ರಮ’ ದ ಮೂರನೇ ದಿನದ ಪುಸ್ತಕ ಬಿಡುಗಡೆ ಕಾರ್ಯಕ್ರಮ. ‘ಕವಿತೆಯಿಂದ ಹಣ ಮಾಡುವುದು ಸಾಧ್ಯವಿಲ್ಲ. ಅದನ್ನು ಕೊಳ್ಳಲು ಅಂಗಡಿಯವರು ಸಿದ್ಧರಿರುವುದಿಲ್ಲ. ಹೀಗಾಗಿ ನಾನು ಸೇರಿದಂತೆ ನನ್ನಂತಹ ಅನೇಕ ಕವಿಗಳು ಉಪಾಯ ಕಂಡುಕೊಂಡಿದ್ದೇವೆ. ನಮ್ಮ ಕವಿತೆಯನ್ನು ನಾವೇ ಹೇಗೆ ಬರೆಯುತ್ತೇವೆಯೋ ಹಾಗೆ ಪುಸ್ತಕವನ್ನು ನಾವೇ ಮಾಡಬೇಕು. ಅದರ ಮಾರಾಟವನ್ನೂ ನಾವೇ ಮಾಡಬೇಕು. ಇದರಿಂದ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ ಕನ್ನಡ ಕಾವ್ಯ ವಿತರಣೆ ಸುಲಭವಾಗುತ್ತಿದೆ’ ಎಂದರು.
ಕವಿತೆಗಳನ್ನು ಓದುಗರ ಬಳಿ ತಲುಪಿಸುವುದು ಹೇಗೆ ಎಂಬುದನ್ನು ವಿವರಿಸಿದ ಅವರು, ಕವಿಗಳು ಗೋಷ್ಠಿಯಲ್ಲಿ ಭಾಗವಹಿಸುವಾಗ ಪುಸ್ತಕದ ಪ್ರತಿಯನ್ನು ಯಾವ ಸಂಕೋಚವೂ ಇಲ್ಲದೆ ಬಗಲಲ್ಲಿ ಇಟ್ಟುಕೊಂಡು ಹೋದರೆ ವಾಪಸು ಬರುವಾಗ ಹೆಗಲಭಾರ ಸ್ವಲ್ಪವಾದರೂ ಕಡಿಮೆಯಾಗುತ್ತದೆ. ಯಾವ ಪ್ರಕಾಶಕರೂ ಕವಿತೆಯನ್ನು ಪ್ರಕಟಿಸಲು ಒಪ್ಪದಿದ್ದರೂ ಕವಿಗಳೇ ಕವಿಗಳಿಗೆ ಆಸರೆಯಾಗಬೇಕು. ಪತ್ರಗಳ ಮೂಲಕ ಓದುಗರು ಕವಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
‘ನನಗೆ ಎರಡು ರೀತಿಯ ಜನರನ್ನು ಕಂಡರೆ ಆಗುವುದಿಲ್ಲ. ಒಂದು ಬಹಳ ವೇಗವಾಗಿ ಬರೆಯುವ ಲೇಖಕರು, ಮತ್ತೊಂದು ಬಾಯಿಪಾಠ ಮಾಡುವ ಜನ. ಯಾಕೆಂದರೆ ಎಂದೂ ನಾನು ಇವೆರಡನ್ನೂ ಸಾಧಿಸಲೇ ಇಲ್ಲ. ನನಗೆ ಲೇಖನ ಬರೆಯಲು ಹದಿನೆಂಟು ದಿನ ಅವಧಿ ಕೊಟ್ಟರೆ ನಾನು ಪ್ರಾರಂಭಿಸುವುದೇ ಹದಿನೇಳನೇ ದಿನ’ ಎಂದು ಗಿರಡ್ಡಿ ಚಟಾಕಿ ಹಾರಿಸಿದರು. ಟಿ.ಪಿ. ಅಶೋಕ ಅವರ ‘ಕಥನ ಕಾರಣ’ ಮತ್ತು ಸಿ.ಎನ್. ರಾಮಚಂದ್ರನ್ ಅವರ ‘ಭಾಷಾಂತರ: ಸೈದ್ಧಾಂತಿಕ ಹಾಗೂ ಅನ್ವಯಿಕ ನೆಲೆಗಳು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ ಇದ್ದರು.
ಪುಸ್ತಕ ಮೂಸಿದ ಪುತಿನ!
ಒಮ್ಮೆ ಪುತಿನ ಅವರ ಕಾವ್ಯ ನಾಟಕಗಳ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿತ್ತು. ಅವರ ಆರೋಗ್ಯ ವಿಷಮಿಸಿದ್ದರಿಂದ ಕಿವಿ ಕೇಳಿಸುತ್ತಿರಲಿಲ್ಲ. ಕಣ್ಣು ಕಾಣುತ್ತಿರಲಿಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಕರೆಯಬಾರದು ಎಂದು ಮೊದಲೇ ತೀರ್ಮಾನಿಸಲಾಗಿತ್ತು. ಆದರೆ ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು ಎನ್ನುವಾಗ ಒಮ್ಮೆಲೆ ಬೆಳಕು ಬರುವ ಹಾಗೆ ಪುತಿನ ಅವರು ಪ್ರವೇಶ ಮಾಡಿದರಂತೆ.
ಆಗ ಪುಸ್ತಕವನ್ನು ಅವರ ಬಳಿಗೆ ತೆಗೆದುಕೊಂಡು ಹೋದಾಗ ‘ಏನಿದು’ ಎಂದು ಕೇಳಿದರಂತೆ. ‘ನಿಮ್ಮ ಪುಸ್ತಕ’ ಎಂದು ಉತ್ತರಿಸಿದ್ದಕ್ಕೆ, ಪುಸ್ತಕವನ್ನು ತೆಗೆದುಕೊಂಡು ಗಟ್ಟಿಯಾಗಿ ಉಸಿರು ಎಳೆದುಕೊಂಡು ‘ಆಹಾ. ಚೆನ್ನಾಗಿದೆ’ ಎಂದು ಹೇಳಿದ್ದನ್ನು ವೆಂಕಟೇಶಮೂರ್ತಿ ನೆನಪಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.