ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಲುನಾಯಿಯನ್ನು ಕಾಯುವವರು ಯಾರು?

Last Updated 3 ಜುಲೈ 2015, 19:30 IST
ಅಕ್ಷರ ಗಾತ್ರ

ಪ್ರಾಮಾಣಿಕತೆ ಎ೦ಬುದು ಲ್ಯಾಬೊರೇಟರಿಯಲ್ಲಿ ತಯಾರಿಸಬಹುದಾದ ವಸ್ತುವಲ್ಲ. ಲೋಕಾಯುಕ್ತದ೦ಥ ಒ೦ದು ಸಂಸ್ಥೆ ಪರಮ ಪ್ರಾಮಾಣಿಕವಾಗಿಯೂ, ಸ್ಫಟಿಕದಷ್ಟು ಪರಿಶುದ್ಧವೂ ಆಗಿರಬೇಕೆ೦ದು ಬಯಸುವ ಮುನ್ನ ಅದರ ಸ್ವರೂಪವನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಬೇಕು. ಲೋಕಾಯುಕ್ತ ಆಕಾಶದಿಂದ ಇಳಿದು ಬಂದಿಲ್ಲ. ಅದು ಸ್ವಯ೦ಭುವಾಗಿ ಭೂಮಿಯಿಂದ ಉದ್ಭವಿಸಿದ್ದಲ್ಲ. ಅದು ನಾವು ಯಾವ ವ್ಯವಸ್ಥೆಯನ್ನು ಭ್ರಷ್ಟ ಎ೦ದು ಜರಿಯುತ್ತೇವೋ ಅದೇ ವ್ಯವಸ್ಥೆಯ ಸೃಷ್ಟಿ.

ಲೋಕಾಯುಕ್ತದ ಶಿರೋಸ್ಥಾನದಲ್ಲಿ ಮಾತ್ರ ನ್ಯಾಯಮೂರ್ತಿಗಳು ಇರುವುದು.  ಉಳಿದಂತೆ ಅದರ ದೇಹದ ಅರ್ಧ ಭಾಗವನ್ನು ಪೊಲೀಸ್ ಇಲಾಖೆ ಆವರಿಸಿಕೊಂಡರೆ ಇನ್ನರ್ಧ ಭಾಗದಲ್ಲಿರುವುದು ಲೋಕೋಪಯೋಗಿ, ನೀರಾವರಿ ಮು೦ತಾದ ಇಲಾಖೆಗಳಿ೦ದ ಬಂದ ಎಂಜಿನಿಯರುಗಳು. ಭ್ರಷ್ಟಾಚಾರದ ವಿಷಯದಲ್ಲಿ ಸದಾ ಗುಮಾನಿಯಿಂದ ನೋಡಬೇಕಾಗಿರುವ ಇ೦ತಹ ಇಲಾಖೆಗಳಿ೦ದ ಕರೆತ೦ದ ಮ೦ದಿಯ ಮೇಲೆ ನಿವೃತ್ತರಾದ ಒಬ್ಬ ನ್ಯಾಯಮೂರ್ತಿಯನ್ನು ಪ್ರತಿಷ್ಠಾಪಿಸಿದಾಕ್ಷಣ  ಅಲ್ಲೊಂದು ಪವಿತ್ರವಾದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯೊಂದು ಸೃಷ್ಟಿಯಾಗುತ್ತದೆ ಎಂದು ನಾವು ಭಾವಿಸುವುದಿದೆಯಲ್ಲ ಅದು ಸ್ವತ೦ತ್ರ ಭಾರತದ ಅತ್ಯಂತ ದೊಡ್ಡ ಸೆಕ್ಯುಲರ್ ಮೂಢನಂಬಿಕೆ.

ಒ೦ದು ವಿಷಯದಲ್ಲಿ ನಮಗೆ ಸ್ಪಷ್ಟತೆ ಬೇಕಿದೆ. ಅದೇನೆ೦ದರೆ ಲೋಕಾಯುಕ್ತರ (ಸ೦ಸ್ಥೆಯ ಮುಖ್ಯಸ್ಥರ) ಭ್ರಷ್ಟತೆ ಬೇರೆ; ಲೋಕಾಯುಕ್ತದ (ಸ೦ಸ್ಥೆಯ) ಭ್ರಷ್ಟತೆ ಬೇರೆ. ಸ್ವತಃ ಲೋಕಾಯುಕ್ತರ ಹೆಸರಿಗೆ ಸಾರ್ವಜನಿಕವಾಗಿ ಕಳಂಕ ತಟ್ಟಿರುವುದು ಇದೇ ಮೊದಲಿರಬಹುದು. ಆದರೆ ಒ೦ದು ಸ೦ಸ್ಥೆಯಾಗಿ ಲೋಕಾಯುಕ್ತಕ್ಕೆ ಭ್ರಷ್ಟತೆ ಆವರಿಸಿಕೊ೦ಡು ಎಷ್ಟೋ ಸಮಯವಾಗಿದೆ. ಯಾವ ಕಾಲದಲ್ಲಿ ಲೋಕಾಯುಕ್ತ ಅದ್ಭುತವಾಗಿ ಕೆಲಸ ಮಾಡುತ್ತಿದೆ ಎ೦ದು ಜನ ಅ೦ದುಕೊ೦ಡು ಅದನ್ನು ವೈಭವೀಕರಿಸಲು ಪ್ರಾರ೦ಭಿಸಿದರೋ ಆಗಲೇ ಆ೦ತರಿಕವಾಗಿ ಅದರ ಅಧಃಪತನವೂ ಪ್ರಾರಂಭವಾಗಿತ್ತು.

ಅ೦ದೇ ಯಾರಾದರೂ ಇದೆಲ್ಲ ಏನು ಎ೦ದು ಸಣ್ಣದೊಂದು ಧ್ವನಿಯಲ್ಲಿಯಾದರೂ ಪ್ರಶ್ನಿಸಿದ್ದರೆ ಇ೦ದಿನ ಪರಿಸ್ಥಿತಿ ಬರುತ್ತಿರಲಿಲ್ಲ. ಆ ಸಂಸ್ಥೆಯ ನರ, ನಾಡಿ, ರಕ್ತ, ಮಾಂಸ, ಪೇಶಿ, ಎಲುಬು ಇತ್ಯಾದಿಗಳೆಲ್ಲವೂ ಸರ್ಕಾರದಿಂದ ಆಮದಾಗಿರುವ ಸರಕುಗಳು. ಎಷ್ಟೇ ಎಚ್ಚರ ವಹಿಸಿ ಎಷ್ಟೇ ಒಳ್ಳೆಯವರನ್ನು ಆಯ್ದು ತಂದರೂ ಅವರ ಚರ್ಯೆಯನ್ನು ಸದಾ ಗಮನಿಸುತ್ತಿರಬೇಕು ಎನ್ನುವ ಪ್ರಜ್ಞೆ ಮಾಧ್ಯಮಗಳಿಗೂ ಇರಲಿಲ್ಲ, ಸಾರ್ವಜನಿಕರಿಗೂ ಇರಲಿಲ್ಲ, ಭ್ರಷ್ಟಾಚಾರ ವಿರೋಧಿ ಸ್ವಯಂಸೇವಾ ಸಂಸ್ಥೆಗಳಿಗೂ ಇರಲಿಲ್ಲ. ಕ೦ಠಮಟ್ಟ ತಲುಪಿದ್ದು ಈಗ ಸ್ವತಃ ಲೋಕಾಯುಕ್ತರ ಮೂಗಿನ ಮಟ್ಟಕ್ಕೆ ಬ೦ದು ನಿ೦ತಿದೆ. ಈ ಹ೦ತದಲ್ಲೂ ಎಲ್ಲ ಚರ್ಚೆಗಳು ಕೇಂದ್ರೀಕರಿಸಿರುವುದು ವ್ಯಕ್ತಿಯ ಭ್ರಷ್ಟತೆಯ ಸುತ್ತ, ಸಂಸ್ಥೆಯ ಭ್ರಷ್ಟತೆಯ ಸುತ್ತ ಅಲ್ಲ.

ಕರ್ನಾಟಕದಲ್ಲಿ ಸಂದ ಹದಿನೈದು ವರ್ಷಗಳಲ್ಲಿ ಲೋಕಾಯುಕ್ತವನ್ನು ಅರ್ಥಮಾಡಿಕೊಳ್ಳದೆ ವೈಭವೀಕರಿಸಲಾಗಿದೆ. ಅದರ ಇತಿಮಿತಿಗಳನ್ನು ಅರಿಯದೆ ಅದರ ಬಗ್ಗೆ ಅಸಹಜವಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಈ ಎರಡು ಕಾರಣಗಳಿ೦ದಾಗಿ ಲೋಕಾಯುಕ್ತದೊಳಗಿನ ಹುಳುಕುಗಳನ್ನು ಗುರುತಿಸುವುದು ನಮಗೆ ಸಾಧ್ಯವಾಗಲೇ ಇಲ್ಲ. ಭ್ರಷ್ಟಾಚಾರದ ವಿಚಾರದಲ್ಲಿ ನಮಗೆ ಕೋಪ ಇದೆ ಎನ್ನುವ ಕಾರಣಕ್ಕೆ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಮಾಡಿದ್ದೆಲ್ಲ ನಮಗೆ ಸರಿ ಎನ್ನಿಸುತ್ತಿತ್ತು. ಹಿ೦ದಿನ ಲೋಕಾಯುಕ್ತರೊಬ್ಬರು ಶುದ್ಧ ಪಾಳೇಗಾರರ ಶೈಲಿ ಅನುಸರಿಸಿದರು. ಅದನ್ನು ಪ್ರಶ್ನಿಸುವ ಬದಲು ವೈಭವೀಕರಿಸಲಾಯಿತು.  ಭ್ರಷ್ಟಾಚಾರದ ಆರೋಪಿಗಳನ್ನು ಸಾರ್ವಜನಿಕವಾಗಿ ಅವಮಾನಿಸುವ (ನೇಮ್ ಅಂಡ್ ಶೇಮ್) ಅವರ ಮಾರ್ಗ ಮಾಧ್ಯಮದವರ ಕಣ್ಮಣಿಯಾಯಿತು.

ಕಾನೂನಿನ ಪ್ರಕಾರ ರೈಡ್ ಬೇರೆ, ಟ್ರಾಪ್ ಬೇರೆ, ಪರಿಶೀಲನೆ ಬೇರೆ, ತನಿಖೆ ಬೇರೆ. ಇವುಗಳನ್ನು ಮಾಡಬೇಕಾದವರು ಲೋಕಾಯುಕ್ತದ ಬೇರೆ ಬೇರೆ ವಿಭಾಗಗಳಿಗೆ ಸೇರಿದವರು. ಆಡಳಿತದ ಇ೦ತಹ  ಸೂಕ್ಷ್ಮಗಳನ್ನೆಲ್ಲ ಅನುಸರಿಸದೆ ಹೋದರೆ ಅದು ಅಧಿಕಾರ ದುರುಪಯೋಗದ ಅಪಾಯಕ್ಕೆ ದಾರಿ ಮಾಡಿಕೊಡಬಹುದು. ಈ ವಿವೇಚನೆ ಮರೆತ ಮಾಧ್ಯಮಗಳು ಶುದ್ಧ ಗ್ಲಾಡಿಯೇಟರ್ ಶೈಲಿಯಲ್ಲಿ ‘ರೈಡ್, ರೈಡ್, ರೈಡ್’ ಎ೦ದು ಕೂಗಿದವು. ಕೇಳಿದ ಜನ, ಲೋಕಾಯುಕ್ತ ಅಂದರೆ ಹೀಗಿರಬೇಕು ಎನ್ನುವ ಅವಸರದ ತೀರ್ಮಾನಕ್ಕೆ ಬ೦ದರು. ಮಾಧ್ಯಮಗಳ ಕತೆ ಹಾಗಿರಲಿ, ವಿಶ್ವ ಬ್ಯಾ೦ಕಿನಿ೦ದ ಬ೦ದ ಆಡಳಿತ ಸುಧಾರಣಾ ನಿಷ್ಣಾತರೆಲ್ಲ ಈ ‘ನೇಮ್ ಆ೦ಡ್ ಶೇಮ್’ ತ೦ತ್ರಕ್ಕೆ ಭೇಷ್ ಅ೦ದರು.

ವಿವೇಚನಾ ಶೂನ್ಯತೆ ಎನ್ನುವುದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಭಾರತದಲ್ಲಿ ಭ್ರಷ್ಟಾಚಾರದ ಮೂಲಕ ಹಣ ಮಾಡುವುದು ಮರ್ಯಾದೆಗೇಡಿನ ಪ್ರಶ್ನೆ ಏನೂ ಅಲ್ಲ ಎ೦ದು ವಿದೇಶದಿಂದ ಬ೦ದ ಅವರಿಗೆ ಹೇಗೆ ತಿಳಿಯಬೇಕು? ಒಟ್ಟಿನಲ್ಲಿ ಒ೦ದು ಅಸಮರ್ಪಕ, ಅಪಾಯಕಾರಿ ಮಾದರಿಯನ್ನು ಎಲ್ಲರೂ ಒಪ್ಪಿ ಬೆ೦ಬಲಿಸಿದರು. ಇವೆಲ್ಲದರ ಫಲವಾಗಿ ಈ ಪರ್ವ ಯಾವ ಹ೦ತ ತಲುಪಿತು ಎ೦ದರೆ ರೈಡ್, ಟ್ರಾಪ್‌ಗಳಿಗೆಲ್ಲ ಸಂಖ್ಯಾ ಗುರಿ (ಟಾರ್ಗೆಟ್) ನಿಗದಿಪಡಿಸಲಾಯಿತು. ಕಂಗಾಲಾದ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಮುಖ್ಯಸ್ಥರು ಎರ್ರಾಬಿರ್ರಿ ರೈಡ್ ಮಾಡಿ ಅಲ್ಲಲ್ಲಿ ದೊಡ್ಡ ಮಟ್ಟದ ಎಡವಟ್ಟು ಮಾಡಿಕೊಂಡರು. ಭ್ರಷ್ಟರಿಗಿಂತ ಹೆಚ್ಚಾಗಿ ಪ್ರಾಮಾಣಿಕರು ಲೋಕಾಯುಕ್ತಕ್ಕೆ ಹೆದರುವ ಪರಿಸ್ಥಿತಿ ಈಗ ಅಲ್ಲ, ಅ೦ದೇ ಬ೦ದಿತ್ತು.

ಮು೦ದಿನ ಹಂತದಲ್ಲಿ ರೈಡು, ಟ್ರಾಪ್‌ಗಳ, ಸಾರ್ವಜನಿಕ ಛೀಮಾರಿಗಳ ಬಹಿರಂಗ ಪ್ರದರ್ಶನ ಕೊನೆಗೊ೦ಡು ಸ್ವಲ್ಪ ಮಟ್ಟಿನ ಪ್ರಬುದ್ಧತೆ ಕಾಣಿಸಿಕೊಂಡಿತು. ವಿಪರ್ಯಾಸವೆಂದರೆ ಇದನ್ನು ಮೆಚ್ಚಿ ಬರೆಯಬೇಕಿದ್ದ ಮಾಧ್ಯಮಗಳು ರೈಡುಗಳಿಲ್ಲದೆ ಲೋಕಾಯುಕ್ತ ಸತ್ತೇ ಹೋಯಿತು ಎ೦ಬಂತೆ ಬಿ೦ಬಿಸಿದವು. ಮಾಧ್ಯಮಗಳ ಒತ್ತಡಕ್ಕೆ ಮಣಿಯದ ಆಗಿನ ಲೋಕಾಯುಕ್ತರ ನಿಲುವು ಪ್ರಶ೦ಸನೀಯವಾದದ್ದು. ಆದರೆ ಈ ಹೊರಗಣ ಬದಲಾವಣೆಯ ನಂತರವೂ ಒಳಗಣ ಹುಳುಕುಗಳೆಲ್ಲ ಅ೦ತ್ಯ ಕಾಣಲಿಲ್ಲ. ಉತ್ತರವಿಲ್ಲದ ಎಷ್ಟೋ ಪ್ರಶ್ನೆಗಳು ಲೋಕಾಯುಕ್ತದ ವ್ಯವಹಾರಗಳಲ್ಲಿ ಆಗಾಗ ಹುಟ್ಟಿಕೊಳ್ಳುತ್ತಿದ್ದವು. ಇವುಗಳನ್ನು ಸರಿಪಡಿಸುವಲ್ಲಿ ಲೋಕಾಯುಕ್ತರೇ ಅಸಹಾಯಕರ೦ತೆ ಕ೦ಡರು. 

ಒಳಗಿನಿಂದ ಮಾಹಿತಿ ಸೋರುವುದರ ಬಗ್ಗೆ, ಗುಪ್ತ ವ್ಯವಹಾರಗಳ ಬಗ್ಗೆ, ಏಜೆಂಟರ ಬಗ್ಗೆ ಮೊದಮೊದಲು ಗುಸುಗುಸು ಮಾತಷ್ಟೇ ಇದ್ದದ್ದು ನಂತರದ ದಿನಗಳಲ್ಲಿ ಟ್ಯಾಬ್ಲಾಯ್‌್ಡ ಪತ್ರಿಕೆಗಳಲ್ಲಿ ಸುದ್ದಿಯಾಗತೊಡಗಿತು. ಬರಬರುತ್ತಾ ಅಂತಹ ಸುದ್ದಿಗಳೆಲ್ಲ ಮುಖ್ಯವಾಹಿನಿ ಮಾಧ್ಯಮಗಳಲ್ಲಿಯೇ ಮಾಮೂಲಿಯಾಯಿತು. ಎಲ್ಲವನ್ನೂ ಹತ್ತಿರದಿಂದ ನೋಡಿ ಸಹಿಸಲಾಗದೆ ಹೊರನಡೆದ ಒಬ್ಬ ಪೊಲೀಸ್ ಅಧಿಕಾರಿ ಆವೇಶದಿಂದ ಬರೆದ ಪತ್ರ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿತು. ಆದರೆ  ಅದನ್ನೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ತಾವೇ ನೇಮಿಸಿದ ಈಗಿನ ಲೋಕಾಯುಕ್ತರ ಭ್ರಷ್ಟಾಚಾರದ ಬಗ್ಗೆ ಬೊಬ್ಬಿಡುವ ರಾಜಕೀಯ ಪಕ್ಷವೊಂದರ ನಾಯಕರು, ಆಗಿನ ಲೋಕಾಯುಕ್ತರ ಕೈ ಬಲಪಡಿಸುವ ಬದಲು ಅವರನ್ನು ರಾಜಕೀಯ ಕಾರಣಕ್ಕಾಗಿ ಹಾದಿ ಬೀದಿಗಳಲ್ಲಿ ನಿಂತು ಮೂದಲಿಸಿದರು. ಏನೇ ನಡೆದರೂ ಆಗ ಲೋಕಾಯುಕ್ತದ ಹಿತ ರಕ್ಷಣೆಗೆ ಯಾರೂ ಬೀದಿಗಿಳಿಯಲಿಲ್ಲ. ಲೋಕಾಯುಕ್ತದಲ್ಲಿ ಆಗಾಗ ಏಳುತ್ತಿದ್ದ ನಿಗೂಢ ಪ್ರಶ್ನೆಗಳ ಜಾಡು ಹಿಡಿದು ಯಾವ ಮಾಧ್ಯಮಗಳೂ ಸಾಗಲಿಲ್ಲ. ಹೀಗೆಲ್ಲ ಆಗುವುದು, ಹೀಗೆಲ್ಲ ಆಡುವುದು, ಹೀಗೆಲ್ಲ ಮಾಡುವುದು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲ ಗೊಳಿಸುತ್ತದೆ ಎ೦ದು ಯಾರಿಗೂ ಅನ್ನಿಸಲಿಲ್ಲ.

ಇಷ್ಟೆಲ್ಲ ಸಮಸ್ಯೆಗಳ ನಡುವೆ ಒಂದಷ್ಟು ಒಳ್ಳೆಯ ಕೆಲಸಗಳಾಗಿವೆ. ಅವು ಮುಖ್ಯವಾಗಿ ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ಸಂಬಂಧಿಸಿದಂತೆ ಆಗಿರುವಂಥವು. ಅದೊಂದು ರೀತಿ ಪವಾಡವೇ ಸರಿ. ಲೋಕಾಯುಕ್ತರು ಸರಿ ಇದ್ದರೆ ಲೋಕಾಯುಕ್ತದಲ್ಲಿ ಎಲ್ಲವೂ ಸರಿ ಇರುತ್ತದೆ ಎನ್ನುವ ತೀರ್ಮಾನಕ್ಕೆ ಎಲ್ಲರೂ ಬ೦ದ೦ತಿದೆ. ಅದು ತಪ್ಪು. ಲೋಕಾಯುಕ್ತರಾದವರ ನಿಯಂತ್ರಣಕ್ಕೆ ನಿಲುಕದ ಲೋಕವೊಂದು ಲೊಕಾಯುಕ್ತದೊಳಗಿದೆ. ಈಗಿನ ಪ್ರಕರಣವೂ ಸೇರಿದಂತೆ ಲೋಕಾಯುಕ್ತದ ಬಗ್ಗೆ ನಮಗೆ ತಿಳಿದಿರುವುದೆಲ್ಲ ಅರೆಬರೆ ಸತ್ಯಗಳು.  ಅಲ್ಲಿ ನಮಗೆ ತಿಳಿದದ್ದಕ್ಕಿಂತ ತಿಳಿಯದೇ ಉಳಿದದ್ದು ಹೆಚ್ಚಿದೆ. ಅದೊಂದು ನಿಗೂಢ ವ್ಯವಸ್ಥೆ. ಆ ನಿಗೂಢವನ್ನು ಭೇದಿಸಲು ಸ್ವತಃ ಲೋಕಾಯುಕ್ತರಾಗಿ ಬಂದವರಿಗೂ ಸಾಧ್ಯವಾಗುತ್ತಿಲ್ಲ.

ಒ೦ದೋ ಅವರು ತಮ್ಮ ಕೈಲಾದದ್ದನ್ನು ಮಾಡಿ ಸುಮ್ಮನಿರಬೇಕು.  ಇಲ್ಲವೇ ತಾನೂ ಆ ನಿಗೂಢ ವ್ಯವಸ್ಥೆಯ ಭಾಗವಾಗಬೇಕು. ಈಗಿನ ಲೋಕಾಯುಕ್ತರು ಎರಡನೆಯ ಮಾರ್ಗವನ್ನು ಆಯ್ಕೆ ಮಾಡಿಕೊ೦ಡ೦ತಿದೆ. ಈ ಕಾರಣಕ್ಕೆ ಅವರ ನಿರ್ಗಮನ ಅನಿವಾರ್ಯವಾಗಬಹುದು. ಆದರೆ ಅವರ ಸ್ಥಾನಕ್ಕೆ ಪ್ರಶ್ನಾತೀತ ಪ್ರಾಮಾಣಿಕರೊಬ್ಬರು ಲೋಕಾಯುಕ್ತರಾಗಿ ಬಂದರೂ ಆ ಸಂಸ್ಥೆಯಲ್ಲಿ ಎಲ್ಲವೂ ಸರಿಯಾಗುತ್ತದೆ ಎನ್ನುವುದು ಭ್ರಮೆ. ಲೋಕಾಯುಕ್ತ ನಿಜ ಅರ್ಥದಲ್ಲಿ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಯಾಗಬೇಕಾದರೆ ಅದರ ಈಗಿನ ಸಾ೦ಸ್ಥಿಕ ಸ್ವರೂಪವೇ ಬದಲಾಗಬೇಕು. ಅದು ಹೇಗೆ ಎನ್ನುವುದಕ್ಕೆ ಉತ್ತರವಿಲ್ಲ. ಭ್ರಷ್ಟಾಚಾರದ ನಿಗ್ರಹಕ್ಕೆ ನೇಮಕಗೊಂಡವರು ತಾವೇ ಸ್ವತಃ  ಭ್ರಷ್ಟರಾಗದ೦ತೆ ನೋಡಿಕೊಳ್ಳುವುದು ಹೇಗೆ (Who wil* watch the watchdog?) ಎನ್ನುವುದು ಕೇವಲ ಕರ್ನಾಟಕದ  ಸಮಸ್ಯೆಯಲ್ಲ. ಅದು ಇಡೀ ಜಗತ್ತಿನ ಮುಂದಿರುವ ಸಮಸ್ಯೆ. ಈ ತನಕ ಯಾವ ದೇಶಕ್ಕೂ ಈ ಸಮಸ್ಯೆಗೆ ಸಮರ್ಪಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಾಗೆಂದು ಪರ್ಯಾಯದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕಾಗಿಲ್ಲ.
*
ನೇಮಕ / ಅಧಿಕಾರ
* ಲೋಕಾಯುಕ್ತ ಕಾಯ್ದೆ ಪ್ರಕಾರ ಲೋಕಾಯುಕ್ತರ ನೇಮಕ
* ಸಂಸ್ಥೆ ಮತ್ತು ಅದರ ಮುಖ್ಯಸ್ಥರು ಎರಡಕ್ಕೂ ಒಂದೇ ಹೆಸರು ಅನ್ವಯ
* ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಅಥವಾ ದೇಶದ ಯಾವುದೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿರಬೇಕು.
* ಮುಖ್ಯಮಂತ್ರಿ ಸಲಹೆ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ
* ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ವಿಧಾನಪರಿಷತ್‌ ಅಧ್ಯಕ್ಷ, ವಿಧಾನಸಭೆ ಸ್ಪೀಕರ್‌, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರ ಸಲಹೆ ಪಡೆಯಬೇಕಾಗುತ್ತದೆ.
* ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರ ಮತ್ತು ಸರ್ಕಾರಿ ನೌಕರರ ಬಗೆಗಿನ ಸಾರ್ವಜನಿಕರ ದೂರುಗಳ ವಿಚಾರಣೆ ನಡೆಸಿ ವರದಿ ಸಲ್ಲಿಸುವ ಉದ್ದೇಶ
* ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ರಾಜ್ಯ ಸರ್ಕಾರದ ಎಲ್ಲ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲು ಅಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT