ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿರುವ ಭೀಕರ ಪ್ರವಾಹದಲ್ಲಿ ರಾಜ್ಯದ ಸುಮಾರು 300 ಜನ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಇವರನ್ನೆಲ್ಲ ಸಂಪರ್ಕಿಸಿ ಸುರಕ್ಷಿತವಾಗಿ ವಾಪಸ್ ಕರೆತರುವ ಕಾರ್ಯಕ್ಕಾಗಿ ಐಎಎಸ್ ಅಧಿಕಾರಿ ರಮಣದೀಪ್ ಚೌಧರಿ ನೇತೃತ್ವದಲ್ಲಿ ಮೂವರು ಅಧಿಕಾರಿಗಳ ತಂಡವನ್ನು ರಾಜ್ಯ ಸರ್ಕಾರ ನಿಯೋಜಿಸಿದೆ.
ಐಎಎಸ್ ಅಧಿಕಾರಿ ನಿತೇಶ್ ಪಟೇಲ್ ಮತ್ತು ದೆಹಲಿಯಲ್ಲಿರುವ ಕರ್ನಾಟಕದ ಸ್ಥಾನಿಕ ಆಯುಕ್ತರ ಕಚೇರಿ ಅಧಿಕಾರಿ ವಾಲಿಯಾ ಅವರು ತಂಡದ ಇನ್ನಿಬ್ಬರು ಸದಸ್ಯರು.
ರಮಣದೀಪ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿ ರಾಜ್ಯದವರನ್ನು ವಾಪಸ್ ಕರೆತರುವ ಕೆಲಸ ಮಾಡುವರು. ವಾಲಿಯಾ ಅವರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಜೊತೆ ಸಂಪರ್ಕ ಸಾಧಿಸುವ ಹೊಣೆ ನಿಭಾಯಿಸುತ್ತಾರೆ. ನಿತೇಶ್ ಅವರು ಬೆಂಗಳೂರಿನಿಂದಲೇ ರಕ್ಷಣೆ ಮತ್ತು ವಾಪಸು ಕರೆತರುವ ಕಾರ್ಯಾಚರಣೆಗೆ ನೆರವು ನೀಡುತ್ತಾರೆ.
ಹೇಗೆ?: ರಮಣದೀಪ್ ಮೊದಲು ದೆಹಲಿಯಲ್ಲಿ ರಾಜ್ಯದ ಸ್ಥಾನಿಕ ಆಯುಕ್ತರು ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ಅಗತ್ಯ ಮಾಹಿತಿ ಪಡೆಯುವರು. ಬಳಿಕ ಶ್ರೀನಗರಕ್ಕೆ ಹೋಗುವರು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯ ಸರ್ಕಾರ ನೇರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದಿಲ್ಲ. ರೈಲು ಮತ್ತು ವಿಮಾನಗಳ ಮೂಲಕ ರಾಜ್ಯದವರನ್ನು ವಾಪಸು ಕರೆತರಲು ಸರ್ಕಾರ ಯೋಚಿಸಿದೆ. ಮುಖ್ಯಮಂತ್ರಿಯವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
‘ರಕ್ಷಣೆಗೆ ಬದ್ಧ’: ರಾಜ್ಯದವರ ರಕ್ಷಣೆ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಎಂ ಸಿದ್ದರಾಮಯ್ಯ,
‘ಪ್ರವಾಹದಲ್ಲಿ ಸಿಲುಕಿರುವ ರಾಜ್ಯದ ಜನರ ರಕ್ಷಣೆಗೆ ಬದ್ಧ’ ಎಂದಿದ್ದಾರೆ.
ಮಧುಚಂದ್ರಕ್ಕೆ ಹೋದವರ ಮಾಹಿತಿ ಇಲ್ಲ
ದಾವಣಗೆರೆ/ಕುಶಾಲನಗರ: ಮಧುಚಂದ್ರಕ್ಕೆಂದು ಕಾಶ್ಮೀರಕ್ಕೆ ತೆರಳಿರುವ ರಾಜ್ಯದ ವೈದ್ಯದಂಪತಿ ಎರಡು ದಿನಗಳಿಂದ ಯಾವುದೇ ರೀತಿಯ ಸಂಪರ್ಕಕ್ಕೆ ಸಿಗದ ಕಾರಣ ಅವರ ಕುಟುಂಬ ಆತಂಕಕ್ಕೆ ಸಿಲುಕಿದೆ. ಕುಶಾಲನಗರದ ದಂಪತಿ ಕೂಡ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಹುಡುಕಿಕೊಡುವಂತೆ ಕುಟುಂಬದ ಸದಸ್ಯರು ಪಟ್ಟಣದ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ.
ಸಹಾಯವಾಣಿ
ಪ್ರವಾಹದಲ್ಲಿ ಸಿಕ್ಕಿಬಿದ್ದವರನ್ನು ಕರೆತರುವ ಖರ್ಚು–ವೆಚ್ಚಗಳಿಗಾಗಿ ಮೊದಲ ಹಂತದಲ್ಲಿ ರೂ. 15 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ರಕ್ಷಣಾ ಕಾರ್ಯದ ಸಮನ್ವಯಕ್ಕಾಗಿ ಇಲಾಖೆ ವಿಪತ್ತು ನಿರ್ವಹಣಾ ವಿಭಾಗದಲ್ಲಿ ಸ್ಥಾಪಿಸಲಾಗಿರುವ ವಿಶೇಷ ಸಹಾಯವಾಣಿ: 1070 ಅಥವಾ 080– 2234 0676.
ಇಂದು ಶ್ರೀನಗರಕ್ಕೆ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಮಣದೀಪ್, ‘ಮಂಗಳವಾರ ಬೆಳಿಗ್ಗೆ ಶ್ರೀನಗರಕ್ಕೆ ಹೋದ ಬಳಿಕ ಪೂರ್ಣ ಮಾಹಿತಿ ದೊರೆಯುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.