ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಬ್ಬಂದಿಗೆ ನಾಲ್ಕು ತಿಂಗಳುಗಳಿಂದ ಸಂಬಳದ ಹಣವನ್ನು ಸರ್ಕಾರ ಬಿಡುಗಡೆ ಮಾಡದ ಕಾರಣ ವಿ.ವಿ.ಯು ಬ್ಯಾಂಕಿನಿಂದ ಸಾಲ ಪಡೆದು ಸೆಪ್ಟೆಂಬರ್ ತಿಂಗಳ ಸಂಬಳವನ್ನು ಮಂಗಳವಾರ (ಅ.29) ಪಾವತಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷಾರಂಭದಲ್ಲಿ ಶುಲ್ಕ ಮತ್ತಿತರ ರೂಪದಲ್ಲಿ ಸಂಗ್ರಹಿಸಿದ್ದ ಸಂಪನ್ಮೂಲವನ್ನು ಜುಲೈ ಮತ್ತು ಆಗಸ್ಟ್ ತಿಂಗಳ ಸಂಬಳ ಪಾವತಿಗೆ ಬಳಸಿಕೊಳ್ಳಲಾಗಿತ್ತು. ನಂತರವೂ ಅನುದಾನ ಬಿಡುಗಡೆಯಾಗಲಿಲ್ಲ. ಪರಿಣಾಮ ವಾಗಿ ಸೆಪ್ಟೆಂಬರ್ ಸಂಬಳ ಪಾವತಿಯಾಗಿರಲಿಲ್ಲ. ಜತೆಗೆ ಈ ತಿಂಗಳ ಸಂಬಳವನ್ನೂ ಕೊಡಬೇಕಿದೆ. ದೀಪಾವಳಿ ಹಬ್ಬಕ್ಕೆ ತೊಂದರೆಯಾಗದಿರಲಿ ಎಂಬ ಕಾರಣದಿಂದ ಕೆನರಾ ಬ್ಯಾಂಕ್ನಿಂದ ಮಾಸಿಕ ಶೇ 16ರ ಬಡ್ಡಿ ದರದಲ್ಲಿ ಓವರ್ ಡಾ್ರಫ್ಟ್ ರೂಪದಲ್ಲಿ ₨ 2.25 ಕೋಟಿ ಸಾಲ ಪಡೆದು, ಕಳೆದ ತಿಂಗಳ ಸಂಬಳ ನೀಡಲಾಯಿತು ಎಂದು ಕುಲಪತಿ ಡಾ.ಮಂಜಪ್ಪ ಹೊಸಮನೆ ‘ಪ್ರಜಾವಾಣಿ’ಗೆ ತಿಳಿಸಿದರು.
ಅನುದಾನ ಬಿಡುಗಡೆ ಮಾಡಿಲ್ಲದಿರುವುದನ್ನು ವಿ.ವಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅನೇಕ ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಪ್ರತಿ ತಿಂಗಳ 20ರ ಒಳಗೆ ಅನುದಾನ ಬಿಡುಗಡೆಯಾದರೆ ಮಾತ್ರ ಮಾಸಾಂತ್ಯಕ್ಕೆ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು ಎಂದು ಅವರು ಹೇಳಿದರು.
ವಿ.ವಿ.ಯಲ್ಲಿ ಒಟ್ಟು 140 ಜನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದು, ಪ್ರತಿ ತಿಂಗಳೂ ಸಂಬಳಕ್ಕೆ ₨ 75 ಲಕ್ಷ ಬೇಕಾಗುತ್ತದೆ ಎಂದು ಅವರು ಹೇಳಿದರು.