ಧಾರವಾಡ: ಅನಾರೋಗ್ಯದ ಕಾರಣದಿಂದಾಗಿ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಧಾರವಾಡಕ್ಕೆ ಹಿಂತಿರುಗುವಾಗ ಚೆನ್ನೈ ರೈಲು ನಿಲ್ದಾಣದಲ್ಲಿ ಆಯತಪ್ಪಿ ಬಿದ್ದ ಅವರಿಗೆ ಮೂಗಿನ ಮೇಲ್ಭಾಗದಲ್ಲಿ ಗಾಯವಾಗಿತ್ತು.
‘ಚಿಕಿತ್ಸೆ ನೀಡಿದ ವೈದ್ಯರು, ಇನ್ನು ಮುಂದೆ ದೂರದ ಊರಿಗೆ ಪ್ರಯಾಣ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. ಅಕಾಡೆಮಿಯ ಕಾರ್ಯಕ್ಕೆ ದೆಹಲಿ, ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಪ್ರವಾಸ ಮಾಡಬೇಕಾಗುತ್ತದೆ. ಆದರೆ ಪ್ರಯಾಣ ಕಷ್ಟಕರವಾದುದರಿಂದ ರಾಜೀನಾಮೆ ನೀಡಿದ್ದೇನೆ’ ಎಂದು ಡಾ.ಕಲಬುರ್ಗಿ ‘ಪ್ರಜಾವಾಣಿ’ಗೆ ತಿಳಿಸಿದರು.15 ದಿನಗಳ ಹಿಂದೆಯೇ ಅವರ ರಾಜೀನಾಮೆ ಪತ್ರ ಅಕಾಡೆಮಿಯ ಕಾರ್ಯದರ್ಶಿ ಡಾ.ಕೆ. ಶ್ರೀನಿವಾಸರಾವ್ ಅವರಿಗೆ ತಲುಪಿದೆ.
‘ಅನಾರೋಗ್ಯವಿದ್ದರೆ ದೆಹಲಿಗೆ ಬರುವುದು ಬೇಡ. ಆದರೆ ವರ್ಷ ಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುವ ಪ್ರಾದೇಶಿಕ ಮಂಡಳಿಯ ಸಭೆಯಲ್ಲಾದರೂ ಭಾಗವಹಿಸಿ’ ಎಂದು ಶ್ರೀನಿವಾಸ ರಾವ್ ಮನವಿ ಮಾಡಿದ್ದರು. ಆದರೆ, ಕಲಬುರ್ಗಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಆಗದು ಎಂದು ಅವರಿಗೆ ತಿಳಿಸಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಅಕಾಡೆಮಿ ಅಧ್ಯಕ್ಷ ಡಾ. ವಿಶ್ವನಾಥ್ ಪ್ರಸಾದ್ ತಿವಾರಿ ಅವರಿಗೆ ತಲುಪಿಸಲಾಗಿದೆ.
‘ಕಲಬುರ್ಗಿ ಅವರು ರಾಜೀನಾಮೆ ನೀಡಿರುವುದು ದೆಹಲಿಗೆ ಬಂದ ನಂತರವೇ ನನಗೆ ಗೊತ್ತಾದುದು. ಈ ಕುರಿತ ಅಂತಿಮ ತೀರ್ಮಾನವನ್ನು ಅಧ್ಯಕ್ಷರೇ ತೆಗೆದುಕೊಳ್ಳಲಿದ್ದಾರೆ’ ಎಂದು ಡಾ. ಕಂಬಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.