ಕಾರ್ಕಳ: ಬದುಕಿನಲ್ಲಿ ಪ್ರಮಾಣಿಕತೆ ಇಲ್ಲದಿರುವುದೇ ಚಾರಿತ್ರ್ಯ ರಹಿತ ಸಾಹಿತ್ಯ ರಚನೆಗೆ ಕಾರಣವಾಗಿದೆ. ಅಂತಹ ಸಾಹಿತ್ಯ ಕೇವಲ ತೋರಿಕೆ ಸಾಹಿತ್ಯವಾಗಲಿದೆ ಎಂದು ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.
ಇಲ್ಲಿನ ಅನಂತಶಯನದ ಹೊಟೇಲ್ ಪ್ರಕಾಶದ ಸಂಭ್ರಮ ಸಭಾಂಗಣದಲ್ಲಿ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಂಗಳವಾರ ನಡೆದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಕಟಿಸಿದ ‘ಅವತಂಸ’ ಎಂಬ ಕೃತಿಯನ್ನುಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹಿಂದಿನ ಸಾಹಿತಿಗಳ ಸಾಹಿತ್ಯದಲ್ಲಿ ಸತ್ಯವೇ ಕಾಣುತ್ತಿತ್ತು. ಆದರೆ, ಇಂದಿನವರ ಸಾಹಿತ್ಯದಲ್ಲಿ ಅಸತ್ಯಗಳೇ ಕಾಣಿಸುತ್ತಿವೆ. ಮನುಷ್ಯರನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡುವ ಸಾಹಿತ್ಯ ಸಂಘಟನೆಗಳು ದುರ್ಬಲವಾಗುತ್ತಿರುವುದು ಬೇಸರದ ಸಂಗತಿ ಎಂದರು.
ಸಾಹಿತ್ಯ ವಲಯ ದುರ್ಬಲವಾಗುತ್ತಿರುವ ಈ ಕಾಲಘಟ್ಟದಲ್ಲಿ ಶಾಸ್ತ್ರಬದ್ಧವಾಗಿ ಉತ್ತಮವಾದುದನ್ನು ಉಳಿಸಿಕೊಳ್ಳುವ ಕೆಲಸ ‘ಅವತಂಸ’ದಂತಹ ಕೃತಿಗಳ ಮೂಲಕ ನಡೆಯುತ್ತಿರುವುದು ಆಶಾದಾಯಕ ಸಂಗತಿ ಎಂದರು.
ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣು ಭಟ್ ಕೃತಿಯನ್ನು ಪರಿಚಯಿಸಿದರು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಅಧ್ಯಕ್ಷ ಪ್ರೊ. ಎಚ್.ಹೆರಂಜೆ ಕೃಷ್ಣ ಭಟ್ ಶುಭಾಶಂಸನೆಗೈದರು. ಪ್ರೊ.ರಮೇಶ್ ಕಾರ್ಣಿಕ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಾಹಿತ್ಯ ಸಂಘದ ಸಂಚಾಲಕ ಪ್ರೊ.ಎಂ.ರಾಮಚಂದ್ರ ಸ್ವಾಗತಿಸಿದರು. ಶಿಕ್ಷಕ ಮುನಿರಾಜ ರೆಂಜಾಳ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ.ಪದ್ಮನಾಭ ಗೌಡ ವಂದಿಸಿದರು.