ಚಿಕ್ಕಮಗಳೂರು: ನಗರದ ಒಂದು ಕೋಮಿನ ಪ್ರಾರ್ಥನಾ ಮಂದಿರವೊಂದರಲ್ಲಿ ಶನಿವಾರ ಮುಂಜಾನೆ ದುಷ್ಕರ್ಮಿಗಳು ಹಂದಿ ಕಡಿದು ಅಪವಿತ್ರಗೊಳಿಸಿದ ಘಟನೆಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಇದರ ಬೆನ್ನಲ್ಲೇ ಜಿಲ್ಲಾಡಳಿತ ಎರಡು ದಿನ ನಗರದ 6 ಕಿ.ಮೀ. ಸುತ್ತಳತೆಯಲ್ಲಿ ನಿಷೇಧಾಜ್ಞೆ ಹೇರಿದೆ. ಘಟನೆಯಿಂದ ಅಂಗಡಿ ಮುಂಗಟ್ಟು, ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು, ಸಿನಿಮಾ ಮಂದಿರಗಳ ಬಾಗಿಲು ಮುಚ್ಚಲಾಯಿತು.
ವಿವರ: ದುಷ್ಕರ್ಮಿಗಳು ನಡೆಸಿದ ಕೃತ್ಯ ಬೆಳಿಗ್ಗೆ ಪ್ರಾರ್ಥನೆಗೆ ಹೋದಾಗ ಬೆಳಕಿಗೆ ಬಂದಿದೆ. ವಿಷಯ ತಿಳಿದು ಆ ಸಮುದಾಯದ ಜನ ಜಮಾಯಿಸಿದರು.
ಕಿಡಿಗೇಡಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸುವಂತೆ ಒತ್ತಾಯಿಸಿ ಎಂ.ಜಿ. ರಸ್ತೆಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು. ಶಾಸಕ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಿದರು. ನಂತರ ಶಾಸಕರು ಪ್ರಾರ್ಥನಾ ಮಂದಿರಕ್ಕೆ ತೆರಳಿ ಆಕ್ರೋಶಗೊಂಡಿದ್ದ ಸಮುದಾಯದ ಮುಖಂಡರಿಗೆ ಸಾಂತ್ವನ ಹೇಳಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಈ ನಡುವೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಂ.ಜಿ. ರಸ್ತೆ ಕಡೆಗೆ ಹಿಂದಿರುಗುತ್ತಿದ್ದ ಗುಂಪು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ಕೆಲವರ ಮೇಲೆ ಹಲ್ಲೆ ನಡೆಸಿದ್ದರಿಂದ ಬಹುಸಂಖ್ಯಾತ ಸಮುದಾಯದವರು ಮತ್ತು ವರ್ತಕರು ಎಂ.ಜಿ.ರಸ್ತೆಯ ಮತ್ತೊಂದು ತುದಿಯಲ್ಲಿ ಪ್ರತಿಭಟನೆ ಆರಂಭಿಸಿತು.
ಎರಡೂ ಕಡೆಯವರು ಅಂಡೆ ಛತ್ರದ ಸಮೀಪ ಎಂ.ಜಿ.ರಸ್ತೆಯಲ್ಲಿ ಘರ್ಷಣೆಗೆ ಮುಂದಾಗಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರು.