ಶಿಕಾರಿಪುರ: ತ್ರಿಪದಿಗಳ ಮೂಲಕ ಸರ್ವಜ್ಞ ಜಾತ್ಯತೀತ ಮನೋ ಭಾವನೆಯ ಸಂದೇಶವನ್ನು ಸಮಾಜಕ್ಕೆ ನೀಡಿದ್ದರು ಎಂದು ಶಾಸಕ ಬಿ.ವೈ.ರಾಘ ವೇಂದ್ರ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಸರ್ವಜ್ಞ ಜಯಂತ್ಯುತ್ಸವ ಅಂಗವಾಗಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಕುಂಬಾರ ಸಮಾಜ ಆಶ್ರಯದಲ್ಲಿ ಗುರುವಾರ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಹೊರಟ ಸರ್ವಜ್ಞ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ವಜ್ಞ ಸೇರಿದಂತೆ ಹಲವು ದಾರ್ಶನಿಕರ ಆಶಯ ಹಾಗೂ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಿಳೆಯರ ಬಗ್ಗೆ ಹೆಚ್ಚು ಗೌರವ ಭಾವನೆ ಹೊಂದಿದ ಸರ್ವಜ್ಞ, ಮಾತೃಛಾಯೆಯ ಬಗ್ಗೆ ತಮ್ಮ ವಚನಗಳ ಮೂಲಕ ಸಮಾಜಕ್ಕೆ ತಿಳಿಸುವ ಪ್ರಯತ್ನ ನಡೆಸಿದ್ದರು ಎಂದರು.
ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿದ್ದ ಸರ್ವಜ್ಞ ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದುವ
ಕಾರ್ಯ ಮಾಡಿದರು. ಅವರನ್ನು ಜಾತಿ ಚೌಕಟ್ಟಿನಲ್ಲಿ ಗುರುತಿಸಲು ಸಾಧ್ಯವಿಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಸರ್ವಜ್ಞ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಆಸಕ್ತಿ ತೋರಿಸಿದ್ದರು ಎಂದು ನೆನಪಿಸಿಕೊಂಡರು.
ನಂತರ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಹೊರಟ ಸರ್ವಜ್ಞ ಭಾವಚಿತ್ರ ಮೆರವಣಿಗೆ ತೇರು ಬೀದಿ, ಬಸ್ನಿಲ್ದಾಣ ಸಮೀಪದ ಪ್ರಮುಖ ರಸ್ತೆಗಳ ಮೂಲಕ ಪುರಸಭೆ ತಲುಪಿತು. ಪುರಸಭೆ ಸಭಾಂಗಣದಲ್ಲಿ ಸರ್ವಜ್ಞ ಜೀವನ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಶಿವಕುಮಾರ್, ಪುರಸಭೆ ಅಧ್ಯಕ್ಷೆ ಗೌರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜಿ.ವಸಂತಗೌಡ, ಇಓ ಲೋಹಿತ್, ತಹಶೀಲ್ದಾರ್ ತಿಪ್ಪೂರಾವ್, ಮುಖಂಡರಾದ ಕೆ.ಹಾಲಪ್ಪ, ಕೆಂಗಟ್ಟೆ ಲಕ್ಷ್ಮಣ್, ಕುಂಬಾರ ಸಮಾಜದ ಅಧ್ಯಕ್ಷ ಶಿವರುದ್ರಪ್ಪ ಇದ್ದರು.