ಬೆಂಗಳೂರು (ಪಿಟಿಐ): ಜನತಾದಳ (ಜಾತ್ಯತೀತ) ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ ಅವರು ಕೆ.ಆರ್.ಪುರಂನ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಬುಧವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಚಿತ್ರದುರ್ಗದ ಹಿರಿಯೂರು ಕೃಷ್ಣಪ್ಪ ಅವರ ಹುಟ್ಟೂರು.
ಟ್ರೇಡ್ ಯೂನಿಯನ್ ಮುಖಂಡರಾಗಿದ್ದ ಕೃಷ್ಣಪ್ಪ ಅವರು 1985ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ವರ್ತೂರು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಎಂಟು ವರ್ಷಗಳ ಕಾಲ ಸಚಿವರಾಗಿದ್ದ ಅವರು, ತೋಟಗಾರಿಕೆ, ಪಶು ಸಂಗೋಪನೆ, ಸಕ್ಕರೆ ಹಾಗೂ ಸಮಾಜ ಕಲ್ಯಾಣ ಖಾತೆಗಳನ್ನು ನಿಭಾಯಿಸಿದ್ದರು.
ಸುಮಾರು 30 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ದ ಕೃಷ್ಣಪ್ಪ ಅವರು , 2013ರ ರಾಜ್ಯ ವಿಧಾನಸಭೆಯ ವೇಳೆ ಟಿಕೆಟ್ ನಿರಾಕರಿಸಿದ್ದರಿಂದ ಜೆಡಿಎಸ್ ಸೇರಿದ್ದರು. ಕಳೆದ ಸೆಪ್ಟಂಬರ್ ವೇಳೆಗೆ ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಜೊತೆಗೆ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿಯೂ ಅವರು ಕಣಕ್ಕಿಳಿದ್ದರು.