ಬೆಂಗಳೂರು: ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಬಿ.ಬಿ.ಕಲಿವಾಳ ಅವರನ್ನು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಲಾಗಿದೆ.
ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ಕಚೇರಿ ಶನಿವಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ.
ಸಾಹಿತಿ ಪ್ರೊ ಯು.ಆರ್.ಅನಂತಮೂರ್ತಿ ಅಧ್ಯಕ್ಷತೆಯ ಶೋಧನಾ ಸಮಿತಿ ಇದೇ ಮೊದಲ ಸಲ ಸಂದರ್ಶನದ ಮೂಲಕ ಕಲಿವಾಳ, ಬೆಂಗಳೂರು ವಿವಿಯ ಪ್ರೊ ಎಲ್.ಗೋಮತಿದೇವಿ ಮತ್ತು ಡಾ.ಜನಾರ್ದನಂ ಅವರ ಹೆಸರನ್ನು ಕುಲಪತಿ ಸ್ಥಾನಕ್ಕೆ ಶಿಫಾರಸು ಮಾಡಿತ್ತು.
ನಿಯಮ ಪ್ರಕಾರ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಈ ಮೂವರಲ್ಲಿ ಒಬ್ಬರನ್ನು ನೇಮಕ ಮಾಡಬೇಕು. ಆದರೆ, ಈ ವಿಷಯದಲ್ಲಿ ಸರ್ಕಾರದ ಮಾತು ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದ ಗೋಮತಿದೇವಿ ಅವರನ್ನು ನೇಮಕ ಮಾಡುವಂತೆ ರಾಜ್ಯಪಾಲರಿಗೆ ಸಲಹೆ ಮಾಡಿದ್ದರು ಎನ್ನಲಾಗಿದೆ.
ಅನಂತಮೂರ್ತಿ ಅಸಮಾಧಾನ
ಕಲಿವಾಳ ನೇಮಕಕ್ಕೆ ಅನಂತಮೂರ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಈ ಆಯ್ಕೆ ನನಗೆ ಇಷ್ಟವಾಗಿಲ್ಲ. ಗೋಮತಿದೇವಿ ಅವರನ್ನೇ ಕುಲಪತಿಯಾಗಿ ನೇಮಕ ಮಾಡಬೇಕಾಗಿತ್ತು. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿದ ನಂತರ ಹೆಚ್ಚಿನ ವಿವರ ನೀಡುತ್ತೇನೆ’ ಎಂದರು.