ಶಿವಮೊಗ್ಗ: ತೀರ್ಥಹಳ್ಳಿಯ ಶಾಲಾ ಬಾಲಕಿ ನಂದಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ಅಧಿ ಕಾರಿಗಳ ತಂಡ ಕೆಲವು ಮಹತ್ವದ ಮಾಹಿತಿ ಕಲೆ ಹಾಕಿದೆ.
ಮೊದಲ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿಕೊಂಡ ಪೊಲೀಸರು, ನಂದಿತಾ ಪೋಷಕರು ಹೆಸರಿಸಿದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಅವರ ಮೊಬೈಲ್ ಕರೆಗ ಳನ್ನು ಪರಿಶೀಲಿಸಿದ್ದಾರೆ. ಘಟನೆಯಂದು, ಅಂದರೆ ನಂದಿತಾಳನ್ನು ಆನಂದಗಿರಿ ಗುಡ್ಡಕ್ಕೆ ಅಪಹರಿಸಿ ಕೊಂಡು ಹೋಗಿದ್ದರು ಎಂದು ಪೋಷಕರು ಸಂಶಯ ವ್ಯಕ್ತಪಡಿಸಿದ ಮೂವರಲ್ಲಿ ಇಬ್ಬರು ಘಟನೆ ನಡೆದ ದಿನ ಆ ಸ್ಥಳದಲ್ಲೇ ಇರಲಿಲ್ಲ ಎಂಬ ಮಾಹಿತಿ ತನಿಖೆಯ ವೇಳೆ ಅಧಿಕಾರಿಗಳಿಗೆ ದೊರೆತಿದೆ.
ಹಾಗಾಗಿ, ಮುಖ್ಯ ಆರೋಪಿ ಎಂದು ಶಂಕಿಸಲಾಗಿ ರುವ ಯುವಕನಿಂದ ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಸಿಐಡಿ ಅಧಿಕಾ ರಿಗಳು ಮುಂದಾಗಿದ್ದಾರೆ.
ಅಲ್ಲದೇ, ಈ ಪ್ರಕರಣದಲ್ಲಿ ಪೋಷಕರ ಪಾತ್ರದ ಬಗ್ಗೆಯೂ ಹೆಚ್ಚಿನ ವಿಚಾರಣೆ ಕೈಗೊಂಡಿದ್ದು, ಪೋಷಕರು ದೂರು ನೀಡುವುದಕ್ಕೂ ಮುನ್ನ ಪ್ರಕರಣ ನಿರ್ವಹಿಸಿದ ರೀತಿ, ಅವರ ನಡವಳಿಕೆ, ಸಾರ್ವಜನಿಕವಾಗಿ ನೀಡಿದ ವ್ಯತಿರಿಕ್ತ ಹೇಳಿಕೆಗಳ ಆಧಾರದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಂದಿತಾ ತಾಯಿ ಹಾಗೂ ತಂದೆ ಯನ್ನು ಅವರ ಮನೆಯಲ್ಲೇ ಪ್ರತ್ಯೇಕವಾಗಿ ಒಂದು ತಾಸಿಗೂ ಹೆಚ್ಚು ಸಮಯ ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆಯ ಶಾಲಾ ಸಹಪಾಠಿಗಳು, ಶಿಕ್ಷಕರಿಂದಲೂ ವಿಷಯ ಸಂಗ್ರಹಿಸಿದ್ದಾರೆ.
ನಂದಿತಾಳದ್ದೇ ಕೈ ಬರಹ?
ನಂದಿತಾ ಸಾವಿಗೂ ಮುನ್ನ ಬರೆದಿದ್ದಾಳೆ ಎನ್ನಲಾದ ಪತ್ರದಲ್ಲಿ ಇರುವುದು ಆಕೆಯ ಬರವಣಿಗೆ ಎಂದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯ ಖಚಿತ ಪಡಿಸಿದೆ. ಅವಳು ಅಂತಹ ಮನಸ್ಥಿತಿ ತಲುಪಲು ‘ಅಪಹರಣ’ ಕಾರಣವೇ, ಅದರ ಹಿಂದೆ ಯಾರಿದ್ದಾರೆ ಎನ್ನುವ ಅಂಶದ ಬಗ್ಗೆ ಈಗ ಗಮನ ಕೇಂದ್ರೀಕರಿಸಲಾಗುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಆತ್ಮಹತ್ಯೆ ಪತ್ರ ನಂದಿತಾಳದ್ದಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಒಪ್ಪುವುದಿಲ್ಲ ಎಂದು ನಂದಿತಾ ತಂದೆ ಟಿ.ಜಿ.ಕೃಷ್ಣ ಪುನರುಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.