ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸ್ತಿಕರನ್ನು ಹೊರಗಿಟ್ಟರೆ ಸಾಂಸ್ಕೃತಿಕ ಜೀವನ ಬರಡು

ದಸರಾಕ್ಕೆ ಗಿರೀಶ ಕಾರ್ನಾಡ ಚಾಲನೆ
Last Updated 25 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ‘ಸಮಾಜದಲ್ಲಿ ನಾಸ್ತಿಕರಿಗೆ ಪಾಲು ಕೊಡಬಾರದು ಎನ್ನುವುದಾದರೆ ನಮ್ಮ ಸಾಂಸ್ಕೃತಿಕ ಜೀವನ ಬಡವಾಗು­ತ್ತದೆ’ ಎಂದು ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಕಳವಳ ವ್ಯಕ್ತಪಡಿಸಿದರು.

ಇಲ್ಲಿಯ ಚಾಮುಂಡಿಬೆಟ್ಟದಲ್ಲಿ ಗುರುವಾರ ನಾಡದೇವತೆ ಚಾಮುಂ­ಡೇ­ಶ್ವರಿ ದೇವಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಮೈಸೂರು ದಸರಾ ಉದ್ಘಾ­ಟಿಸಿ ಅವರು ಮಾತನಾಡಿದರು.

‘ಈ ಬಾರಿಯ ದಸರಾವನ್ನು ನಾನು ಉದ್ಘಾಟಿಸುತ್ತೇನೆ ಎಂದು ಮುಖ್ಯಮಂತ್ರಿ ಅವರು ಪ್ರಕಟಿಸಿದಾಗ, ನಾಸ್ತಿಕನಾ­ಗಿರುವ ವ್ಯಕ್ತಿ ಈ ಉತ್ಸವದಲ್ಲಿ ಭಾಗಿ­ಯಾಗಬಾರದು ಎನ್ನುವ ಚರ್ಚೆ ನಡೆಯಿತು. ಇದು ಮೊದಲ ಬಾರಿ ನಡೆದ ಚರ್ಚೆಯಲ್ಲ. ಹಾಗೆ ಆಪಾದಿಸಿದ­ವರಿಗೆ ನಾಸ್ತಿಕ ಶಬ್ದದ ಅರ್ಥ ಗೊತ್ತಿಲ್ಲ. ನಾಸ್ತಿಕ ಎಂದರೆ ದೇವರನ್ನು ಅಲ್ಲಗಳೆ­ಯುವವ, ದೇವರು ಬೇಡ ಎನ್ನುವವ ಎಂಬುದು ಈಚೆಗೆ ಬೆಳೆದ ಅರ್ಥ. ನಮ್ಮ ದರ್ಶನಗಳಲ್ಲಿ ನಾಸ್ತಿಕ ಎಂದರೆ ಚಾತುರ್ವ­ರ್ಣವನ್ನು ಒಪ್ಪದ­ವರು ಮತ್ತು ವೇದಗಳನ್ನು ಅಪೌರು­ಷೇಯ ಎಂದು ನಂಬದವರು ಎಂಬ ಅರ್ಥ’ ಎಂದರು.

‘ಹೀಗಾಗಿ, ಚಾತುರ್ವರ್ಣ ಅಲ್ಲಗಳೆ­ಯುವ ನನ್ನನ್ನು ನಾಸ್ತಿಕ ಎಂದರೆ ಒಪ್ಪಿಕೊಳ್ಳುವೆ. ಆದರೆ, ಆಪಾದಿಸು­ವವರ ವರ್ಗೀಕರಣದ ಪ್ರಕಾರ ಎಲ್ಲರೂ ನಾಸ್ತಿಕರೇ. ಜೈನರು, ಬೌದ್ಧರು, ಚಾರ್ವಾಕರು ಕೂಡ ನಾಸ್ತಿಕರು. ಹೀಗೆ ನಾಸ್ತಿಕರನ್ನು ಸಂಸ್ಕೃತಿಯಿಂದ ಹೊರ­ಗಿಟ್ಟರೆ ಪಂಪ, ರನ್ನ, ಜನ್ನ ಎಲ್ಲರನ್ನೂ ಹೊರಗಿಡಬೇಕಾಗುತ್ತದೆ. ಬೌದ್ಧ ಧರ್ಮ­ದಿಂದ ನಮಗೆ ಸಿಕ್ಕ ಚೈತನ್ಯ ಕೂಡಾ ಹೊರಗಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ದೇವರನ್ನು ಅಲ್ಲಗಳೆಯುವ ವ್ಯಕ್ತಿ ಸಂಸ್ಕೃತದಲ್ಲಿ ನಾಸ್ತಿಕ ಅಲ್ಲ, ನಿರೀಶ್ವರ. ಈಶ್ವರನನ್ನು ಅಲ್ಲಗಳೆಯುವವನು ನಿರೀಶ್ವರ­ವಾದಿ. ಈ ವಾದ ಹಿಂದೆಯೂ ನಮ್ಮಲ್ಲಿ ಇತ್ತು. ಆಸ್ತಿಕ ಸಂಪ್ರದಾಯ­ಗಳಲ್ಲಿ ಅನೇಕರು ನಿರೀಶ್ವರವಾದಿ­ಗಳಿದ್ದರು. ಅವರು ಮೀಮಾಂಸಕರು. ನಮಗೆ ದೇವರೇ ಬೇಡ. ಇಂದ್ರ, ವರುಣ, ವಾಯು–ಇವುಗಳಿಗೆ ವಿಗ್ರಹ ಬೇಕಿಲ್ಲ ಎಂದು ಪ್ರತಿಪಾದಿಸಿದರು.

ನಿರೀಶ್ವರರು ನಾಸ್ತಿಕ ಸಂಪ್ರದಾಯದ ಜತೆಗೆ ದೇವರನ್ನು ಅಲ್ಲಗಳೆಯುವವರು. ಹೀಗಿರುವ ನಮ್ಮ ಸಾಂಸ್ಕೃತಿಕ ಸಂಪ್ರದಾಯ ಸುಲಭವಾದುದಲ್ಲ, ಸರಳವಾದುದಲ್ಲ. ಇದು ಹೊರಗಿಡುವ, ಒಳಗಿಡುವ ಪ್ರಶ್ನೆಯಲ್ಲ. ಇದು ಚರ್ಚೆಯಿಂದ ಬೆಳೆದುದು. ಹೀಗಾಗಿ, ನನ್ನ ವಿರುದ್ಧ ಪ್ರತಿಭಟಿಸುವವರನ್ನು ಪೊಲೀಸ್‌ ವ್ಯಾನಿನಲ್ಲಿ ಕಳುಹಿಸಬೇ­ಕಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಮಾತನಾ­ಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಪ್ರತಿಭಟನೆಗೆ ಅವಕಾಶ ಕೊಡಬೇಕಿತ್ತು. ಜತೆಗೆ, ನನಗೆ ಮಾತನಾಡಲೂ ಅವ­ಕಾಶ ಕೊಡಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ನಾಸ್ತಿಕರ ಕುರಿತು ಮಾತನಾಡು­ವಾಗ ಮಹಾಭಾರತ ನೆನಪಾಗುತ್ತದೆ. ಕುರುಕ್ಷೇತ್ರ­ದಲ್ಲಿ ಗೆದ್ದು ಬಂದ ಯುಧಿಷ್ಠಿರನಿಗೆ ಚಾರ್ವಾಕ ಕೇಳುತ್ತಾನೆ; ಇಷ್ಟೆಲ್ಲದರಿಂದ ಏನು ಸಾಧಿಸಿದೆ? ಲಕ್ಷಾಂತರ ಸೈನಿಕರು ಸತ್ತಿದ್ದಾರೆ, ಲಕ್ಷಾಂತರ ವಿಧವೆಯರು, ಮಕ್ಕಳು ಅಳುತ್ತಿದ್ದಾರೆ. ಇದು ನಿನ್ನ ಜೀವನದ ಶ್ರೇಯಸ್ಸೇ ಎಂದು ಕೇಳುತ್ತಾನೆ. ಆಗ ಚಾರ್ವಾಕ­ನನ್ನು ಕೊಂದು ಹಾಕಲಾ­ಗುತ್ತದೆ. ಇದು ಸೂಕ್ಷ್ಮವಾದುದು. ಹೀಗಾಗಿ, ಇಂದಿನ ಸಮಾಜದಲ್ಲಿ ನಾಸ್ತಿಕರಿಗೆ ನೈತಿಕ ನೆಲೆ ಬೇಕು. ಪ್ರಶ್ನಿಸುವವರು ನೈತಿಕ ನೆಲೆ ಮೇಲೆ ನಿಂತು ಪ್ರಶ್ನಿಸಬೇಕು. ಆದರೆ, 25 ವರ್ಷಗಳಿಂದ ಅಂಧಪ್ರಜ್ಞೆ ಬೆಳೆಯುತ್ತಿದೆ, ಅಂಧವಿಶ್ವಾಸ ಹೆಚ್ಚುತ್ತಿರುವುದನ್ನು ಕಂಡಾಗ ಗಾಬರಿಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವಾಸ್ತು, ಜ್ಯೋತಿಷ ಇವೆಲ್ಲ ನಮ್ಮ ಸಂಪ್ರದಾಯಗಳು. ಇವು ಸಂಪ್ರದಾಯ­ಗಳಾಗಿ ಬೆಳೆದು ಬಂದ ಬಗೆ ಕುರಿತು ಅಭ್ಯಾಸ ಮಾಡಬಹುದು. ಆದರೆ, ಶಾಸ್ತ್ರವೆಂದು, ವಿಜ್ಞಾನವೆಂದು ಕಲಿಸು­ವುದು ಎಷ್ಟು ಸರಿ? ಮಂಗಳ ಗ್ರಹಕ್ಕೆ ನೌಕೆ ಕಳಿಸುವ ಈ ಕಾಲದಲ್ಲಿ ನಮಗೆ ಅವು ಅಗತ್ಯವೇ? ಇದಕ್ಕಾಗಿ ನಮಗೆ ಚಾರ್ವಾಕರು, ಲೋಕಾಯತರು ಬೇಕು. ಚಾರ್ವಾಕರಿಗೆ ಲೋಕಾಯತ ಎನ್ನು­ತ್ತಾರೆ. ಲೋಕಾಯತ ಎಂದರೆ ಜನರಲ್ಲಿ ಒಂದುಗೂಡಿರುವವನು, ಜನರಲ್ಲಿ ಜೀವಂತ­ವಾಗಿರುವವನು. ಇಂತಹ ಲೋಕಾ­ಯತರು ಹೆಚ್ಚಲಿ, ಅವರೆಲ್ಲ ಸಮಾಜಕ್ಕೆ ದರ್ಶನ ನೀಡಲಿ’ ಎಂದು ಸಲಹೆ ನೀಡಿದರು.

ಮಾನವತಾವಾದಿಗಳಾಗೋಣ; ಸಿಎಂ
‘ಆಸ್ತಿಕ, ನಾಸ್ತಿಕ, ವಿಚಾರವಾದಿ, ಸಂಪ್ರದಾಯವಾ­ದಿ­­ಗಿಂತ ಮಾನವತಾ­ವಾದಿಗಳಾಗೋಣ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಮನುಷ್ಯರಾಗೋಣ’ ಎಂದು ಸಮಾರಂಭದಲ್ಲಿ ಉಪಸ್ಥಿತ­ರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

‘ಹುಟ್ಟುವಾಗ ಅರ್ಜಿ ಹಾಕಿ ಹುಟ್ಟು­ವುದಿಲ್ಲ. ಹಾಗೆ ಅರ್ಜಿ ಹಾಕು­ವು­ದಿದ್ದರೆ ಮೇಲಿನ ಜಾತಿ ಕೊಡಿ ಎಂದು ಕೇಳು­ತ್ತಿದ್ದೆವು. ಹುಟ್ಟು ಆಕ­ಸ್ಮಿಕ. ಆದರೆ, ಸಮಾಜಮುಖಿಯಾಗಿ ಬಾಳ­ಬೇಕು. ನಮ್ಮ ಜನರನ್ನು ಗೌರ­ವಿಸಿ, ವಿಶ್ವಾಸ­ದಿಂದ ಕಾಣಬೇಕು’ ಎಂದರು.

‘ನಾನು ಕೂಡಾ ನಾಸ್ತಿಕ. ಪೂಜೆ ಮಾಡುವುದಿಲ್ಲ. ಮನೆಯಲ್ಲಿ ಪತ್ನಿ, ಮಕ್ಕಳು ಪೂಜೆ ಮಾಡುತ್ತಾರೆ. ಮಂಗಳಾ­ರತಿ ತಂದರೆ ಸ್ವೀಕರಿಸುವೆ. ದೇವರು ಇಲ್ಲವೆಂದು ವಾದ ಮಾಡು­ವುದಿಲ್ಲ. ಜನರ ಭಾವನೆಗಳಿಗೆ ಧಕ್ಕೆ­ಯಾ­ಗದ ರೀತಿಯಲ್ಲಿ ನಡೆದು­ಕೊಳ್ಳ­ಬೇಕು. ಆದರೆ, ಗೊಡ್ಡು ಸಂಪ್ರದಾಯ, ಮೌಢ್ಯಗಳನ್ನು ವಿರೋಧಿಸ­ಬೇಕು. ಕೆಳ­ಜಾತಿಯಲ್ಲಿ ಹುಟ್ಟಿದೆ, ಬಡವನಾಗಿ ಹುಟ್ಟಿದೆ ಎನ್ನುವ ಕೊರಗು ಬೇಡ’ ಎಂದು ಕಿವಿಮಾತು ಹೇಳಿದರು.

‘ಕಳೆದ 404 ವರ್ಷಗಳಿಂದ ದಸರಾ ಅನೂ­ಚಾನವಾಗಿ ನಡೆದು­ಕೊಂಡು ಬರು­ತ್ತಿದೆ. ಜಾತಿ, ಧರ್ಮಕ್ಕೆ ಸೀಮಿತ­ವಾಗದ ಜಾತ್ಯತೀತವಾದ ನಾಡ­ಹಬ್ಬ. ನಾಡಿನ ಜನರಿಗೆ ಒಳ್ಳೆಯ­ದಾಗಲಿ, ದಸರಾ ಹಬ್ಬದ ಶುಭಾಶಯಗಳು’ ಎಂದು ಮುಖ್ಯಮಂತ್ರಿ ಶುಭ ಕೋರಿದರು.

ಧಾರವಾಡದಲ್ಲಿ ನಾಡಹಬ್ಬ
‘ನಾಡಹಬ್ಬ ಶಬ್ದ ಹುಟ್ಟಿದ್ದು ಧಾರ­ವಾಡದಲ್ಲಿ, ಮೈಸೂರಿನಲ್ಲಿ ಅಲ್ಲ’ ಎಂದು ಗಿರೀಶ ಕರ್ನಾಡ ಹೇಳಿದರು. ‘ಅದು 1926, ಧಾರವಾಡದಲ್ಲಿ ಚಿಂತ­ಕರು, ಗೆಳೆಯರ ಗುಂಪಿತ್ತು. ಅದರಲ್ಲಿ ಬೇಂದ್ರೆ, ಆಲೂರು ವೆಂಕಟ­ರಾಯರು, ಬೆಟಗೇರಿ ಕೃಷ್ಣಶರ್ಮ ಮೊದಲಾದವರಿದ್ದರು. ಅವರೆಲ್ಲ ನಾಡಹಬ್ಬ ಆಚರಿಸಿದರು.

ಇದಕ್ಕೆ ಮಹಾರಾಷ್ಟ್ರದಲ್ಲಿ ಜೋರಾಗಿ ನಡೆಯುತ್ತಿದ್ದ ಗಣೇಶ ಹಬ್ಬವೇ ಸ್ಫೂರ್ತಿ. ಆಗ ಕನ್ನಡಕ್ಕೆ ಬೆಲೆ ಇರಲಿಲ್ಲ. ಕನ್ನಡಕ್ಕೆ ಬೆಲೆ ಬರಬೇಕು, ಮೈಸೂರಿನ ದಸರಾಕ್ಕೆ ಸ್ಪಂದಿಸಬೇಕೆಂದು ಗೆಳೆಯರ ಗುಂಪು ನಾಡಹಬ್ಬ ಆಚರಿಸಿತು.

ಆ ಗೆಳೆಯರ ಗುಂಪಿನ ಒಡನಾಟ ನನಗಿತ್ತು. ಅವರು ನಡೆಸಿದ ಉತ್ಸವದಲ್ಲಿ ಭಾಗವಹಿ­ಸುವುದು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಬೆರೆತು ಬೆಳೆದಿರುವೆ. ಈಗ ಮೈಸೂರು ದಸರಾ ಉದ್ಘಾಟನೆಗೆ ಬಂದು ನಿಂತಿರುವೆ’ ಎಂದು ಖುಷಿಯಾಗಿ ಹೇಳಿದರು.

ಜೀವನದ ಅದ್ಭುತ ಕ್ಷಣ
‘ನನ್ನ ಜೀವನದ ಅದ್ಭುತ­ವಾದ ಕ್ಷಣವಿದು. ಬೆಳೆ­ದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಾಗಿದ್ದ­ರಿಂದ ಮೈಸೂರು ನಮಗೆ ದೂರ. ಆದರೆ, ಕರ್ನಾ­ಟಕ ಸಂಸ್ಕೃತಿಯಲ್ಲಿ ಉತ್ತುಂ­ಗ­­ವಾದ ಕೊಡುಗೆ ಮೈಸೂರಿ­ನದು’ ಎಂದು ಗಿರೀಶ ಕಾರ್ನಾಡ ಶ್ಲಾಘಿಸಿದರು.

ಶಿರಸಿಯ ಮಾರಿಕಾಂಬೆ ಸನ್ನಿಧಾನ­ದಲ್ಲಿ ಬೆಳೆದೆ. ಅದು 1950ರ ಹೊತ್ತು . ಮಹಾತ್ಮ ಗಾಂಧಿ ಅವರ ಅಹಿಂಸಾ ಚಳವಳಿ ಜೋರಾಗಿತ್ತು. ಹೀಗಾಗಿ, ಶಿರಸಿಯಲ್ಲಿ ಆಗ ನಡೆದ ಮಾರಿಕಾಂಬೆ ಜಾತ್ರೆಯಲ್ಲಿ ಕೋಣ­ವನ್ನು ಬಲಿ ಕೊಡಲಿಲ್ಲ. ಅಲ್ಲಿದ್ದ ಕೋಣ ಅದ್ಭುತವಾಗಿ ಬೆಳೆಯುತ್ತಿತ್ತು. ಕರಿಯ ಬಣ್ಣದ ಮಹಿಷನನ್ನು ನೋಡಿ­ದಾಗ ಬೆರಗಾಗುತ್ತಿತ್ತು. ಇದೆಲ್ಲ ಮೈಸೂರಿನ ಮಹಿಷಮರ್ಧಿನಿ ನೋಡಿ­ದಾಗ ಬಾಲ್ಯದ ದಿನಗಳು ನೆನಪಾದವು.

1956ರಲ್ಲಿ ಮೈಸೂ­ರಿಗೆ ಬಂದಿದ್ದೆ. ಅದೇ ವರ್ಷ ಕರ್ನಾಟಕದ ಏಕೀಕರಣ­ವಾಗಿತ್ತು. ಹೀಗಾಗಿ, ದಸರಾ ನಡೆಯುವುದಿಲ್ಲ ಎನ್ನುವ ಮಾತಿತ್ತು. ಧಾರವಾಡ­ದಲ್ಲಿ ವಿದ್ಯಾರ್ಥಿಯಾಗಿದ್ದ ನಾನು, ಮೈಸೂರಿಗೆ ಬಂದು ಆ ವರ್ಷ ಅರಮನೆಯಲ್ಲಿ ನಡೆದ ದರ್ಬಾರ್‌ ನೋಡಿದ್ದೆ. ಜತೆಗೆ, ಜಂಬೂಸ­ವಾರಿ­ಯಲ್ಲಿ ಜಯ­ಚಾಮ­ರಾಜೇಂದ್ರ ಒಡೆ­ಯರ್ ಅವರನ್ನು ನೋಡಿದ್ದೆ. ಹೀಗೆ ಅರಮನೆ ಹಾಗೂ ದರ್ಬಾರ್‌ ನೋಡಿ ಖುಷಿಪಟ್ಟಿದ್ದೆ.

ದಸರಾ ಉದ್ಘಾಟಿಸಲು ಆಹ್ವಾನಿಸಿ­ದಾಗ ರಾಜವಂಶಸ್ಥೆ ಪ್ರಮೋದಾದೇವಿ ಅವರನ್ನು ಬೆಂಗಳೂ­ರಲ್ಲಿ ಭೇಟಿ­ಯಾಗಿದ್ದೆ. ಅವರು ವಿಷಾದಯೋಗ­ದಲ್ಲಿದ್ದರೂ ಪ್ರೀತಿ–ವಿಶ್ವಾಸ ತೋರಿಸಿ­ದರು. ಅದೊಂದು ಅವಿಸ್ಮರಣೀಯ ಅನುಭವ’ ಎಂದು ಸಂತೋಷದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT