ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಪರವಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ ಮೊದಲ ಬಜೆಟ್ನಲ್ಲಿ ದೊಡ್ಡ ಪ್ರಮಾಣದ ಸುಧಾರಣಾ ನೀತಿಗಳು ಪ್ರಕಟವಾಗಿಲ್ಲ. ಎಲ್ಲರನ್ನೂ ಸಂತೃಪ್ತಪಡಿಸುವ ಪ್ರಯತ್ನ ಎದ್ದುಕಾಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಂದಗತಿಯ ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರದಿಂದ ದೇಶದ ಆರ್ಥಿಕತೆ ಬಸವಳಿದಿದೆ. ತೊಂಬತ್ತರ ದಶಕದಲ್ಲಿ ಕುಸಿಯುತ್ತಿದ್ದ ಆರ್ಥಿಕ ವ್ಯವಸ್ಥೆಗೆ 1991ರ ಹೊಸ ಆರ್ಥಿಕ ನೀತಿ ಪುನಶ್ಚೇತನ ನೀಡಿತ್ತು. ಇದನ್ನು ಸರಿಗಟ್ಟುವಂತೆ ತೀವ್ರವಾದ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿರೀಕ್ಷೆಯ ಒತ್ತಡ ಹೊಸ ಸರ್ಕಾರದ ಮೇಲಿದೆ.
ಕಳೆದ 30 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನು ಏರಿರುವ ಸರ್ಕಾರದ ಮೇಲೆ ಇಂತಹ ಭಾರಿ ನಿರೀಕ್ಷೆ ಸಹಜವಾದುದೇ. ಸರ್ಕಾರವೇ ಆಶ್ವಾಸನೆ ನೀಡಿರುವ ‘ಒಳ್ಳೆಯ ದಿನ’ಗಳಿಗಾಗಿ (‘ಅಚ್ಛೆ ದಿನ್’) ಯೋಜನೆಗಳನ್ನು ಮುಂದಿಡುವಂತಹ ಸವಾಲು ಇದು. ಉದ್ಯಮಕ್ಕೆ ಸಹಕಾರಿಯಾಗುವ ನೀತಿಗಳನ್ನು ಸೃಷ್ಟಿಸುವ ಗುರಿಯೇನೊ ಬಜೆಟ್ನಲ್ಲಿ ಸ್ಪಷ್ಟವಾಗಿಯೇ ಇದೆ. ಆರ್ಥಿಕತೆಯ ಪುನರ್ ರಚನೆಗಾಗಿ ಸುಧಾರಣೆಯ ಆಶಯ ಕೂಡ ವ್ಯಕ್ತವಾಗಿದೆ. ಆದರೆ, ಹಿಂದಿನ ಯುಪಿಎ ಸರ್ಕಾರದ ಬಳುವಳಿಯಾಗಿರುವ ಶೇ 4.1ರ ವಿತ್ತೀಯ ಕೊರತೆಗೇ ಈ ವರ್ಷ ಬದ್ಧವಾಗಿರುವುದಾಗಿ ಸರ್ಕಾರ ಹೇಳಿದೆ. ಈ ಕೊರತೆಯನ್ನು ಇನ್ನಷ್ಟು ಇಳಿಸಬಹುದಾದ ದಿಟ್ಟತನವನ್ನು ಸರ್ಕಾರಕ್ಕೆ ಪ್ರದರ್ಶಿಸಲಾಗಿಲ್ಲ. ಇದಕ್ಕಾಗಿ ಸಬ್ಸಿಡಿ ಕಡಿತ-ದಂತಹ ‘ಕಹಿ ಗುಳಿಗೆ’ ಗಳನ್ನು ಅಧಿಕಾರದ ಮೊದಲ ವರ್ಷದಲ್ಲೇ ನೀಡುವುದಕ್ಕೆ ಮುಂದಾಗದ ಸರ್ಕಾರ, ಸಮತೋಲನದ ಕಸರತ್ತನ್ನು ಮಾಡಿರುವುದು ಸ್ಪಷ್ಟ. ಆದರೆ, ಮುಂದಿನ ವರ್ಷಕ್ಕೆ ವಿತ್ತೀಯ ಕೊರತೆಯನ್ನು
ಶೇ 3.6ಕ್ಕೆ ಇಳಿಸಿ 2016–17ರ ವೇಳೆಗೆ ಶೇ 3ಕ್ಕೆ ಇಳಿಸುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬಂಥ ಸರ್ಕಾರದ ಘೋಷವಾಕ್ಯವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ‘ವೆಚ್ಚ ನಿರ್ವಹಣಾ ಆಯೋಗ’ವನ್ನು ರಚಿಸುವುದಾಗಿ ಬಜೆಟ್ನಲ್ಲಿ ಘೋಷಿಸಿರುವುದು ಹೊಸ ಹೆಜ್ಜೆ. ಖರ್ಚು ಸುಧಾರಣೆಯ ಎಲ್ಲಾ ಆಯಾಮಗಳನ್ನೂ ಇದು ಪರಿಶೀಲಿಸಲಿದೆ. ಬಡಜನರಿಗೆ ಪೂರ್ಣ ರಕ್ಷಣೆ ಒದಗಿಸುತ್ತಲೇ ಸಬ್ಸಿಡಿ ವ್ಯವಸ್ಥೆಯ ಪುನರ್ ಪರಿಶೀಲನೆಯನ್ನು ಈ ಆಯೋಗ ನಡೆಸಲಿದೆ.
ರಕ್ಷಣೆ ಹಾಗೂ ವಿಮೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಮಿತಿಯನ್ನು ಶೇ 26ರಿಂದ ಶೇ 49ಕ್ಕೆ ಹೆಚ್ಚಿಸಿರುವುದಷ್ಟೇ ಆರ್ಥಿಕ ಸುಧಾರಣೆ ಕ್ರಮಗಳಲ್ಲಿ ಮುಖ್ಯವಾದದ್ದು. ಜೊತೆಗೆ ಮೂಲ ಸೌಕರ್ಯ ಹಾಗೂ ತಯಾರಿಕಾ ವಲಯಕ್ಕೂ ಉತ್ತೇಜನ ಕ್ರಮಗಳು ಪ್ರಕಟವಾಗಿರುವುದು ಉದ್ಯಮಶೀಲತೆಗೆ ಹೊಸ ಚೈತನ್ಯ ತುಂಬುವಂತಹದ್ದು. ಮಧ್ಯಮವರ್ಗದ ಓಲೈಕೆಗೆ ಆದಾಯ ತೆರಿಗೆ ರಿಯಾಯಿತಿಗಳು, ವಿವಿಧ ರೀತಿಯ ಉಳಿತಾಯ ಯೋಜನೆಗಳು ಬಜೆಟ್ನಲ್ಲಿ ಸ್ಥಾನ ಪಡೆದುಕೊಂಡಿವೆ. ತೆರಿಗೆ ವ್ಯವಸ್ಥೆ ಸರಳಗೊಳಿಸುವ ಉದ್ದೇಶ ಸ್ವಾಗತಾರ್ಹವಾದದ್ದು. ಮಹಿಳೆಗೆ ಸಂಬಂಧಿಸಿದಂತೆ ಅಂತಹ ರಚನಾತ್ಮಕವಾದ ಯೋಜನೆಗಳೇನೂ ಇಲ್ಲ. ಸುಮಾರು 29 ಬಿಡಿಬಿಡಿ ಯೋಜನೆಗಳಿಗೆ ರೂ100 ಕೋಟಿ ಹಣ ಹಂಚಿಬಿಟ್ಟಿರುವುದು ಯೋಜನೆಗಳ ಕುರಿತಾಗಿ ಸ್ಪಷ್ಟ ಗುರಿಯ ಕೊರತೆಯನ್ನು ಬಿಂಬಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.